ಸುಶಾಂತ್ ಸಿಂಗ್ ಕೇಸ್: ಸುಪ್ರೀಂಕೋರ್ಟ್ ಹೇಳಿದ ಪ್ರಮುಖ ಅಂಶಗಳು
ದೆಹಲಿ, ಆಗಸ್ಟ್ 5: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿದೆ. ಮುಂಬೈ ಪೊಲೀಸ್ ಹಾಗೂ ಬಿಹಾರ ಪೊಲೀಸರು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಸಿಬಿಐ ತನಿಖೆಗೆ ಆಗ್ರಹ ಹೆಚ್ಚಾಗಿತ್ತು.
ಈ ಕಡೆ ಸುಪ್ರೀಂಕೋರ್ಟ್ ಅಂಗಳದಲ್ಲಿ ಸುಶಾಂತ್ ಸಿಂಗ್ ಪ್ರಕರಣ ಇಂದು ವಿಚಾರಣೆಗೆ ಬಂದಿತ್ತು. ತನಿಖೆಯನ್ನು ಪಾಟ್ನಾದಿಂದ ಮುಂಬೈಗೆ ವರ್ಗಾಯಿಸಿ ಎಂದು ರಿಯಾ ಚಕ್ರವರ್ತಿ ಅರ್ಜಿ ಸಲ್ಲಿಸಿದ್ದರು. ಈ ವಿಷಯವೂ ಕೋರ್ಟ್ನಲ್ಲಿ ಚರ್ಚೆಯಾಗಿದೆ.
Breaking: ಸುಶಾಂತ್ ಸಿಂಗ್ ಕೇಸ್: ಸಿಬಿಐಗೆ ಶಿಫಾರಸು ಮಾಡಿದ ಬಿಹಾರ ಸಿಎಂ
ಮುಂಬೈ ಪೊಲೀಸರ ನಡೆಯನ್ನು ಪ್ರಶ್ನಿಸಿರುವ ಸುಪ್ರೀಂಕೋರ್ಟ್ ವರದಿ ನೀಡುವಂತೆ ಸೂಚಿಸಿದೆ. ಮತ್ತೆ ರಿಯಾ ಅರ್ಜಿಗೆ ಸಂಬಂಧಿಸಿದಂತೆ ಇತರರನ್ನು ಪ್ರತಿಕ್ರಿಯೆ ನೀಡುವಂತೆ ಆದೇಶಿಸಿದೆ. ಇಂದು ಸುಪ್ರೀಂಕೋರ್ಟ್ನಲ್ಲಿ ಪ್ರಸ್ತಾಪವಾದ ಪ್ರಮುಖ ಅಂಶಗಳು ವಿವರ ಮುಂದೆ ಓದಿ....
ಸಿಬಿಐಗೆ ಸಮ್ಮತಿಸಿದ ಕೇಂದ್ರ
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸುವಂತೆ ಬಿಹಾರ ಸರ್ಕಾರ ಶಿಫಾರಸು ಮಾಡಿತ್ತು. ಬಿಹಾರ ಸರ್ಕಾರದ ಮನವಿಯನ್ನು ಕೇಂದ್ರ ಸರ್ಕಾರ ಸ್ವೀಕರಿಸಿದೆ ಎಂದು ಬುಧವಾರ ಸುಪ್ರೀಂಕೋರ್ಟ್ ಗೆ ಸರ್ಕಾರದಿಂದ ಮಾಹಿತಿ ನೀಡಲಾಗಿದೆ. ಅಲ್ಲಿಗೆ, ಸುಶಾಂತ್ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಳುವುದು ಖಚಿತವಾಗಿದೆ.
