ಬಿಎಸ್ವೈ ಆಡಿಯೋ ಸಾಕ್ಷಿ: ಅನರ್ಹ ಶಾಸಕರಿಗೆ ತೀವ್ರ ಸಂಕಷ್ಟ
ನವದೆಹಲಿ, ನವೆಂಬರ್ 4: ತಮ್ಮನ್ನು ಅನರ್ಹಗೊಳಿಸಿದ ಸ್ಪೀಕರ್ ನಿರ್ಧಾರದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ 17 ಮಂದಿ ಅನರ್ಹ ಶಾಸಕರಿಗೆ ಭಾರಿ ಸಂಕಷ್ಟ ಎದುರಾಗಿದೆ. ಅನರ್ಹ ಶಾಸಕರ ರಾಜೀನಾಮೆ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದು ಎನ್ನಲಾದ ಆಡಿಯೋವನ್ನು ಈ ಪ್ರಕರಣದಲ್ಲಿ ಸಾಕ್ಷಿಯಾಗಿ ಪರಿಗಣಿಸಲು ಸೋಮವಾರ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.
ಇದರಿಂದ ಉಪ ಚುನಾವಣೆಗೂ ಮುನ್ನ ತಮ್ಮ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಲಿದೆ ಎಂಬ ಭರವಸೆ ಹೊಂದಿರುವ ಅನರ್ಹ ಶಾಸಕರಲ್ಲಿ ತಳಮಳ ಹೆಚ್ಚಾಗಿದೆ. ಒಂದು ವೇಳೆ ಬಿಎಸ್ ಯಡಿಯೂರಪ್ಪ ಅವರ ಆಪರೇಷನ್ ಕಮಲದ ಕುರಿತಾದ ಆಡಿಯೋವನ್ನು ಸುಪ್ರೀಂಕೋರ್ಟ್ ಸಾಕ್ಷಿಯನ್ನಾಗಿ ಪರಿಗಣಿಸಿದರೆ ಅದು ಅನರ್ಹ ಶಾಸಕರಿಗೆ ಮುಳುವಾಗುವ ಸಾಧ್ಯತೆ ಇದೆ.
ಸುಪ್ರೀಂ ಅಂಗಣದಲ್ಲಿಂದು ಬಿಎಸ್ವೈ ಆಡಿಯೋ: ಅನರ್ಹರನ್ನು ದೇವರೇ ಕಾಪಾಡಬೇಕು!
ಈಗಾಗಲೇ ಅನರ್ಹ ಶಾಸಕರ ಅರ್ಜಿಯ ಪರ ಮತ್ತು ವಿರುದ್ಧದ ವಾದ ವಿವಾದಗಳನ್ನು ಆಲಿಸಿರುವ ಸುಪ್ರೀಂಕೋರ್ಟ್ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಅದರ ಬಳಿಕ ಯಡಿಯೂರಪ್ಪ ಅವರ ಆಡಿಯೋ ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಆಡಿಯೋ ಮಹತ್ವದ ಸಾಕ್ಷಿಯಾಗಿರುವುದರಿಂದ ಅದನ್ನು ಪರಿಗಣಿಸಬೇಕು ಎಂದು ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದರು. ಅದನ್ನು ನ್ಯಾಯಾಲಯ ಒಪ್ಪಿಕೊಂಡಿದೆ.
ಕಪಿಲ್ ಸಿಬಲ್ ವಾದ
ಬಿಎಸ್ ಯಡಿಯೂರಪ್ಪ ಅವರ ಆಡಿಯೋ ವಿಚಾರವನ್ನು ನ್ಯಾಯಮೂರ್ತಿ ರಮಣ ಅವರ ನ್ಯಾಯಪೀಠದಲ್ಲಿ ಪ್ರಸ್ತಾಪಿಸಿದ ವಕೀಲ ಕಪಿಲ್ ಸಿಬಲ್, ತಮ್ಮ ವಾದವನ್ನು ಪರಿಗಣಿಸುವಂತೆ ಕೋರಿದರು. ಕೋರ್ಟ್ ತೀರ್ಪು ಕಾಯ್ದಿರಿಸಿದ ಬಳಿಕ ಈ ಬೆಳವಣಿಗೆ ಆಗಿದೆ. ನಮಗೆ ಮಹತ್ವದ ದಾಖಲೆಗಳು ಸಿಕ್ಕಿವೆ. ಈ ಪ್ರಕರಣದಲ್ಲಿ ಇದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಸಾಕ್ಷಿಯಾಗಿ ಪರಿಗಣನೆ
ಕಾಂಗ್ರೆಸ್ ಪರ ವಕೀಲರ ಮನವಿ ಆಲಿಸಿದ ನ್ಯಾ. ರಮಣ, 'ಸಿಬಲ್ ನೀವು ಹಿರಿಯ ವಕೀಲರು. ಎಲ್ಲ ವಾದ ಮಂಡನೆ ಮಾಡಿದ್ದೀರಿ. ಇನ್ನೇನು ಬಾಕಿ ಇದೆ? ಎಂದು ಕೇಳಿದರು. ಇದು ಅತ್ಯಂತ ಮಹತ್ವದ ವಿಷಯ ಆಗಿರುವುದರಿಂದ ಇದನ್ನು ಪರಿಗಣಿಸಲೇಬೇಕು ಎಂದು ಸಿಬಲ್ ಹೇಳಿದರು. ಹಾಗಾದರೆ ನಾಳೆ (ಮಂಗಳವಾರ) ವಿಚಾರಣೆಗೆ ಮತ್ತೊಮ್ಮೆ ಪೀಠ ರಚನೆ ಮಾಡುವಂತೆ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡುತ್ತೇವೆ. ನಾಳೆ ಐದು ನಿಮಿಷಗಳ ಕಾಲ ವಿಚಾರಣೆ ನಡೆಯಲಿ. ಈ ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸುತ್ತೇವೆ ಎಂದು ನ್ಯಾಯಮೂರ್ತಿ ಹೇಳಿದರು.
