ಕೃಷಿ ಕಾಯ್ದೆ: ರೈತರನ್ನು ಪ್ರತಿನಿಧಿಸುವ ಸಮಿತಿ ಸದಸ್ಯರ ಕಿರು ಪರಿಚಯ
ನವದೆಹಲಿ, ಜನವರಿ.11: ತೀವ್ರ ವಿರೋಧಕ್ಕೆ ಗುರಿಯಾಗಿರುವ ಕೃಷಿ ಸಂಬಂಧಿತ ಕಾಯ್ದೆಗಳಿಗೆ ನೀವೇ ತಡೆ ನೀಡುತ್ತೀರೋ ಅಥವಾ ನಾವು ತಡೆ ನೀಡಬೇಕೋ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ಪ್ರಶ್ನೆ ಮಾಡಿದೆ. ರೈತ ಸಂಘಗಳನ್ನು ಪ್ರತಿನಿಧಿಸುವ ವಕೀಲರ ಸಮಿತಿಯೊಂದನ್ನು ರಚಿಸುವುದಕ್ಕೆ ಕೋರ್ಟ್ ಸೂಚಿಸಿದೆ.
ದೇಶದ ಹಿರಿಯ ಮತ್ತು ಅನುಭವಿ ವಕೀಲರನ್ನೊಳಗೊಂಡ ಸಮಿತಿ ರಚಿಸಬೇಕಿದೆ. ನಾಲ್ವರು ಸದಸ್ಯರನ್ನೊಳಗೊಂಡ ಸಮಿತಿ ರಚಿಸುವುದಕ್ಕೆ ಸರ್ವೋಚ್ಛ ನ್ಯಾಯಾಲಯವೇ ವಕೀಲರ ಹೆಸರುಗಳನ್ನು ಸೂಚಿಸಿದೆ. ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್, ಕಾಲಿನ್ ಗೊನ್ಸಾಲ್ವೆಸ್, ಹೆಚ್.ಎಸ್. ಫೂಲ್ಕಾ ಮತ್ತು ದುಷ್ಯಂತ ದಾವೆ ಅವರನ್ನು ಸಮಿತಿ ಸದಸ್ಯರಾಗಿ ಕೋರ್ಟ್ ನೇಮಿಸಿದೆ.
ರೈತರಿಗೆ ಮೊದಲ ಜಯ, ಕೃಷಿ ಕಾಯ್ದೆಗಳಿಗೆ ತಡೆ ನೀಡಲು ಸುಪ್ರೀಂಕೋರ್ಟ್ ಸೂಚನೆ
ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್.ಎ. ಬೊಬ್ದೆ, ಎ.ಎಸ್.ಬೋಪಣ್ಣ ಮತ್ತು ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಿತು. ರೈತ ಸಂಘಗಳ ಪರವಾಗಿ ಕೋರ್ಟ್ ಸೂಚಿಸಿರುವ ನಾಲ್ವರು ಹಿರಿಯ ವಕೀಲರ ಕುರಿತು ಪರಿಚಯ ಇಲ್ಲಿದೆ.
ಸುಪ್ರೀಂಕೋರ್ಟ್ ವಕೀಲ ಪ್ರಶಾಂತ್ ಭೂಷಣ್
ರೈತ ಸಂಘಗಳನ್ನು ಪ್ರತಿನಿಧಿಸುವ ಸಮಿತಿ ಸದಸ್ಯರಾಗಿರುವ ಹಿರಿಯ ವಕೀಲರಲ್ಲಿ ಪ್ರಶಾಂತ್ ಭೂಷಣ್ ಪ್ರಮುಖರು ಎನಿಸಿದ್ದಾರೆ. 64 ವರ್ಷದ ಪ್ರಶಾಂತ್ ಭೂಷಣ್ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದುಕೊಂಡಿದ್ದಾರೆ. 2015ರಲ್ಲಿ ಜನಲೋಕಪಾಲ್ ಕಾಯ್ದೆ ವಿರೋಧಿಸಿ ಸ್ವಾತಂತ್ರ್ಯ ಹೋರಾಟಗಾರ ಅಣ್ಣಾ ಹಜಾರೆಯವರು ಉಗ್ರ ಹೋರಾಟ ನಡೆಸಿದ್ದರು. ಅಂದು ಹಜಾರೆಯವರ ತಂಡದಲ್ಲಿ ಇದೇ ಪ್ರಶಾಂತ್ ಭೂಷಣ್ ಅವರು ಗುರುತಿಸಿಕೊಂಡಿದ್ದರು.
ಹಿರಿಯ ವಕೀಲ ಪ್ರಶಾಂತ್ ಭೂಷಣ್ ತಾವು ಸಲ್ಲಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಂದಲೇ ಹೆಚ್ಚು ಪ್ರಚಲಿತದಲ್ಲಿ ಇರುತ್ತಾರೆ. 500ಕ್ಕೂ ಹೆಚ್ಚು ಪ್ರಕರಣಗಳ ಪರ ವಾದ ಮಂಡಿಸಿದ್ದಾರೆ. ಈ ಪೈಕಿ ಶೇ.25ರಷ್ಟು ಪ್ರಕರಣಗಳಿಗೆ ಮಾತ್ರ ಹಣ ತೆಗೆದುಕೊಂಡಿದ್ದು, ಬಹುಪಾಲು ಪ್ರಕರಣಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದ್ದವು ಆಗಿವೆ. ಇತರೆ ವಕೀಲರಿಗೆ ಹೋಲಿಸಿದ್ದಲ್ಲಿ ಇವರು ತೆಗೆದುಕೊಳ್ಳುವ ಶುಲ್ಕವು ಶೇ.5ರಷ್ಟು ಕಡಿಮೆಯಾಗಿರುವುದು ಮತ್ತೊಂದು ವಿಶೇಷ.
