ಲವ್ ಜಿಹಾದ್; ಪ್ರತಿವಾದಿಗಳ ಸೇರ್ಪಡೆಗೆ ಸುಪ್ರೀಂ ಅನುಮತಿ
ನವದೆಹಲಿ, ಫೆಬ್ರವರಿ 17: ಉತ್ತರಪ್ರದೇಶ ಹಾಗೂ ಉತ್ತರಾಖಂಡ ಸರ್ಕಾರ ಜಾರಿಗೊಳಿಸಿರುವ "ಲವ್ ಜಿಹಾದ್", ವಿವಾದಾತ್ಮಕ ಮತಾಂತರ ಕಾನೂನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯಲ್ಲಿ ಹಿಮಾಚಲ ಪ್ರದೇಶ ಹಾಗೂ ಮಧ್ಯ ಪ್ರದೇಶವನ್ನು ಪ್ರತಿವಾದಿಯಾಗಿ ಸೇರಿಸಲು ಅರ್ಜಿದಾರರಿಗೆ ಬುಧವಾರ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಪೀಠವು ಬುಧವಾರ ಅರ್ಜಿ ವಿಚಾರಣೆ ನಡೆಸಿದ್ದು, ಮುಸ್ಲಿಂ ಸಂಘಟನೆ ಜಮಾಯತ್ ಉಲೇಮಾ ಎ ಹಿಂದ್ಗೂ ಪ್ರತಿವಾದಿಯಾಗಲು ಅವಕಾಶ ನೀಡಿದೆ. ಈ ಲವ್ ಜಿಹಾದ್ ಕಾನೂನಿನಡಿಯಲ್ಲಿ ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಮುಸ್ಲಿಮರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಈ ಸಂಘಟನೆ ಆರೋಪಿಸಿತ್ತು.
ಲವ್ ಜಿಹಾದ್ ಕಾನೂನು ಬಗ್ಗೆ ಕೇಂದ್ರ ಗೃಹ ಸಚಿವಾಲಯ ಹೇಳಿದ್ದೇನು?
ಅಂತರ ಧರ್ಮ ವಿವಾಹದ ಮತಾಂತರ ತಡೆಯುವ ಉದ್ದೇಶದಿಂದ ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಜಾರಿಗೆ ತರಲಾಗಿರುವ ವಿವಾದಾತ್ಮಕ "ಲವ್ ಜಿಹಾದ್" ಕಾನೂನು ಪರಿಶೀಲನೆಗೆ ಜನವರಿ 6ರಂದು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತ್ತು.
ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಹಾಗೂ ವಿ ರಾಮಸುಬ್ರಹ್ಮಣಿಯನ್ ಅವರನ್ನೊಳಗೊಂಡ ಪೀಠ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ಸರ್ಕಾರಗಳಿಗೆ ಎರಡು ಭಿನ್ನ ಅರ್ಜಿ ಸಲ್ಲಿಸುವಂತೆ ನೋಟೀಸ್ ನೀಡಿತ್ತು.
ವಕೀಲ ವಿಶಾಲ್ ಠಾಕ್ರೆ ಹಾಗೂ ಸಿಟಿಜನ್ ಫಾರ್ ಜಸ್ಟೀಸ್ ಅಂಡ್ ಪೀಸ್ ಎಂಬ ಸ್ವಯಂಸೇವಕ ಸಂಘ ಅರ್ಜಿ ಸಲ್ಲಿಸಿದ್ದು, ಮತಾಂತರ ನಿಷೇಧ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದರು.
ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಉತ್ತರಾಖಂಡ್ ನಲ್ಲಿ ಲವ್ ಜಿಹಾದ್ ಕಾನೂನು ಜಾರಿಯಲ್ಲಿದ್ದು, ಈ ಪ್ರಕರಣದಲ್ಲಿ ಅಪರಾಧಿಯಾದವರಿಗೆ ಕನಿಷ್ಠ 5 ವರ್ಷ ಕಠಿಣ ಸಜೆ ವಿಧಿಸಲಾಗುವುದು.