ವಿದ್ಯುನ್ಮಾನ ಮಾಧ್ಯಮಗಳಿಗೆ ನಿಯಂತ್ರಣ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ
ನವದೆಹಲಿ, ನವೆಂಬರ್ 18: ಸುಳ್ಳು ಸುದ್ದಿಗಳನ್ನು ಹರಡುವ ವಿದ್ಯುನ್ಮಾನ ಮಾಧ್ಯಮಗಳಿಗೆ ಕಡಿವಾಣ ಹಾಕಲು ಸೂಕ್ತ ನಿಯಂತ್ರಣಾ ವ್ಯವಸ್ಥೆಯನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಕೋವಿಡ್ 19 ಸೋಂಕು ಭಾರತದಲ್ಲಿ ಹರಡುವ ಆರಂಭದ ಹಂತದಲ್ಲಿ ತಬ್ಲಿಘಿ ಜಮಾತ್ ಸಂಘಟನೆಯ ಸಮಾವೇಶದ ಕುರಿತಾದ ವರದಿಗಳಲ್ಲಿ ಕೋಮುದ್ವೇಷವನ್ನು ಹರಡಲಾಗಿದೆ ಎಂಬ ಮಾಧ್ಯಮದ ಒಂದು ವರ್ಗದ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಸರ್ಕಾರ ನೀಡಿರುವ ಅಫಿಡವಿಟ್ಗೆ ನ್ಯಾಯಾಲಯದ ಅಸಮಾಧಾನ ವ್ಯಕ್ತಪಡಿಸಿದೆ.
ಆನ್ ಲೈನ್ ಮಾಧ್ಯಮಕ್ಕೆ ಮೂಗುದಾರ ಹಾಕಲು ಮುಂದಾದ ಮಾಹಿತಿ, ಪ್ರಸಾರ ಸಚಿವಾಲಯ
ತಬ್ಲಿಘಿ ಸಮಾವೇಶದ ಮಾಧ್ಯಮ ವರದಿಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಲ್ಲಿಸಿದ ಅಫಿಡವಿಟ್ನಲ್ಲಿ ಕೇಬಲ್ ಟೆಲಿವಿಷನ್ ನೆಟ್ವರ್ಕ್ ಕಾಯ್ದೆಯನ್ನು (ಸಿಟಿಎನ್ಎ) ಅನ್ವಯಿಸದೆ ಇರುವುದನ್ನು ಗಮನಿಸಿದ ಸುಪ್ರೀಂಕೋರ್ಟ್, ನಿಯಂತ್ರಣ ವ್ಯವಸ್ಥೆಯನ್ನು ಜಾರಿಗೆ ತರುವ ಅಧಿಕಾರ ಸರ್ಕಾರಕ್ಕೆ ಇದೆ. ಅದು ಸುದ್ದಿ ಪ್ರಸಾರ ಗುಣಮಟ್ಟ ಪ್ರಾಧಿಕಾರದಂತಹ (ಎನ್ಬಿಎಸ್ಎ) ಹೊರಗಿನ ಸಂಸ್ಥೆಗಳನ್ನು ಸಹ ಹೊರತಾಗಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ತಬ್ಲಿಘಿ ಜಮಾತ್ನಿಂದ ಕೋವಿಡ್ ಹರಡಿತ್ತು ಎಂದು ಅನೇಕ ಸುದ್ದಿವಾಹಿನಿಗಳು ಪ್ರಸಾರ ಮಾಡಿದ್ದವು. ಇದರ ವಿರುದ್ಧ ಜಮಾತ್ ಉಲೇಮಾ ಎ ಹಿಂದ್ ಸಂಘಟನೆ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನು ಒಳಗೊಂಡ ನ್ಯಾಯಪೀಠವು ಕೇಬಲ್ ಟಿವಿ ಜಾಲ ನಿಯಂತ್ರಣ ಕಾಯ್ದೆಯಡಿ ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂದು ಸರ್ಕಾರವನ್ನು ಪ್ರಶ್ನಿಸಿತ್ತು.
ವಿದ್ಯುನ್ಮಾನ ಮಾಧ್ಯಮಗಳ ಮೇಲೆ ನಿಯಂತ್ರಣ?: ಸುಪ್ರೀಂಕೋರ್ಟ್ ಚಿಂತನೆ
Recommended Video
ಮಂಗಳವಾರ ಪ್ರಮಾಣಪತ್ರ ಸಲ್ಲಿಸಿದ್ದ ಕೇಂದ್ರ ಸರ್ಕಾರ, ಸುದ್ದಿವಾಹಿನಿಗಳ ಮೇಲೆ ಸಾರಾಸಗಟಾಗಿ ನಿರ್ಬಂಧ ವಿಧಿಸುವುದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ಸುದ್ದಿವಾಹಿನಿಗಳ ಸ್ವಯಂ ನಿಯಂತ್ರಣಕ್ಕೆ ಸುದ್ದಿ ಪ್ರಸಾರ ಗುಣಮಟ್ಟ ಪ್ರಾಧಿಕಾರ (ಎನ್ಬಿಸಿಎ) ಇದೆ ಎಂದು ಹೇಳಿತ್ತು. ಇದರ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.