ಪತ್ರಕರ್ತ ವಿನೋದ್ ದುವಾ ವಿರುದ್ಧದ ದೇಶದ್ರೋಹ ಪ್ರಕರಣವನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್
ನವದೆಹಲಿ, ಜೂನ್ 3: ಪತ್ರಕರ್ತ ವಿನೋದ್ ದುವಾ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಯೂಟ್ಯೂಬ್ ಚಾನೆಲ್ನಲ್ಲಿ ನಡೆಸಿದ ಕಾರ್ಯಕ್ರಮದ ವಿರುದ್ಧ ಹಿಮಾಚಲ ಪ್ರದೇಶ ಬಿಜೆಪಿಯ ಸ್ಥಳಿಯ ಮುಖಂಡ ವಿನೋದ್ ದುವಾ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಿದ್ದರು.
ಈ ಸಂದರ್ಭದಲ್ಲಿ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸುವಾಗ ಕೇದಾರ್ ಸಿಂಗ್ ತೀರ್ಪಿನ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸೆಕ್ಷನ್ 124 ಎ ಪ್ರಕರಣ ಅದರ ವ್ಯಾಪ್ತಿಗೆ ಅನುಗುಣವಾಗಿ ಇರಬೇಕು ಎಂದಿದೆ. ಕೇದಾರ ಸಿಂಗ್ ಪ್ರಕರಣದಲ್ಲಿ ಸಾರ್ವಜನಿಕ ಕ್ರಮಗಳು ಅಥವಾ ಸರ್ಕಾರದ ಕ್ರಮಗಳನ್ನು ಟೀಕಿಸಿದ ಕಾರಣಕ್ಕೆ ನಾಗರಿಕರ ಮೇಲೆ ದೇಶದ್ರೋಹ ಆರೋಪ ಹೊರಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ಲಸಿಕೆಗಳ ಪ್ರತಿ ವಿವರವನ್ನೂ ನೀಡಿ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ
ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ವಿನೀತ್ ಸರನ್ ಅವರ ಪೀಠ ಈ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಕಳೆದ ವರ್ಷ ಅಕ್ಟೋಬರ್ 6 ರಂದು ನಡೆದ ವಿಚಾರಣೆಯಲ್ಲಿ ದುವಾ, ಹಿಮಾಚಲ ಪ್ರದೇಶ ಸರ್ಕಾರ ಮತ್ತು ಪ್ರಕರಣದ ದೂರುದಾರರ ವಾದಗಳನ್ನು ಆಲಿಸಿದ ನಂತರ ಅರ್ಜಿಯ ತೀರ್ಪನ್ನು ಕಾಯ್ದಿರಿಸಿತ್ತು. ಇನ್ನು ಕಳೆದ ಜುಲೈ ತಿಂಗಳಿನಿಂದಲೂ ಪತ್ರಕರ್ತ ದುವಾ ಅವರಿಗೆ ಮುಂದಿನ ಆದೇಶದವರೆಗೂ ರಕ್ಷಣೆಯನ್ನು ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.
ಬಿಜೆಪಿಯ ಮಹಾಸು ಘಟಕದ ಅಧ್ಯಕ್ಷ ಅಜಯ್ ಶ್ಯಾಮ್ ನೀಡಿದ ದೂರಿನ ಆಧಾರದ ಮೇಲೆ ದುವಾ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ವಿನೋದ್ ದುವಾ ವಿರುದ್ಧ 124 ಎ (ದೇಶದ್ರೋಹ), ಸೇರಿದಂತೆ ಸೆಕ್ಷನ್ 268, 501 ಮತ್ತು 505ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಮಾರ್ಚ್ 30 ರಂದು ವಿನೋದ್ ದುವಾ ಅವರು ನಡೆಸಿದ 15 ನಿಮಷಗಳ ಯೂಟ್ಯೂಬ್ ಕಾರ್ಯಕ್ರಮವನ್ನು ಉಲ್ಲೇಖಿಸಿ ಈ ಪ್ರಕರಣವನ್ನು ದಾಖಲಿಸಲಾಗಿತ್ತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಚುನಾವಣೆಯಲ್ಲಿ ಮತಗಳಿಸಲು ಸಾವು ಹಾಗೂ ಭಯೋತ್ಪಾದನಾ ಕೃತ್ಯಗಳನ್ನು ಬಳಸಿದ್ದಾರೆ ಎಂದು ಪತ್ರಕರ್ತ ವಿನೋದ್ ದುವಾ ಆರೋಪಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.