ದೇಣಿಗೆ ವಿವರ ಸಲ್ಲಿಸಿ: ರಾಜಕೀಯ ಪಕ್ಷಗಳಿಗೆ ಸುಪ್ರೀಂಕೋರ್ಟ್ ಮಹತ್ವದ ಸೂಚನೆ
ನವದೆಹಲಿ, ಏಪ್ರಿಲ್ 12: ಚುನಾವಣೆಯಲ್ಲಿ ಪಕ್ಷಗಳು ಪಡೆಯುವ ದೇಣಿಗೆಗಳ ಮೇಲೆ ನಿಗಾ ಇರಿಸಲು ಸುಪ್ರೀಂಕೋರ್ಟ್ ಶುಕ್ರವಾರ ಮಹತ್ವದ ಆದೇಶ ನೀಡಿದೆ.
ಎಲ್ಲ ರಾಜಕೀಯ ಪಕ್ಷಗಳೂ ಎಲೆಕ್ಟೊರಲ್ ಬಾಂಡ್ಗಳ ಮೂಲಕ ಪಡೆದ ದೇಣಿಗೆಯ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
ಎಲ್ಲಾ ಪಕ್ಷಕ್ಕೆ ಸಿಕ್ಕಿರುವ ದೇಣಿಗೆಯಲ್ಲಿ ಬಿಜೆಪಿಗೆ 86% ರಷ್ಟು ಪಾಲು
ಎಲೆಕ್ಟೊರಲ್ ಬಾಂಡ್ಗಳ ಕಾನೂನು ಬದ್ಧತೆಯ ಕುರಿತಂತೆ ನಡೆದ ಅರ್ಜಿಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್, ಇದರ ಬಗ್ಗೆ ಇನ್ನೂ ವಿವರವಾದ ವಿಚಾರಣೆ ನಡೆಯುವ ಅಗತ್ಯವಿದೆ ಎಂದು ಹೇಳಿದೆ.
ಇದುವರೆಗೂ ಎಲೆಕ್ಟೊರಲ್ ಬಾಂಡ್ ಮೂಲಕ ಪಡೆದ ಎಲ್ಲ ದೇಣಿಗೆಯ ವಿವರಗಳನ್ನು ಮತ್ತು ಮೇ 15ರವರೆಗೆ ಪಡೆದುಕೊಳ್ಳುವ ಬಾಂಡ್ಗಳ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಮೇ 31ರ ಒಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು.
ಇದೇ ರೀತಿ ಎಲೆಕ್ಟೊರಲ್ ಬಾಂಡ್ಗಳಿಂದ ರಾಜಕೀಯ ಪಕ್ಷಗಳು ಇಂದಿನಿಂದ ಮೇ 15ರ ವರೆಗೆ ಪಡೆದುಕೊಳ್ಳುವ ದೇಣಿಗೆಗಳ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಆಯೋಗಕ್ಕೆ ಮೇ 30ರ ಒಳಗೆ ಸಲ್ಲಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.
ದೇಣಿಗೆ ಸಂಗ್ರಹಕ್ಕೆ ಬೀದಿಗಿಳಿದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಮೃತ್ ಶೆಣೈ
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಹಾಗೂ ಸಂಜೀವ್ ಖನ್ನಾ ಅವರನ್ನು ಒಳಗೊಂಡ ನ್ಯಾಯಪೀಠ, ವಕೀಲ ಪ್ರಶಾಂತ್ ಭೂಷಣ್ ಅವರು ಎನ್ಜಿಓ ಒಂದರ ಪರವಾಗಿ ಹಾಕಿದ ಅರ್ಜಿಯ ವಿಚಾರಣೆ ನಡೆಸಿತು. ಬಳಿಕ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಕಾಯ್ದಿರಿಸಿತು.
2016-17ನೇ ಸಾಲಿನಲ್ಲಿ ಬಿಜೆಪಿ ಒಟ್ಟು 997 ಕೋಟಿ ರೂ. ದೇಣಿಗೆ ಸ್ವೀಕರಿಸಿದೆ. ಇದರಲ್ಲಿ 529 ಕೋಟಿ ರೂ. ದೇಣಿಗೆ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಇನ್ನು 468 ಕೋಟಿ ರೂ. ನಗದು ದೇಣಿಗೆ ಅನಾಮಧೇಯ ವ್ಯಕ್ತಿಗಳಿಂದ ದೊರಕಿರುವುದಾಗಿ ಹೇಳಿದೆ. ಕಾಂಗ್ರೆಸ್ 180 ಕೋಟಿ ದೇಣಿಗೆ ಪಡೆದುಕೊಂಡಿದ್ದು, ಅದರಲ್ಲಿ 138 ಕೋಟಿ ರೂ ಅನಾಮಧೇಯ ವ್ಯಕ್ತಿಗಳಿಂದ ದೊರೆತಿರುವುದಾಗಿ ತಿಳಿಸಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಸಲುವಾಗಿ ದೇಣಿಗೆದಾರರ ಹೆಸರುಗಳನ್ನು ಬಹಿರಂಗಪಡಿಸಬೇಕು ಅಥವಾ ಎಲೆಕ್ಟೊರಲ್ ಬಾಂಡ್ಗಳ ಹಂಚಿಕೆಯನ್ನು ಸ್ಥಗಿತಗೊಳಿಸಬೇಕು ಎಂಬ ಒತ್ತಾಯಿಸಿ ದಿ ಅಸೋಸಿಯೇಟ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಎಲೆಕ್ಟೊರಲ್ ಬಾಂಡ್ಗಳ ಯೋಜನೆ ಉದ್ದೇಶವು ಚುನಾವಣೆಗಳಲ್ಲಿ ಕಪ್ಪು ಹಣದ ಬಳಕೆಯನ್ನು ತಡೆಯುವುದಾಗಿದೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ವಾದಿಸಿದ್ದರು.
ದೇಣಿಗೆದಾರರು ಹೆಸರು ಬಹಿರಂಗಪಡಿಸದೆ ಇರುವ ಸಂಪ್ರದಾಯ ಹೋಗಬೇಕು. ಪಾರದರ್ಶಕತೆ ಬರಬೇಕು. ಸುಧಾರಣೆಯನ್ನು ನಾವು ಬಯಸಿದ್ದೇವೆ. ಒಂದು ಹೆಜ್ಜೆ ಮುಂದೆ ಮತ್ತು ಎರಡು ಹೆಜ್ಜೆ ಹಿಂದೆ ಸಾಗಲು ಸಾಧ್ಯವಿಲ್ಲ. ನಮಗೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಬೇಕು ಎಂದು ಚುನಾವಣಾ ಆಯೋಗದ ಪರ ವಕೀಲ ರಾಕೇಶ್ ದ್ವಿವೇದಿ ಗುರುವಾರ ನಡೆದ ವಿಚಾರಣೆಯಲ್ಲಿ ಹೇಳಿದ್ದರು.