ಗೊಗೊಯ್ ವಿರುದ್ಧ ಸಂಚು: ತನಿಖೆಗೆ ನಿವೃತ್ತ ನ್ಯಾಯಮೂರ್ತಿ ನೇಮಕ
ನವದೆಹಲಿ, ಏಪ್ರಿಲ್ 25: ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ಲೈಂಗಿಕ ಕಿರುಕುಳ ಆರೋಪದಲ್ಲಿ ಸಿಲುಕಿಸಲು ಸಂಚು ರೂಪಿಸಲಾಗಿದೆ ಎಂಬ ವಕೀಲರೊಬ್ಬರ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸುಪ್ರೀಂಕೋರ್ಟ್, ನಿವೃತ್ತ ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್ ಅವರನ್ನು ನೇಮಿಸಿದೆ.'
ಈ ನಡುವೆ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣದ ತನಿಖೆಗೆ ರಚಿಸಲಾಗಿದ್ದ ಮೂವರು ಸದಸ್ಯರ ಸಮಿತಿಯಿಂದ ನ್ಯಾಯಮೂರ್ತಿ ಎನ್ ವಿ ರಮಣ ಹಿಂದೆ ಸರಿದಿದ್ದಾರೆ.
ನ್ಯಾಯಮೂರ್ತಿ ಪಟ್ನಾಯಕ್ ಅವರಿಗೆ ತನಿಖೆಯಲ್ಲಿ ಅಗತ್ಯ ಎಲ್ಲ ಸಹಕಾರ ನೀಡುವಂತೆ ಸಿಬಿಐ ನಿರ್ದೇಶಕರು, ಐಬಿ ನಿರ್ದೇಶಕರು ಮತ್ತು ದೆಹಲಿ ಪೊಲೀಸ್ ಆಯುಕ್ತರಿಗೆ ಕೂಡ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಗೊಗೊಯ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ತನಿಖೆಗೆ ಸಮಿತಿ ರಚನೆ
ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಆರ್ ಎಫ್ ನಾರಿಮನ್ ಮತ್ತು ದೀಪಕ್ ಗುಪ್ತಾ ಅವರನ್ನು ಒಳಗೊಂಡ ವಿಶೇಷ ನ್ಯಾಯಪೀಠ, ಸಂಚು ಆರೋಪದ ಕುರಿತು ಗುರುವಾರ ವಿಚಾರಣೆ ನಡೆಸಿತು. ಬಳಿಕ ನ್ಯಾಯಮೂರ್ತಿ ಎ.ಕೆ. ಪಟ್ನಾಯಕ್ ಅವರನ್ನು ತನಿಖಾ ಮುಖ್ಯಸ್ಥರನ್ನಾಗಿ ನೇಮಿಸಿ ಆದೇಶಿಸಿತು.
ಮತ್ತೊಂದು ಪ್ರಕರಣವಾದ ಗೊಗೊಯ್ ಅವರ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್ ಈ ಹಿಂದೆಯೇ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿದೆ.
ಸಂಚಿನ ಪ್ರಕರಣದ ತನಿಖೆ
ಪಟ್ನಾಯಕ್ ಅವರು ಕೇವಲ ನ್ಯಾಯಮೂರ್ತಿಗಳ ವಿರುದ್ಧದ ಸಂಚಿನ ಆರೋಪಕ್ಕೆ ಕುರಿತಾಗಿ ಮಾತ್ರ ವಿಚಾರಣೆ ನಡೆಸಲಿದ್ದಾರೆ. ಅವರು ಅವರ ಮೇಲೆ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ವಕೀಲ ಉತ್ಸವ್ ಬೈನ್ಸ್ ಅವರ ಆರೋಪದಂತೆ ಸಿಜೆಐ ಅವರನ್ನು ಸಿಲುಕಿಸಲು ಲೈಂಗಿಕ ಕಿರುಕುಳ ಪ್ರಕರಣದ ಕಥೆ ಹೆಣೆಯಲಾಗಿದೆಯೇ ಎಂಬುದರ ಬಗ್ಗೆ ಪಟ್ನಾಯಕ್ ತನಿಖೆ ನಡೆಸಲಿದ್ದಾರೆ. ಇದರ ವರದಿಯಲ್ಲಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಿದ್ದಾರೆ.
ಸಿಜೆಐ ವಿರುದ್ಧದ ಪ್ರಕರಣ: ಮಹಿಳೆಗೆ ನೋಟಿಸ್, ಏ. 26ಕ್ಕೆ ವಿಚಾರಣೆ
|
ಉತ್ಸವ್ ಬೈನ್ಸ್ ಆರೋಪವೇನು?
