ತಮಿಳುನಾಡಿನಲ್ಲಿ ಮದ್ಯದಂಗಡಿ ತೆರೆಯಲು ಸುಪ್ರೀಂಕೋರ್ಟ್ ಅನುಮತಿ
ದೆಹಲಿ, ಮೇ 15: ತಮಿಳುನಾಡಿನಲ್ಲಿ ಮದ್ಯದಂಗಡಿ ತೆರೆಯಬಾರದು ಎಂದು ಸೂಚಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ತಡೆ ಹಿಡಿದಿದೆ. ಈ ಮೂಲಕ ತಮಿಳುನಾಡಿನಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ಸಿಕ್ಕಿದೆ.
ಕೊರೊನಾ ವೈರಸ್ ಲಾಕ್ಡೌನ್ ಹಿನ್ನೆಲೆ ಮದ್ಯದಂಗಡಿ ತೆರೆದರೆ, ಸಾಮಾಜಿಕ ಅಂತರವನ್ನು ಕಾಪಾಡಲು ಸಾಧ್ಯವಿಲ್ಲ, ಸೋಂಕು ಹರಡುವುದಕ್ಕೆ ಅವಕಾಶ ಕೊಟ್ಟಂತೆ ಎಂದು ಮದ್ರಾಸ್ ನ್ಯಾಯಾಲಯದಲ್ಲಿ ಮೇ 8 ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ಮದ್ಯದಂಗಡಿ ಮುಚ್ಚಲು ಮದ್ರಾಸ್ ಹೈ ಕೋರ್ಟ್ ಆದೇಶ
ಅರ್ಜಿ ವಿಚಾರಣೆ ಮಾಡಿದ್ದ ಮದ್ರಾಸ್ ಹೈಕೋರ್ಟ್ ಅಂಗಡಿಗಳನ್ನು ಮುಚ್ಚಬೇಕು, ಆನ್ಲೈನ್ ಮಾತ್ರ ಮಾರಾಟ ಮಾಡಬೇಕು ಎಂದು ಸೂಚಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.
ತಮಿಳುನಾಡು ಸರ್ಕಾರದ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ, ಮದ್ಯದಂಗಡಿ ತೆರೆಯುವ ತೀರ್ಮಾನ ಸರ್ಕಾರಕ್ಕೆ ಬಿಟ್ಟಿದ್ದು ಎಂದು ಹೇಳುವ ಮೂಲಕ ಮದ್ರಾಸ್ ಕೋರ್ಟ್ ಆದೇಶಕ್ಕೆ ತಡೆ ನೀಡಿದೆ. ನಾಲ್ಕು ವಾರದ ಬಳಿಕ ಈ ಅರ್ಜಿ ವಿಚಾರಣೆ ಮತ್ತೆ ಸುಪ್ರೀಂಕೋರ್ಟ್ ಅಂಗಳಕ್ಕೆ ಬರಲಿದೆ.
ಈ ಮೊದಲು ಲಾಕ್ಡೌನ್ ನಡುವೆ ತಮಿಳುನಾಡು ಸರ್ಕಾರ ಮದ್ಯದಂಗಡಿ ತೆರೆದಾಗ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿಪಕ್ಷ ನಾಯಕ ಸ್ಟಾಲೀನ್, ನಟ ಕಮಲ್ ಹಾಸನ್, ರಜನಿಕಾಂತ್ ಸೇರಿದಂತೆ ಹಲವರು ಖಂಡಿಸಿದ್ದರು.