ಅನರ್ಹ ಶಾಸಕರಿಗೆ ಕೊಂಚ ರಿಲೀಫ್ ನೀಡಿದ ಸುಪ್ರೀಂಕೋರ್ಟ್
Recommended Video
ನವದೆಹಲಿ, ಆಗಸ್ಟ್ 27: ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ನ 17 ನಾಯಕರು ಕೊನೆಗೂ ತುಸು ನಿರಾಳರಾಗಿದ್ದಾರೆ. ಒಂದು ತಿಂಗಳಿಗೂ ಅಧಿಕ ಸಮಯದಿಂದ ಗೊಂದಲ, ಆತಂಕದಲ್ಲಿಯೇ ಕಾಲಕಳೆಯುತ್ತಿದ್ದ ಅವರು ಮಂಗಳವಾರದಂದು ಸುಪ್ರೀಂಕೋರ್ಟ್ನಿಂದ ಕೊಂಚ ಮಟ್ಟಿಗೆ ಸಕಾರಾತ್ಮಕ ಸ್ಪಂದನೆ ಪಡೆದುಕೊಂಡಿದ್ದಾರೆ.
ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಹಸಿರುನಿಶಾನೆ ತೋರಿಸಿದೆ. ತಮ್ಮ ಅರ್ಜಿಯ ವಿಚಾರಣೆ ಬಗ್ಗೆ ಆತಂಕಗೊಂಡಿದ್ದ ಅನರ್ಹ ಶಾಸಕರು ಇದರಿಂದ ತುಸು ನಿಟ್ಟುಸಿರುಬಿಡುವಂತಾಗಿದೆ.
ಸುಪ್ರೀಂಕೋರ್ಟ್ನಲ್ಲಿ ಮತ್ತೆ ಹಿನ್ನಡೆ: ಅನರ್ಹ ಶಾಸಕರು ಕಂಗಾಲು
ತಮ್ಮ ರಾಜೀನಾಮೆ ಕುರಿತ ಅರ್ಜಿ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಗೆ ಬಾಕಿ ಇರುವಾಗಲೇ ಏಕಪಕ್ಷೀಯವಾಗಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ ಎಂದು ಆರೋಪಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ತಿಂಗಳು ಕಳೆದರೂ ವಿಚಾರಣೆ ಬಂದಿಲ್ಲ. ಹೀಗಾಗಿ ಸಹಜವಾಗಿಯೇ ಅವರಲ್ಲಿ ದುಗುಡ ಆವರಿಸಿದೆ. ತಮ್ಮ ಅನರ್ಹತೆಯ ನಿರ್ಧಾರವನ್ನು ಸುಪ್ರೀಂಕೋರ್ಟ್ ವಜಾಗೊಳಿಸಿ, ರಾಜೀನಾಮೆಯನ್ನು ಅಂಗೀಕರಿಸಿದರೆ ಮತ್ತೆ ರಾಜಕೀಯ ಮರುಜೀವ ಸಿಗಲಿದೆ ಎನ್ನುವುದು ಅವರ ಯೋಜನೆ.
ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ
ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವ ಅನರ್ಹ ಶಾಸಕರ ಅರ್ಜಿ ತುರ್ತು ವಿಚಾರಣೆಗೆ ಬರುವಂತೆ ಪ್ರಯತ್ನಿಸುತ್ತಿದ್ದಾರೆ. ಹಿರಿಯ ವಕೀಲರ ವಿ.ವಿ. ಗಿರಿ ಅವರು ಮಂಗಳವಾರ ಅರ್ಜಿಯ ತುರ್ತು ವಿಚಾರಣೆಗೆ ಮಾಡಿದ ಮನವಿಯನ್ನು ನ್ಯಾಯಮೂರ್ತಿ ಎನ್ ವಿ ರಮಣ ಅವರ ನೇತೃತ್ವದ ನ್ಯಾಯಪೀಠ ಪುರಸ್ಕರಿಸಿತು.
ಲಿಸ್ಟ್ ಮಾಡಲು ಸೂಚನೆ
ಅನರ್ಹ ಶಾಸಕರ ಅರ್ಜಿಯನ್ನು ಲಿಸ್ಟ್ ಮಾಡುವಂತೆ ನ್ಯಾಯಪೀಠವು ರಿಜಿಸ್ಟ್ರಾರ್ಗೆ ಸೂಚನೆ ನೀಡಿತು. ಇದರಿಂದ ಅವರ ಅರ್ಜಿ ವಿಚಾರಣೆಗೆ ಬರುವುದು ಖಚಿತವಾಗಿದೆ. ಆದರೆ, ಅದರ ದಿನಾಂಕ ಇನ್ನೂ ಗೊತ್ತಾಗಿಲ್ಲ. ಇನ್ನು ಎರಡು ಅಥವಾ ಮೂರು ವಾರಗಳಲ್ಲಿ ಅವರ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಮಂಗಳವಾರ ಸಂಜೆ ದಿನಾಂಕ ಗೊತ್ತಾಗಬಹುದು ಎನ್ನಲಾಗಿದೆ.
ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟಿನಲ್ಲಾದ ಎರಡು ಆಘಾತ ಏನು?