ಸಿಜೆಐ ರಂಜನ್ ಗೊಗೊಯ್ ಅವರನ್ನು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಲಾಗಿದೆ. ಸಿಜೆಐ ಅವರ ವಿರುದ್ಧದ ಪ್ರಕರಣದ ವಕೀಲಿಕೆ ನಡೆಸುವಂತೆ ತಮಗೆ ಲಂಚದ ಆಮಿಷ ಒಡ್ಡಲಾಗಿತ್ತು ಎಂದು ವಕೀಲ ಉತ್ಸವ್ ಬೈನ್ಸ್ ಆರೋಪಿಸಿದ್ದರು. ಈ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಪ್ರತ್ಯೇಕ ವಿಚಾರಣೆ ನಡೆಯಲಿದೆ.
ಇದು ಬಹುದೊಡ್ಡ ಪಿತೂರಿ: ಆರೋಪಕ್ಕೆ ರಂಜನ್ ಗೊಗೊಯ್ ಪ್ರತಿಕ್ರಿಯೆ
ಹಿಂದೆ ಸರಿದ ನ್ಯಾ. ರಮಣ
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪದ ವಿಚಾರಣೆಗೆ ನೇಮಿಸಲಾಗಿರುವ ಮೂವರು ಸದಸ್ಯರ ಸಮಿತಿಯಿಂದ ನ್ಯಾಯಮೂರ್ತಿ ಎನ್ವಿ ರಮಣ ಹಿಂದೆ ಸರಿದಿದ್ದಾರೆ.
ಗೊಗೊಯ್ ವಿರುದ್ಧ ಆರೋಪ ಮಾಡಿರುವ ಮಹಿಳೆಯು ರಮಣ ಅವರು ಸಮಿತಿ ಸದಸ್ಯರಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ರಮಣ ಅವರು ಗೊಗೊಯ್ ಅವರ ಕುಟುಂಬದ ಆಪ್ತರಾಗಿದ್ದು, ಗೊಗೊಯ್ ಅವರಿಗೆ ಆತ್ಮೀಯ ಸ್ನೇಹಿತರಾಗಿದ್ದಾರೆ, ಹೀಗಾಗಿ ಅವರನ್ನು ಸಮಿತಿಯಿಂದ ಹೊರಗಿಡಬೇಕು ಎಂದು ಮಹಿಳೆ ಸುಪ್ರೀಂಕೋರ್ಟ್ಗೆ ಬುಧವಾರ ರಾತ್ರಿ ಬರೆದಿದ್ದ ಪತ್ರದಲ್ಲಿ ಆಗ್ರಹಿಸಿದ್ದರು. ಅಲ್ಲದೆ, ಸಮಿತಿಯಲ್ಲಿ ಇನ್ನಷ್ಟು ಮಹಿಳಾ ನ್ಯಾಯಮೂರ್ತಿಗಳು ಇರಬೇಕು ಎಂದು ಒತ್ತಾಯಿಸಿದ್ದರು.
ಸಭೆ ನಡೆಸಿದ್ದ ನ್ಯಾಯಮೂರ್ತಿಗಳು
ಈ ಆರೋಪ ಪ್ರಕರಣದ ಕುರಿತಂತೆ ಸಿಜೆಐ ಅವರನ್ನು ಹೊರತುಪಡಿಸಿ ಎಲ್ಲ ನ್ಯಾಯಮೂರ್ತಿಗಳು ಮಂಗಳವಾರ ಸಭೆ ನಡೆಸಿದ್ದರು. ರಂಜನ್ ಗೊಗೊಯ್ ಅವರ ನಂತರದ ಹಿರಿಯ ನ್ಯಾಯಮೂರ್ತಿಗಳಾಗಿರುವ ಎಸ್ಎ ಬೊಬ್ಡೆ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಎನ್ವಿ ರಮಣ ಅವರು ತಮ್ಮ ನಂತರದ ಹಿರಿಯರಾಗಿರುವುದರಿಂದ ಅವರನ್ನು ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಮತ್ತು ಇಂದಿರಾ ಬ್ಯಾನರ್ಜಿ ಅವರು ಮಹಿಳೆಯಾಗಿರುವ ಕಾರಣದಿಂದ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನ್ಯಾಯಮೂರ್ತಿ ಬೊಬ್ಡೆ ತಿಳಿಸಿದ್ದರು.