ಜಗನ್ ರೆಡ್ಡಿ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್
ನವದೆಹಲಿ, ಡಿಸೆಂಬರ್ 1: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ಸುಪ್ರೀಂಕೋರ್ಟ್ ನಿರಾಳತೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದ ಪ್ರಕರಣದಲ್ಲಿ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆದುಹಾಕಬೇಕೆಂಬ ಬೇಡಿಕೆಯ ಅರ್ಜಿಗಳನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಸುಪ್ರೀಂಕೋರ್ಟ್ನ ಹಾಲಿ ನ್ಯಾಯಮೂರ್ತಿ ಎನ್ವಿ ರಮಣ ವಿರುದ್ಧ ಆರೋಪಗಳನ್ನು ಮಾಡಿ ಜಗನ್ ಮೋಹನ್ ರೆಡ್ಡಿ ಅವರು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರಿಗೆ ಬರೆದಿದ್ದ ಪತ್ರ ಬಹಿರಂಗವಾಗಿತ್ತು. ಹೀಗಾಗಿ ಜಗನ್ ಅವರನ್ನು ಸಿಎಂ ಸ್ಥಾನದಿಂದ ಕಿತ್ತು ಹಾಕಬೇಕು ಮತ್ತು ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಅನೇಕ ಅರ್ಜಿಗಳು ಸಲ್ಲಿಕೆಯಾಗಿದ್ದವು.
ಜಗನ್ ಮೋಹನ್ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಉದಯ್ ಲಲಿತ್
ಈ ಪ್ರಕರಣದಲ್ಲಿ ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂಕೋರ್ಟ್, ತಮಗೆ ಏನು ಬೇಕು ಎಂಬುದು ಸ್ವತಃ ಅರ್ಜಿದಾರರಿಗೇ ತಿಳಿದಿಲ್ಲ ಎಂದು ಹೇಳಿತು.
'ಈಗಾಗಲೇ ಸಾರ್ವಜನಿಕವಾಗಿ ಲಭ್ಯವಿರುವ ಪತ್ರದ ಬಗ್ಗೆ ಏನು ತನಿಖೆ ನಡೆಸಬೇಕು? ನೀವು ಪತ್ರಿಕೆಯಲ್ಲಿ ಏನನ್ನೋ ಓದಿದ್ದೀರಿ ಮತ್ತು ಎಲ್ಲ ರೀತಿಯ ಪ್ರಾರ್ಥನೆಗಳೊಂದಿಗೆ ಅರ್ಜಿ ಸಲ್ಲಿಸಿದ್ದೀರಿ' ಎಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಅರ್ಜಿದಾರರ ವಿರುದ್ಧ ಕಿಡಿಕಾರಿದರು.
ಆಂಧ್ರ ಸಿಎಂ ಸ್ಥಾನಕ್ಕೆ ಚ್ಯುತಿ?: ಜಗನ್ ಮೋಹನ್ ರೆಡ್ಡಿ ಭವಿಷ್ಯ ಇಂದು ನಿರ್ಧಾರ
ಅಮರಾವತಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಯಾವುದೇ ಹೇಳಿಕೆ ನೀಡದಂತೆ ನಿರ್ಬಂಧಿಸಬೇಕು ಎಂದು ಒಬ್ಬ ಅರ್ಜಿದಾರರು ಕೋರಿದ್ದರು. ಈ ನ್ಯಾಯಾಲಯ ಈಗಾಗಲೇ ಪ್ರಕರಣದ ಕುರಿತು ಆದೇಶ ನೀಡಿರುವಾಗ ಈ ಕೋರಿಕೆಯನ್ನು ಹೇಗೆ ಪರಿಗಣಿಸುವುದು? ಎಂದು ಕೋರ್ಟ್ ಪ್ರಶ್ನಿಸಿತು.
ಆದರೆ, ಈ ಅರ್ಜಿಯನ್ನು ಮತ್ತೊಂದು ಪೀಠದಲ್ಲಿ ಬಾಕಿ ಇರುವ ಪ್ರಕರಣಗಳೊಂದಿಗೆ ಸೇರ್ಪಡೆ ಮಾಡಿತು.