'ನೀವು ಕಪ್ಪು ಕೋಟ್ ಧರಿಸಿದ್ದೀರಿ ಎಂಬ ಮಾತ್ರಕ್ಕೆ..': ವಕೀಲನಿಗೆ ಸುಪ್ರೀಂ ದಂಡ
ನವದೆಹಲಿ, ಸೆಪ್ಟೆಂಬರ್ 14: ಬೋಗಸ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲು ಮಾಡುವುದರಿಂದ ವಕೀಲರನ್ನು ತಡೆಯಲು ಇದು ಸಮಯ ಎಂದು ಒತ್ತಿ ಹೇಳಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ, ಸಾವನಪ್ಪಿದ ವಕೀಲರ ಕುಟುಂಬಕ್ಕೆ ಪರಿಹಾರ ಕೇಳಿ ಅರ್ಜಿ ಸಲ್ಲಿಸಿದ್ದ ವಕೀಲನ ವಿರುದ್ದ ಟೀಕೆ ಮಾಡಿದ್ದಾರೆ. ಹಾಗೆಯೇ ಈ ಅರ್ಜಿಯನ್ನು ವಜಾ ಮಾಡಿ ಹತ್ತು ಸಾವಿರ ದಂಡವನ್ನು ವಕೀಲರಿಗೆ ವಿಧಿಸಿದ್ದಾರೆ.
ಕೋವಿಡ್ ಆಗಿರಲಿ ಅಥವಾ ಬೇರೆ ಯಾವುದೇ ಕಾರಣದಿಂದ ಆಗಿರಲಿ 60 ವರ್ಷಕ್ಕಿಂತ ಮೊದಲೇ ಸಾವನ್ನಪ್ಪಿದ ವಕೀಲರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಕೋರಿ ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಕೆ ಮಾಡಿದ್ದು, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
'ವಿಐಪಿ ರೋಗಿಯಂತೆ ನೋಡಲಾಗದು': ಸಿಖ್ ನರಮೇಧ ಪ್ರಕರಣ ಅಪರಾಧಿ ಸಜ್ಜನ್ ಜಾಮೀನು ತಿರಸ್ಕೃತ
ವಕೀಲ ಹಾಗೂ ಅರ್ಜಿದಾರರಾದ ಪ್ರದೀಪ್ ಕುಮಾರ್ ಯಾದವ್, "ಕೋವಿಡ್ ಆಗಿರಲಿ ಅಥವಾ ಬೇರೆ ಯಾವುದೇ ಕಾರಣದಿಂದ ಆಗಿರಲಿ 60 ವರ್ಷಕ್ಕಿಂತ ಮೊದಲೇ ಸಾವನ್ನಪ್ಪಿದ ವಕೀಲರ ಕುಟುಂಬಕ್ಕೆ ಸುಮಾರು 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು," ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ಹಾಗೆಯೇ "ಸರ್ಕಾರ ಈ ಕೋವಿಡ್ ಸಂದರ್ಭದಲ್ಲಿ ಬೇರೆ ಸಮುದಾಯಗಳಿಗೆ ಹಣಕಾಸು ಸಹಾಯ ಮಾಡುತ್ತಿದೆ," ಎಂದು ವಾದವನ್ನು ಮಾಡಿದ್ದರು.
ಈ ರೀತಿ 60 ವರ್ಷಕ್ಕಿಂತ ಮೊದಲೇ ಸಾವನ್ನಪ್ಪಿದ ಎಲ್ಲಾ ವಕೀಲರಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಕೋರಿರುವ ಪ್ರದೀಪ್ ಕುಮಾರ್ ಯಾದವ್ ವಿರುದ್ದ ಸುಪ್ರೀಂ ಕೋರ್ಟ್ನ ಡಿ ವೈ ಚಂದ್ರಚೂಡ, ವಿಕ್ರಮ್ ನಾಥ್, ಬಿ ವಿ ನಾಗರತ್ನರನ್ನು ಒಳಗೊಂಡ ನ್ಯಾಯ ಪೀಠ ವಾಗ್ದಾಳಿ ನಡೆಸಿದೆ. "ನೀವು ಕಪ್ಪು ಕೋಟ್ ಧರಿಸಿದ್ದೀರಿ ಎಂಬ ಮಾತ್ರಕ್ಕೆ ನಿಮ್ಮ ಈ ರೀತಿಯ ಅರ್ಜಿಗೆ ವಿನಾಯಿತಿ ನೀಡಲಾಗದು," ಎಂದು ಹೇಳಿ ಸುಪ್ರೀಂ ಕೋರ್ಟ್ ಸುಮಾರು ಹತ್ತು ಸಾವಿರ ದಂಡವನ್ನು ವಿಧಿಸಿದೆ.
