ಅಯೋಧ್ಯಾದಲ್ಲಿ ಮಸೀದಿ: ಟ್ರಸ್ಟಿಗೆ ಸರ್ಕಾರಿ ನಾಮನಿರ್ದೇಶನದ ಮನವಿ ತಿರಸ್ಕೃತ
ನವದೆಹಲಿ, ಡಿಸೆಂಬರ್ 4: ಅಯೋಧ್ಯಾದಲ್ಲಿ ಮಸೀದಿ ನಿರ್ಮಿಸುವ ಕಾರ್ಯಕ್ಕಾಗಿ ರಚಿಸಲಾಗಿರುವ 'ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್' ಟ್ರಸ್ಟ್ನಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡುವಂತೆ ಸೂಚನೆ ನೀಡಬೇಕೆಂಬ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಅಯೋಧ್ಯಾದಲ್ಲಿನ ವಿವಾದಿತ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿ 2019ರ ನವೆಂಬರ್ 9ರಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಹಾಗೆಯೇ ಉತ್ತರ ಪ್ರದೇಶದ ಪಟ್ಟಣವೊಂದರ ಸೂಕ್ತ ಸ್ಥಳದಲ್ಲಿ ಹೊಸ ಮಸೀದಿ ನಿರ್ಮಿಸಲು ಸುನ್ನಿ ವಕ್ಫ್ ಮಂಡಳಿಗೆ ಪರ್ಯಾಯವಾಗಿ ಐದು ಎಕರೆ ಜಾಗ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಪ್ರಕಟ, ಅಡ್ವಾಣಿಗೆ ಖುಲಾಸೆ
ಇಬ್ಬರು ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್ ಎಫ್ ನಾರಿಮನ್ ನೇತೃತ್ವದ ನ್ಯಾಯಪೀಠ ತಿರಸ್ಕರಿಸಿದೆ. ಖಾಸಗಿ ವ್ಯಕ್ತಿಗಳು ಮತ್ತು ರಾಜ್ಯ ಸುನ್ನಿ ವಕ್ಫ್ ಮಂಡಳಿಯ ಸದಸ್ಯರಲ್ಲದೆ ಹಣಕಾಸಿನ ಸೂಕ್ತ ನಿರ್ವಹಣೆಯನ್ನು ಖಾತರಿಪಡಿಸಿಕೊಳ್ಳಲು ಟ್ರಸ್ಟ್ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಕೂಡ ಇರಬೇಕು ಎಂದು ಅವರು ಹೇಳಿದ್ದರು.
ಮಸೀದಿ ನಿರ್ಮಾಣ, ಸಾಂಸ್ಕೃತಿಕ ಮತ್ತು ಸಂಶೋಧನಾ ಕೇಂದ್ರ, ಸಮುದಾಯ ಅಡುಗೆಮನೆ, ಆಸ್ಪತ್ರೆ ಮತ್ತು ಗ್ರಂಥಾಲಯವನ್ನು ಒಳಗೊಂಡ ಸಾರ್ವಜನಿಕ ಸವಲತ್ತಿನ ಸೌಕರ್ಯಗಳನ್ನು ಒಳಗೊಂಡಂತೆ ಐದು ಎಕರೆ ಜಾಗದಲ್ಲಿ ವಿವಿಧ ನಿರ್ಮಾಣ ಕಾರ್ಯಗಳನ್ನು ನಡೆಸಲು 'ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್' ಎಂಬ ಹೆಸರಿನ ಟ್ರಸ್ಟ್ ರಚಿಸಿರುವುದಾಗಿ ಸುನ್ನಿ ವಕ್ಫ್ ಮಂಡಳಿ 2020ರ ಜುಲೈ 29ರಂದು ಘೋಷಿಸಿತ್ತು.
ಕೇಂದ್ರ ಸರ್ಕಾರದಿಂದಲೇ ಟ್ರಸ್ಟ್ ರಚನೆಯಾಗಿರುವುದರಿಂದ ಸರ್ಕಾರದ ಯಾವುದೇ ಅಧಿಕಾರಿಯನ್ನು ನಾಮನಿರ್ದೇಶನ ಮಾಡುವುದಿಲ್ಲ ಎಂದು ಮಂಡಳಿ ತಿಳಿಸಿತ್ತು. ನೂರಾರು ಮಂದಿ ಇಸ್ಲಾಮಿಕ್ ಟ್ರಸ್ಟ್ನ ಜಾಗಕ್ಕೆ ಭೇಟಿ ನೀಡಲಿದ್ದಾರೆ. ಭಾರತ ಮತ್ತು ವಿದೇಶಗಳಿಂದಲೂ ಅದಕ್ಕೆ ದೇಣಿಗೆ ಹರಿದುಬರಲಿದೆ. ಹೀಗಾಗಿ ಟ್ರಸ್ಟ್ಗೆ ಬರುವ ಹಣ ಮತ್ತು ಅದರ ಆಸ್ತಿಯ ಸೂಕ್ತ ನಿರ್ವಹಣೆ ನಡೆಯಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಭೆಯಲ್ಲಿ ಪೇಜಾವರ ಶ್ರೀಗಳು ಭಾಗಿ
'ಹಣಕಾಸಿನ ನಿರ್ವಹಣೆಯಲ್ಲಿ ಯಾವುದೇ ಲೋಪ, ದುರ್ಬಳಕೆಯಾಗದಂತೆ ಖಾತರಿಪಡಿಸಿಕೊಳ್ಳುವ ಅಗತ್ಯವಿದೆ. ಜತೆಗೆ ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಲು ಟ್ರಸ್ಟ್ನ ಕಾರ್ಯಾಚರಣೆ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಎಲ್ಲ ಸಂಬಂಧಿತ ಮಾಹಿತಿಗಳು ಸಿಗಬೇಕು. ಇದು ಸಾರ್ವಜನಿಕ ಹಿತಾಸಕ್ತಿಯ ಸಂಗತಿಯಾಗಿದೆ' ಎಂದು ಅರ್ಜಿದಾರರು ವಾದಿಸಿದ್ದರು.