Breaking ನಿರ್ಭಯಾ ಪ್ರಕರಣ ಅಪರಾಧಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ
ನವದೆಹಲಿ, ಜನವರಿ 27: ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಒಳಗಾಗಿರುವ ನಾಲ್ವರು ಆರೋಪಿಗಳ ಪೈಕಿ ಮುಕೇಶ್ ಸಿಂಗ್ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ.
ತಮ್ಮ ಕ್ಯುರೇಟಿವ್ ಅರ್ಜಿ ವಜಾಗೊಂಡ ಬಳಿಕ ಅಪರಾಧಿ ಮುಕೇಶ್ ಸಿಂಗ್, ಕ್ಷಮಾದಾನದ ಅರ್ಜಿ ಸಲ್ಲಿಸಿದ್ದ. ದೆಹಲಿ ಸರ್ಕಾರದಿಂದ ರಾಷ್ಟ್ರಪತಿಯವರೆಗಿನ ಎಲ್ಲ ಹಂತಗಳಲ್ಲಿಯೂ ಆತನ ಅರ್ಜಿ ತಿರಸ್ಕೃತಗೊಂಡಿತ್ತು. ತನ್ನ ಕ್ಷಮಾದಾನದ ಅರ್ಜಿ ತಿರಸ್ಕಾರವಾಗಿದ್ದನ್ನು ಪ್ರಶ್ನಿಸಿ ಮುಕೇಶ್ ಸಿಂಗ್, ಸುಪ್ರೀಂಕೋರ್ಟ್ಗೆ ಮತ್ತೆ ಮನವಿ ಸಲ್ಲಿಸಿದ್ದ. ತನ್ನ ಅರ್ಜಿಯನ್ನು ತುರ್ತು ವಿಚಾರಣೆ ನಡೆಸುವಂತೆ ಮತ್ತು ಫೆ. 1ರಂದು ನಿಗದಿಯಾಗಿರುವ ಗಲ್ಲುಶಿಕ್ಷೆಗೆ ತಡೆ ನೀಡುವಂತೆ ಆತ ಕೋರಿದ್ದ.
ಪಟ್ಟಿಗೆ ಸೇರಿಸಲು ಸೂಚನೆ
ಈ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಲು ಒಪ್ಪಿಕೊಂಡ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ, ನ್ಯಾಯಾಲಯದ ರಿಜಿಸ್ಟ್ರಿಯನ್ನು ಸಂಪರ್ಕಿಸಿ ಕೂಡಲೇ ಅರ್ಜಿ ವಿಚಾರಣೆಯನ್ನು ಪಟ್ಟಿಗೆ ಸೇರ್ಪಡೆ ಮಾಡುವಂತೆ ಮುಕೇಶ್ ಪರ ವಕೀಲರಿಗೆ ಸೂಚಿಸಿದರು.
ನಿರ್ಭಯಾ ಕೇಸ್ ಅಪರಾಧಿಗೆ ವಿಷವುಣಿಸಿದ್ದರು: ವಕೀಲ ಆರೋಪ
ಮೊದಲ ಆದ್ಯತೆ ಎಂದ ಕೋರ್ಟ್
ಫೆ.1ರಂದು ಒಬ್ಬರು ಗಲ್ಲುಶಿಕ್ಷೆಗೆ ಒಳಗಾಗುತ್ತಿದ್ದಾರೆ ಎಂದರೆ ಅವರ ಪ್ರಕರಣದ ಅರ್ಜಿ ವಿಚಾರಣೆ ನ್ಯಾಯಾಲಯದ ಮೊದಲ ಆದ್ಯತೆ ಆಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
ಕ್ಷಮಾದಾನದ ಮನವಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿರುವ ಮುಕೇಶ್, ಫೆ. 1ರಂದು ಜಾರಿಯಾಗಬೇಕಿರುವ ಮರಣದಂಡನೆಗೂ ತಡೆ ನೀಡಬೇಕೆಂದು ಕೋರಿದ್ದಾನೆ.
ಅಪರಾಧಿಗೆ ನಿಧಾನ ವಿಷ
ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಕುಮಾರ್ ಶರ್ಮಾನಿಗೆ ನಿಧಾನವಾಗಿ ವಿಷವುಣಿಸಲಾಗುತ್ತಿದೆ. ಹೀಗಾಗಿ ಆತ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಮಗೆ ಅವರ ವೈದ್ಯಕೀಯ ವರದಿಯನ್ನು ನೀಡುತ್ತಿಲ್ಲ ಎಂದು ಅಪರಾಧಿಗಳ ಪರ ವಕೀಲ ಎಪಿ ಸಿಂಗ್ ಆರೋಪಿಸಿದ್ದರು.
ದಾಖಲೆ ನೀಡಲು ಸತಾಯಿಸುತ್ತಿದ್ದಾರೆ
ಜೈಲು ಅಧಿಕಾರಿಗಳು ಶುಕ್ರವಾರ ರಾತ್ರಿ ತಮಗೆ ಕೆಲವು ದಾಖಲೆಗಳನ್ನು ನೀಡಿದ್ದಾರೆ. ಆದರೆ ವಿನಯ್ನ ಖಾಸಗಿ ಡೈರಿ ಮತ್ತು ವೈದ್ಯಕೀಯ ದಾಖಲೆಗಳನ್ನು ನೀಡಿಲ್ಲ ಎಂದಿದ್ದಾರೆ. 'ತಿಹಾರ್ ಅಧಿಕಾರಿಗಳು ತಮ್ಮ ಬಳಿ ಅಂತಹ ಯಾವುದೇ ದಾಖಲೆ ಇಲ್ಲ ಎನ್ನುತ್ತಾರೆ. ವಿನಯ್ಗೆ ನಿಧಾನ ವಿಷ ಉಣಿಸಲಾಗುತ್ತಿತ್ತು. ಹೀಗಾಗಿಯೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿನಯ್ ಅನೇಕ ಪೇಂಟಿಂಗ್ಗಳನ್ನು ಮಾಡಿದ್ದಾನೆ. ಅದನ್ನು ರಾಷ್ಟ್ರಪತಿ ಅವರಿಗೆ ತಿಳಿಸಬೇಕಿತ್ತು. ಆತ ಆ ಪೇಂಟಿಂಗ್ಗಳಿಂದ ಹಣವನ್ನೂ ಸಂಪಾದಿಸಿದ್ದಾನೆ. ಅದನ್ನು ಕೂಡ ಅವರಿಗೆ ಮಾಹಿತಿ ನೀಡಬೇಕಿತ್ತು ಎಂದು ಹೇಳಿದ್ದಾರೆ.