ಪಾಟ್ನಾ ಪೊಲೀಸರಿಗೆ ಅಧಿಕಾರ ಇಲ್ಲ
- ಸುಶಾಂತ್ ಪ್ರಕರಣದಲ್ಲಿ ಬಿಹಾರ ಪೊಲೀಸರು ತನಿಖೆ ಮಾಡುತ್ತಿರುವ ಕ್ರಮವನ್ನು ಖಂಡಿಸಿದ ಮಹಾರಾಷ್ಟ್ರ ಸರ್ಕಾರದ ವಕೀಲರು, 'ಪಾಟ್ನಾ ಪೊಲೀಸರಿಗೆ ಎಫ್ಐಆರ್ ದಾಖಲಿಸಲು ಅಥವಾ ತನಿಖೆ ನಡೆಸಲು ಯಾವುದೇ ಅಧಿಕಾರವಿಲ್ಲ ಮತ್ತು ಇದನ್ನು ರಾಜಕೀಯ ಪ್ರಕರಣವನ್ನಾಗಿ ಮಾಡಲಾಗಿದೆ' ಎಂದು ನ್ಯಾಯಾಲಯಕ್ಕೆ ತಿಳಿಸಿದರು.
- ಈ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರು ಸಾಕ್ಷ್ಯಗಳನ್ನು ನಾಶಪಡಿಸುತ್ತಿದ್ದಾರೆ ಎಂದು ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಪ್ರತಿನಿಧಿಸುವ ವಕೀಲರು ಆರೋಪಿಸಿದರು.
ಉತ್ತಮ ಸಂದೇಶವಲ್ಲ ಎಂದ ಸುಪ್ರೀಂ
ಮುಂಬೈ ಪೊಲೀಸರ ಆರೋಪಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್ 'ಮುಂಬೈ ಪೊಲೀಸರಿಗೆ ಉತ್ತಮ ವೃತ್ತಿಪರ ಖ್ಯಾತಿ ಇದೆ ಎಂಬ ಅಂಶದ ಹೊರತಾಗಿಯೂ ಬಿಹಾರ ಪೊಲೀಸ್ ಅಧಿಕಾರಿಯನ್ನು ಕ್ವಾರಂಟೈನ್ ಮಾಡಿರುವುದು ಉತ್ತಮ ಸಂದೇಶವನ್ನು ಕಳುಹಿಸಿಲ್ಲ'' ಎಂದು ಅಭಿಪ್ರಾಯ ಪಟ್ಟಿದೆ.
ರಿಯಾ ಅರ್ಜಿಗೆ ಉತ್ತರಿಸಿ
ಪಾಟ್ನಾದಿಂದ ಮುಂಬೈಗೆ ಪ್ರಕರಣವನ್ನು ವರ್ಗಾಯಿಸಿ ಎಂದು ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ಸಲ್ಲಿಸಿರುವ ಅರ್ಜಿ ಕುರಿತು, ಮಹಾರಾಷ್ಟ್ರ, ಬಿಹಾರ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರ ತಂದೆಗೆ ಪ್ರತಿಕ್ರಿಯೆ ನೀಡಿ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಸಿಬಿಐಗೆ: ಕಿಡಿಕಾರಿದ ಕಾಂಗ್ರೆಸ್, ಎನ್ಸಿಪಿ
ತನಿಖಾ ವರದಿ ನೀಡಿ, ಮುಂಬೈ ಪೊಲೀಸರಿಗೆ ಆದೇಶ
ಇನ್ನು ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಇದುವರೆಗೂ ನಡೆದಿರುವ ತನಿಖೆ ಬಗ್ಗೆ ಮೂರು ದಿನಗಳಲ್ಲಿ ನ್ಯಾಯಾಲಯ ವರದಿ ನೀಡಿ ಎಂದು ಬುಧವಾರ ಸುಪ್ರೀಂಕೋರ್ಟ್ ಮುಂಬೈ ಪೊಲೀಸರಿಗೆ ಸೂಚಿಸಿದೆ. 'ನಟನ ಸಾವಿಗೆ ಸಂಬಂಧಿಸಿದಂತೆ ಸತ್ಯ ಹೊರಬರಬೇಕು ಎನ್ನುವುದು ಮುಖ್ಯ' ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.