ಸಿಎಎ ವಿರೋಧಿ ಹೋರಾಟ: ಶಾಹಿನ್ ಬಾಗ್ ನಲ್ಲಿ ತ್ರಿಮೂರ್ತಿಗಳ ಸಂಧಾನಸೂತ್ರ
ನವದೆಹಲಿ, ಫೆಬ್ರವರಿ.19: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ನಡೆಯುತ್ತಿರುವ ಹೋರಾಟಗಾರರ ಮನವೊಲಿಕೆಗೆ ಹಿರಿಯ ವಕೀಲ ಸಂಜಯ್ ಹೆಗ್ಡೆ ಹಾಗೂ ಸಾಧನಾ ರಾಮಚಂದ್ರನ್ ಮುಂದಾಗಿದ್ದಾರೆ.
ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ವಕೀಲ ಸಂಜಯ್ ಹೆಗ್ಡೆ ಹಾಗೂ ಸಾಧನಾ ರಾಮಚಂದ್ರನ್ ಅವರ ಜೊತೆಗೆ ಮಾಹಿತಿ ಆಯೋಗದ ಮಾಜಿ ಮುಖ್ಯಸ್ಥ ವಜಾಹತ್ ಹಬೀಬುಲ್ಲಾ ಕೂಡಾ ಸಾಥ್ ನೀಡಿದ್ದರು.
ಶಾಹಿನ್ ಬಾಗ್ ಇತ್ಯರ್ಥಕ್ಕೆ ನೇಮಕಗೊಂಡ ತ್ರಿಮೂರ್ತಿಗಳ ಕುರಿತು ಮಾಹಿತಿ
ಕಳೆದ ಫೆಬ್ರವರಿ.17ರಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರದ ವಿರುದ್ಧ ಶಾಹಿನ್ ಬಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನಾಕಾರರಿಗೆ ರಸ್ತೆ ಬಂದ್ ಮಾಡದಂತೆ ಸಂದೇಶ ರವಾನಿಸಿತ್ತು. ಹೋರಾಟಗಾರರ ಜೊತೆ ಶಾಂತಿ ಮಾತುಕತೆ ನಡೆಸಲು ಮಧ್ಯಸ್ಥಿಕೆ ವಹಿಸುವಂತೆ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರಿಗೆ ಸೂಚನೆ ನೀಡಿತ್ತು.
ಶಾಹಿನ್ ಬಾಗ್ ಪ್ರತಿಭಟನಾಕಾರರ ಜೊತೆ ಸಂಧಾನ ಮಾತುಕತೆ
ಬುಧವಾರ ದೆಹಲಿಯ ಶಾಹಿನ್ ಬಾಗ್ ಗೆ ತೆರಳಿದ ಹಿರಿಯ ವಕೀಲ ಸಂಜಯ್ ಹೆಗ್ಡೆ, ಶಾಂತಿಯುತವಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿಚಾರವನ್ನು ಬಗೆಹರಿಸಿಕೊಳ್ಳೋಣ. ಇದಕ್ಕೆ ನೀವೆಲ್ಲರೂ ಸಹಕಾರ ನೀಡಬೇಕು ಎಂದು ಮನವೊಲಿಸುವ ಪ್ರಯತ್ನ ಮಾಡಿದರು.
ಪ್ರತಿಭಟಿಸುವ ಹಕ್ಕಿದೆ, ಆದರೆ ಬೇರೆಯವರ ಹಕ್ಕು ಕಿತ್ತುಕೊಳ್ಳಬೇಡಿ
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ನಡೆಸುವ ಹಕ್ಕೇನೋ ನಿಮಗಿದೆ. ಆದರೆ, ನಿಮ್ಮ ಹೋರಾಟ ಮತ್ತು ಪ್ರತಿಭಟನೆಯು ಬೇರೆಯವರ ಹಕ್ಕನ್ನು ಕಿತ್ತುಕೊಳ್ಳಬಾರದು. ದೇಶದ ಇತರೆ ಪ್ರಜೆಗಳಿಗೆ ತೊಂದರೆ ಉಂಟಾಗದಂತೆ ಹೋರಾಟ ಮಾಡಬೇಕಷ್ಟೇ ಎಂದು ಮಧ್ಯಸ್ಥಿತಿ ವಹಿಸಿರುವ ಸಾಧವಾ ರಾಮಚಂದ್ರನ್ ಸಲಹೆ ನೀಡಿದ್ದಾರೆ. ಅಲ್ಲದೇ ಎಲ್ಲರೂ ಒಟ್ಟಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ನವದೆಹಲಿ ಪ್ರಜೆಗಳಿಗೆ ತೊಂದರೆ ಆಗದಂತೆ ಹೋರಾಟಕ್ಕೆ ಮನವಿ
ಸಿಎಎ ವಿರುದ್ಧದ ಹೋರಾಟ ಹೇಗೆ ಇರಬೇಕು, ಮುಂದೆ ಯಾವ ರೀತಿ ಪ್ರತಿಭಟನೆಗಳನ್ನು ನಡೆಸಬೇಕು. ಅಥವಾ ಸಮಸ್ಯೆಯನ್ನು ಹೇಗೆ ಇತ್ಯರ್ಥಪಡಿಸಿಕೊಳ್ಳಬೇಕು ಎಂಬುದರ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸೋಣ. ಆದರೆ, ನಮ್ಮ ಹೋರಾಟದಿಂದ ರಾಷ್ಟ್ರ ರಾಜಧಾನಿಯಲ್ಲಿ ಇರುವ ಇತರೆ ಪ್ರಜೆಗಳಿಗೆ ತೊಂದರೆ ಉಂಟಾಗಬಾರದು. ಈ ನಿಟ್ಟಿನಲ್ಲಿ ಚಿಂತನೆ ನಡೆಸೋಣ ಎಂದು ಮಾಹಿತಿ ಆಯೋಗದ ಮಾಜಿ ಮುಖ್ಯಸ್ಥ ವಜಾಹತ್ ಹಬೀಬುಲ್ಲಾ ತಿಳಿಸಿದ್ದಾರೆ.
ಫೆ.24ಕ್ಕೆ ಸುಪ್ರೀಂಕೋರ್ಟ್ ನಲ್ಲಿ ಮುಂದಿನ ವಿಚಾರಣೆ
ಶಾಹಿನ್ ಬಾಗ್ ನಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಹೋರಾಟದಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಪ್ರತಿಭಟನಾಕಾರರಿಂದ ರಸ್ತೆ ಸಂಚಾರಕ್ಕೆ ಅಡ್ಡಿ ಆಗುತ್ತಿದೆ ಎಂದು ಆರೋಪಿಸಿ ಹಿರಿಯ ವಕೀಲ ಅಮಿತ್ ಸಹನಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಶಾಹಿನ್ ಬಾಗ್ ಪ್ರತಿಭಟನೆಗೆ ಸೂಕ್ತ ಪರಿಹಾರ ಕಂಡುಕೊಳ್ಳಿರಿ. ನಗರದ ರಸ್ತೆಗಳಲ್ಲಿ ಮಾತ್ರ ಪ್ರತಿಭಟನೆಗಳನ್ನು ನಡೆಸುವಂತಿಲ್ಲ. ಕಲಿಂದ್ ಗಂಜ್ ಮತ್ತು ಶಾಹಿನ್ ಬಾಗ್ ನಡುವೆ ರಸ್ತೆ ಸಂಚಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಿರಿ ಸೂಚಿಸಿ ಫೆಬ್ರವರಿ.24ಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಿತ್ತು.