ವಿಚಾರಣೆ ವಿಳಂಬವಾಗಬಹುದು
ರಿಜಿಸ್ಟ್ರಾರ್ ಅವರು ಅರ್ಜಿಗಳನ್ನು ವಿಚಾರಣೆಗೆ ಲಿಸ್ಟ್ ಮಾಡುತ್ತಾರೆ. ಅದರಂತೆ ವಿಚಾರಣೆಯ ದಿನಾಂಕ ಮತ್ತು ಸಮಯ ನಿಗದಿಯಾಗಲಿದೆ. ಲಿಸ್ಟ್ ಮಾಡಿದ ಬಳಿಕ ರಿಜಿಸ್ಟ್ರಾರ್ ಅವರು ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ನೋಟಿಸ್ ಕಳುಹಿಸುತ್ತಾರೆ. ಅವರು ನಿಗಡಿಪಡಿಸಿದ ದಿನಾಂಕ ಮತ್ತು ಸಮಯಕ್ಕೆ ವಿಚಾರಣೆಗೆ ಹಾಜರಾಗಬೇಕು. ತುರ್ತಾಗಿ ವಿಚಾರಣೆ ಎಂದರೂ ಈಗ ಅನೇಕ ಪ್ರಮುಖ ಪ್ರಕರಣಗಳು ನ್ಯಾಯಾಲಯದ ಮುಂದೆ ಇರುವುದರಿಂದ ಅವುಗಳ ವಿಚಾರಣೆ ನಡೆದು ಈ ಅರ್ಜಿ ಸರದಿ ಬರುವಾಗ ಸಮಯ ತೆಗೆದುಕೊಳ್ಳುತ್ತದೆ.
ಮತ್ತೆ ಮನವಿ ಸಲ್ಲಿಸುವಂತಿಲ್ಲ
ನ್ಯಾಯಪೀಠದ ಸೂಚನೆಯಂತೆ ರಿಜಿಸ್ಟ್ರಾರ್ ಅವರು ಅರ್ಜಿಯ ವಿಚಾರಣೆಯನ್ನು ಲಿಸ್ಟ್ ಮಾಡುತ್ತಾರೆ. ಹಾಗೆಂದ ಮಾತ್ರಕ್ಕೆ ಕೂಡಲೇ ಅದು ವಿಚಾರಣೆಗೆ ಬರುತ್ತದೆ ಎನ್ನುವಂತಿಲ್ಲ. ಅಲ್ಲದೆ, ಈಗಿನ ಸಂದರ್ಭದಲ್ಲಿ ಅದನ್ನು ತುರ್ತಾಗಿ ವಿಚಾರಣೆಗೆ ಪರಿಗಣಿಸುವಂತೆ ಮತ್ತೆ ಮನವಿ ಮಾಡಲೂ ಅನರ್ಹ ಶಾಸಕರಿಗೆ ಅವಕಾಶವಿಲ್ಲ. ಏಕೆಂದರೆ ಈಗಾಗಲೇ ಮೂರು ಬಾರಿ ಅನರ್ಹ ಶಾಸಕರು ತುರ್ತು ವಿಚಾರಣೆಗೆ ಮನವಿ ಮಾಡಿದ್ದರು. ಈಗ ಆ ಗರಿಷ್ಠ ಮಿತಿ ಮೀರಿರುವುದರಿಂದ ಮುಂದೆ ವಿಚಾರಣೆಗೆ ಬರುವವರೆಗೂ ಕಾಯಬೇಕಾಗುತ್ತದೆ.
ಅತೃಪ್ತರ ಕಾಲೆಳೆದ ದೆಹಲಿ ವಾರ್ತೆ ಜಾಹೀರಾತು, ಏನಿದರ ಹಕೀಕತ್ತು
ಎರಡು ಬಾರಿ ತಿರಸ್ಕರಿಸಿದ್ದ ನ್ಯಾಯಪೀಠ
ಅನರ್ಹ ಶಾಸಕರ ಅರ್ಜಿಯನ್ನು ತುರ್ತು ವಿಚಾರಣೆಗೆ ಒಳಪಡಿಸುವಂತೆ ಅವರ ಪರ ವಕೀಲ ಮುಕುಲ್ ರೋಹಟಗಿ ಅವರು ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರ ಪೀಠಕ್ಕೆ ಮನವಿ ಮಾಡಿದ್ದರು. ಆದರೆ, ಅವರ ಮನವಿಯನ್ನು ಪುರಸ್ಕರಿಸಿರಲಿಲ್ಲ. ಬಳಿಕ ರೋಹಟಗಿ ಅವರು ನ್ಯಾ. ರಮಣ ಅವರ ನ್ಯಾಯಪೀಠದಲ್ಲಿ ತುರ್ತು ವಿಚಾರಣೆಗೆ ಮನವಿ ಮಾಡಿದ್ದರು. ಇದು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸೋಮವಾರ ಹೇಳಿತ್ತು. ಮಂಗಳವಾರ ವಕೀಲರಾದ ಗಿರಿ ಅವರ ಮೂಲಕ ಪುನಃ ಮನವಿ ಸಲ್ಲಿಸಲಾಗಿತ್ತು.