ಸುಳ್ಳುಗಳನ್ನು ಬಹಿರಂಗ ಪಡಿಸುವುದು 'ಬುದ್ಧಿ ಜೀವಿ' ಗಳ ಕರ್ತವ್ಯ: ಸುಪ್ರೀಂ ನ್ಯಾಯಮೂರ್ತಿ
"ಈ ರೀತಿಯ ಬೋಗಸ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಕೀಲರು ಸಲ್ಲಿಸುವುದಕ್ಕೆ ನಾವು ತಡೆಯೊಡ್ಡಬೇಕಾದ ಸಮಯ ಈಗ ಬಂದಿದೆ. ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ನೀವು ಕಪ್ಪು ಕೋಟ್ ಧರಿಸಿದ್ದೀರಿ ಎಂಬ ಮಾತ್ರಕ್ಕೆ ನಿಮ್ಮ ಜೀವ ಇತರರಿಗಿಂತ ಬಲು ಅಮೂಲ್ಯವಾದುದು ಎಂದು ಅರ್ಥವಲ್ಲ," ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಖಡಕ್ ಆಗಿ ಹೇಳಿದ್ದಾರೆ.
"ಈ ರೀತಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಕೀಲರು ಸಲ್ಲಿಸುವುದು, ಪರಿಹಾರಕ್ಕಾಗಿ ನ್ಯಾಯಾಧೀಶರಲ್ಲಿ ಬೇಡಿಕೆ ಇಡುವುದು ಸರಿಯಲ್ಲ. ಇದಕ್ಕೆ ಅವಕಾಶವು ನೀಡಲಾಗದು. ಹಲವಾರು ಮಂದಿ ಸಾವನ್ನಪ್ಪಿದ್ದಾರೆ ಎಂಬುವುದು ನಿಮಗೆ ತಿಳಿದಿದೆಯೇ?. ನಿಮಗೆ ಇಲ್ಲಿ ಯಾವುದೇ ವಿನಾಯತಿಯನ್ನು ನೀಡಲಾಗದು," ಎಂದು ಹೇಳಿದ ನ್ಯಾಯಾಧೀಶ ಡಿ ವೈ ಚಂದ್ರಚೂಡ, ಪ್ರದೀಪ್ ಕುಮಾರ್ ಯಾದವ್ಗೆ ದಂಡವನ್ನು ವಿಧಿಸಿದೆ.
'ಮಾಧ್ಯಮ ವರದಿಯಲ್ಲಿ ಕೋಮು ಬಣ್ಣ ಸೃಷ್ಟಿ ದೇಶಕ್ಕೆ ಕೆಟ್ಟ ಹೆಸರು ತರಬಹುದು': ಸುಪ್ರೀಂ
ಇನ್ನು ಈ ಸಂದರ್ಭದಲ್ಲೇ ಪ್ರದೀಪ್ ಕುಮಾರ್ ಯಾದವ್, "ಎಲ್ಲಾ ಕೋರ್ಟ್ಗಳು ಕಾರ್ಯನಿರ್ವಹಣೆ ಮಾಡುತ್ತಿಲ್ಲ, ವಕೀಲರಿಗೆ ಉಂಟಾಗಿರುವ ಪ್ರಾಣ ಹಾನಿಯ ಹಾಗೂ ಕೋರ್ಟ್ ಸಿಬ್ಬಂದಿಗಳಿಗೆ ಉಂಟಾಗಿರುವ ಪ್ರಾಣ ಹಾನಿಯು ಭಾರೀ ಪರಿಣಾಮವನ್ನು ಉಂಟು ಮಾಡಿದೆ," ಎಂದು ವಾದ ಮಾಡಿದ್ದಾರೆ. "ತೀವ್ರವಾದ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದ ಮತ್ತು ಯಾವುದೇ ಸಹಾಯವಿಲ್ಲದೆ, ವಕೀಲರು ತಮ್ಮ ಜೀವನ ಸಾಗಿಸಲು ಇತರ ವೃತ್ತಿಗಳತ್ತ ಆಕರ್ಷಿತರಾಗುತ್ತಿದ್ದಾರೆ," ಎಂದು ಕೂಡಾ ವಕೀಲ ಪ್ರದೀಪ್ ಕುಮಾರ್ ಯಾದವ್ ಪ್ರತಿಪಾದಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳು ಆಗಸ್ಟ್ ಅಂತ್ಯದಿಂದ ಕೋರ್ಟ್ನಲ್ಲೇ ವಿಚಾರಣೆಯನ್ನು ಕೆಲವು ನಿರ್ಬಂಧನೆಗಳ ಜೊತೆಗೆ ಪುನರಾರಂಭಿಸಿವೆ. ಇನ್ನೊಂದೆಡೆ ಸುಪ್ರೀಂ ಕೋರ್ಟ್, ಕೋರ್ಟ್ನಲ್ಲಿ ಹಾಗೂ ವರ್ಚುವಲ್ ಆಗಿ ವಿಚಾರಣೆಯನ್ನು ನಡೆಸಲು ಆರಂಭ ಮಾಡಿದೆ.
(ಒನ್ ಇಂಡಿಯಾ ಸುದ್ದಿ)