ವಕೀಲರಾದ ಕಾಲಿನ್ ಗೊನ್ಸಾಲ್ವೆಸ್ ಪರಿಚಯ
ಸುಪ್ರೀಂಕೋರ್ಟ್ ಹಿರಿಯ ವಕೀಲರಾದ ಕಾಲಿನ್ ಗೊನ್ಸಾಲ್ವೆಸ್ ರನ್ನು ಸಮಿತಿ ಸದಸ್ಯರಾಗಿ ನೇಮಿಸಲಾಗಿದೆ. ಮುಂಬೈ ಐಐಟಿಯಲ್ಲಿ ಬಿ.ಟೆಕ್ ವ್ಯಾಸಂಗ ಮಾಡಿರುವ ಇವರು, ಮುಂಬೈ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದಾರೆ. 68 ವರ್ಷದ ಕಾಲಿನ್ ಗೊನ್ಸಾಲ್ವೆಸ್, ಮಾನವ ಹಕ್ಕುಗಳ ಕಾನೂನು ಜಾಲದ ಸಂಸ್ಥಾಪಕರಾಗಿದ್ದಾರೆ. ಎರಡು ದಶಕಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ತನಿಖೆ, ದಾಖಲೆಗಳ ಸಂಗ್ರಹಿಸಿದ್ದರು. ಅಲ್ಲದೇ "ನಿಮ್ಮ ಹಕ್ಕುಗಳನ್ನು ತಿಳಿದುಕೊಳ್ಳಿ" ಎಂಬ ಅಂಶಗಳ ಮೇಲೆ ವಕೀಲರು, ಪೊಲೀಸರು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ತರಬೇತಿ, ಸೆಮಿನಾರ್, ಸಂವಾದ, ಶಿಬಿರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ 2017ರಲ್ಲಿ ಕೊಲಿನ್ ಗೊನ್ಸಾಲ್ವೆಸ್ ರಿಗೆ "ರೈಟ್ ಲೈವ್ಲಿವುಡ್ ಅವಾರ್ಡ್" ನೀಡಿ ಗೌರವಿಸಲಾಯಿತು.(ಕೃಪೆ: Wikipedia )
ದೆಹಲಿ ಹೈಕೋರ್ಟ್ ವಕೀಲ ಹೆಚ್.ಎಸ್.ಫೂಲ್ಕಾ
ರೈತ ಸಂಘಗಳನ್ನು ಪ್ರತಿನಿಧಿಸುವ ಸಮಿತಿಯಲ್ಲಿ ದೆಹಲಿ ಹೈಕೋರ್ಟ್ ಹಿರಿಯ ವಕೀಲರಾದ ಹರ್ವಿಂದರ್ ಸಿಂಗ್ ಫೂಲ್ಕಾರಿಗೆ ಸ್ಥಾನ ನೀಡಲಾಗಿದೆ. 65 ವರ್ಷದ ಫೂಲ್ಕಾ ಹಿರಿಯ ವಕೀಲರಾಗಿ ಅಲ್ಲದೇ ಮಾನವ ಹಕ್ಕುಗಳ ಕಾರ್ಯಕರ್ತರಾಗಿ, ರಾಜಕಾರಣಿಯಾಗಿ, ಲೇಖಕರಾಗಿ ಪ್ರಸಿದ್ಧರಾಗಿದ್ದಾರೆ. ಚಂಡೀಘರ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದರು. ಆರೋಪಿಯ ತಪ್ಪು ಎಂದು ಕಂಡು ಬಂದಲ್ಲಿ ಅಂಥ ಪ್ರಕರಣಗಳನ್ನು ಮುಲಾಜಿಲ್ಲದೇ ಫೂಲ್ಕಾ ಅವರು ನಿರಾಕರಿಸುತ್ತಾರೆ.
ರಾಜಕಾರಣದಲ್ಲೂ ತಮ್ಮದೇ ಛಾಪು ಮೂಡಿಸಿರುವ ಫೂಲ್ಕಾ ಅವರು, 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರು. ನಂತರ 2018ರಲ್ಲಿ ಡಾಖಾ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದರು. ಆದರೆ ಸರ್ಕಾರದ ಆಡಳಿತ ವೈಖರಿ ವಿರೋಧಿಸಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. 2019ರ ಆಗಸ್ಟ್.09ರಂದು ರಾಜೀನಾಮೆಯನ್ನು ಅಂಗೀಕಾರವಾಗಿತ್ತು.
ನಾಲ್ವರು ಸದಸ್ಯರ ತಂಡದಲ್ಲಿ ದುಷ್ಯಂತ್ ದಾವೆ
ಕೇಂದ್ರ ಸರ್ಕಾರದ ವಿರುದ್ಧ ರೈತರನ್ನು ಪ್ರತಿನಿಧಿಸುವುದಕ್ಕಾಗಿ ರಚನೆ ಆಗಲಿರುವ ನಾಲ್ವರು ಸದಸ್ಯರ ತಂಡದಲ್ಲಿ ದುಷ್ಯಂತ್ ದಾವೆ ಅವರನ್ನು ಕೂಡಾ ನೇಮಿಸಲಾಗಿದೆ. ಪ್ರಸ್ತುತ ಸುಪ್ರೀಂಕೋರ್ಟ್ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ.