ಕಾಶ್ಮೀರಕ್ಕೆ ಭೇಟಿ ನೀಡಲು ಸೀತಾರಾಂ ಯೆಚೂರಿ ಮತ್ತು ವಿದ್ಯಾರ್ಥಿಗೆ ಸುಪ್ರೀಂಕೋರ್ಟ್ ಅನುಮತಿ
ನವದೆಹಲಿ, ಆಗಸ್ಟ್ 28: ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ಎಡಪಕ್ಷದ ನಾಯಕ ಸೀತಾರಾಮ್ ಯೆಚೂರಿ ಮತ್ತು ಕಾಶ್ಮೀರದ ವಿದ್ಯಾರ್ಥಿಯೊಬ್ಬನಿಗೆ ಅನುಮತಿ ನೀಡುವಂತೆ ಕೇಂದ್ರಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ.
ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಸಂಬಂಧ 370ನೇ ವಿಧಿಯನ್ನು ರದ್ದುಗೊಳಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಪ್ರವಾಸ ಮತ್ತು ಭದ್ರತಾ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇವುಗಳ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ವಿವಿಧ ಅರ್ಜಿಗಳು ದಾಖಲಾಗಿವೆ.
370ನೇ ವಿಧಿ ರದ್ದು: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್
ಬುಧವಾರ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠ, ಅರ್ಜಿದಾರರಲ್ಲಿ ಒಬ್ಬರಾದ ವಿದ್ಯಾರ್ಥಿ ಮೊಹಮದ್ ಅಲೀಮ್ ಸಯೀದ್ ಅವರಿಗೆ ಅನಂತ್ ನಾಗ್ ಜಿಲ್ಲೆಯಲ್ಲಿರುವ ತಮ್ಮ ಪೋಷಕರನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ನಿರ್ದೇಶಿಸಿದೆ. ಅವರು ಅಲ್ಲಿಂದ ಮರಳಿದ ಬಳಿಕ ಅಫಿಡವಿಟ್ ಸಲ್ಲಿಸುವಂತೆ ಕೂಡ ಸೂಚನೆ ನೀಡಿದೆ.
ಸರ್ಕಾರ ಸೌಕರ್ಯ ಕಲ್ಪಿಸಬೇಕು
ಸಯೀದ್ ಅವರ ಪ್ರಯಾಣಕ್ಕೆ ಅಗತ್ಯ ಎಲ್ಲ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಬೇಕು ಮತ್ತು ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಆದೇಶಿಸಲಾಗಿದೆ. ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದ ಸಯೀದ್ ಅವರು, ತಾವು ಶ್ರೀನಗರಕ್ಕೆ ಪ್ರಯಾಣ ಮಾಡಲು ಸಾಧ್ಯವಾಗುತ್ತಿಲ್ಲ. ತಮ್ಮ ಪೋಷಕರು ಎಲ್ಲಿ ಇದ್ದಾರೆ ಎನ್ನುವುದು ಕೂಡ ತಿಳಿಯುತ್ತಿಲ್ಲ ಎಂದು ಅವರು ಅರ್ಜಿಯಲ್ಲಿ ಅಲವತ್ತುಕೊಂಡಿದ್ದರು.
ಸ್ನೇಹಿತರ ಭೇಟಿ ಕಷ್ಟವೇ?
ತಮ್ಮ ಪಕ್ಷದ ಸಹೋದ್ಯೋಗಿ ಯೂಸುಫ್ ತಾರಿಗಾಮಿ ಅವರ ಆರೋಗ್ಯ ಸರಿಯಿಲ್ಲದ ಕಾರಣ ಅವರನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಕೋರಿದ್ದರು. ಆ ಅರ್ಜಿಯನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, 'ನೀವು ಅಲ್ಲಿಗೆ ಭೇಟಿ ನೀಡಲು ನಾವು ಅನುಮತಿ ನೀಡುತ್ತೇವೆ. ನೀವು ನಿಮ್ಮ ಸ್ನೇಹಿತನ ಭೇಟಿಗಾಗಿ ಮಾತ್ರವೇ ತೆರಳುತ್ತಿದ್ದೀರಾ? ಈ ದೇಶದ ನಾಗರಿಕರೊಬ್ಬರು ತಮ್ಮ ಸ್ನೇಹಿತರನ್ನು ಭೇಟಿ ಮಾಡಲು ಬಯಸಿದ್ದಾರೆ. ಏನು ಕಷ್ಟವಾಗುತ್ತಿದೆ?' ಎಂದು ಕೇಳಿದರು.
ಕಾಶ್ಮೀರ, ಪಾಕಿಸ್ತಾನದ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ವೈರಲ್
ಯೆಚೂರಿ ಭೇಟಿಯಿಂದ ಸಮಸ್ಯೆ ಉದ್ಭವಿಸಬಹುದು
ಸೀತಾರಾಂ ಯೆಚೂರಿ ಅವರು ಕಾಶ್ಮೀರಕ್ಕೆ ತೆರಳುವುದು ರಾಜಕೀಯ ಭೇಟಿಯಂತೆ ಕಾಣಿಸುತ್ತಿದೆ. ಇದು ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಗೆ ತೊಂದರೆ ಉಂಟುಮಾಡಬಹುದು. ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಪರಿಸ್ಥಿತಿ ಸಹಜವಾಗಿದೆ. ಅವರ ಭೇಟಿಯಿಂದ ಸಮಸ್ಯೆಗಳು ಸೃಷ್ಟಿಯಾಗಬಹುದು ಎಂದು ಸರ್ಕಾರದ ಪರ ವಕೀಲ ತುಷಾರ್ ಮೆಹ್ತಾ ವಾದಿಸಿದ್ದರು.
ಯೂಸುಫ್ ತಾರಿಗಾಮಿ ಅವರು ಚೇತರಿಸಿಕೊಂಡಿದ್ದಾರೆ. ಅವರ ಆರೋಗ್ಯವನ್ನು ಪ್ರತಿದಿನವೂ ತಪಾಸಣೆ ನಡೆಸಲಾಗುತ್ತಿದೆ. ಅವರು ಝೆಡ್ ಪ್ಲಸ್ ಭದ್ರತೆಯಲ್ಲಿದ್ದಾರೆ ಎಂದು ಅವರುಮಾಹಿತಿ ನೀಡಿದ್ದರು.
ಭೇಟಿಯಾಗಿ ಬಂದು ವರದಿ ಕೊಡಿ
'ಯೆಚೂರಿ ಅವರು ಭಾರತದ ಪ್ರಜೆಯಾಗಿದ್ದರೆ ಅವರು ಅಲ್ಲಿಗೆ ಹೋಗಬಹುದು' ಎಂದ ನ್ಯಾಯಾಲಯವು, 'ಯೆಚೂರಿ ಅವರು ಬೇರೆ ಯಾವುದೇ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದರೆ ಅದನ್ನು ಸುಪ್ರೀಂಕೋರ್ಟ್ನ ಆದೇಶದ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ' ಎಂಬುದಾಗಿ ಹೇಳಿತು.
ಮರಳಿ ಬಂದ ಬಳಿಕ ತಾರಿಗಾಮಿ ಅವರ ಆರೋಗ್ಯದ ಕುರಿತು ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯವು ಯೆಚೂರಿ ಅವರಿಗೆ ಸೂಚಿಸಿತು.
ಕಾಶ್ಮೀರದಲ್ಲಿ 40 ನಾಯಕರು, ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ವಶಕ್ಕೆ