ರಾಜ್ಯಪಾಲ ಕೈಗೆ ಆಡಿಯೋ ಬಾಂಬ್: ಸರ್ಕಾರ ವಜಾಕ್ಕೆ ಕೆಪಿಸಿಸಿ ಆಗ್ರಹ
ಸಿದ್ದರಾಮಯ್ಯ ಕಾರಣ-ಬಿಎಸ್ವೈ
ಅನರ್ಹ ಶಾಸಕರು ರಾಜೀನಾಮೆ ನೀಡಲು ಸಿದ್ದರಾಮಯ್ಯ ಕಾರಣ. ಈ ವಿಚಾರದಲ್ಲಿ ರಮೇಶ್ ಕುಮಾರ್ ಮತ್ತು ಸಿದ್ದರಾಮಯ್ಯ ಷಡ್ಯಂತ್ರ ಮಾಡಿ ಅವರನ್ನು ಅನರ್ಹಗೊಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೋಮವಾರ ಆರೋಪಿಸಿದರು. ಸುಪ್ರೀಂಕೋರ್ಟ್ ಜನರಲ್ಲಿ ಗೊಂದಲ ಮೂಡಿಸುವುದು ಸರಿಯಲ್ಲ ಎಂದ ಯಡಿಯೂರಪ್ಪ. ನಿಮಗೆ ತಾಕತ್ತಿದ್ದರೆ ಚುನಾವಣೆ ಎದುರಿಸಿ. ನೀವು ಸೋಲುವುದು ಖಚಿತ. ವಿಪಕ್ಷ ಸ್ಥಾನದಲ್ಲಿಯೇ ಮತ್ತೆ ಕೂರುವುದು ನಿಶ್ಚಿತ ಎಂದು ಸಿದ್ದರಾಮಯ್ಯಗೆ ಸವಾಲು ಹಾಕಿದರು.
ಆಡಿಯೋದಿಂದ ನನಗೆ ಡ್ಯಾಮೇಜ್ ಆಗುವುದಿಲ್ಲ. ಸಿದ್ದರಾಮಯ್ಯ ಇರುವವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಅನರ್ಹ ಶಾಸಕರ ರಾಜೀನಾಮೆಗೂ ನಮಗೂ ಸಂಬಂಧವಿಲ್ಲ. ಕಾಂಗ್ರೆಸ್ ಆರೋಪ ಸತ್ಯಕ್ಕೆ ದೂರ. ಅವರು ಆರೋಪಿಸಿದಂತೆ ನಾನು ಮಾತನಾಡಿಲ್ಲ. ನನ್ನ ಹೇಳಿಕೆ ತಿರುಚಲಾಗಿದೆ. ಸುಪ್ರೀಂಕೋರ್ಟ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಸುಪ್ರೀಂಕೋರ್ಟ್ಗೆ ಕಾಂಗ್ರೆಸ್
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕೋರ್ಟ್ ಕಮಿಟಿ ಸಭೆಯಲ್ಲಿ ಮಾತನಾಡುವ ವೇಳೆ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಆಪರೇಷನ್ ಕಮಲದ ಉಸ್ತುವಾರಿಯಲ್ಲಿ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಹೊತ್ತಿದ್ದರು ಎಂದು ಹೇಳಿದ್ದರು ಎನ್ನಲಾದ ಆಡಿಯೋ ಬಹಿರಂಗವಾಗಿತ್ತು. ಇದನ್ನು ಕಾಂಗ್ರೆಸ್ ಸುಪ್ರೀಂಕೋರ್ಟ್ ಅಂಗಳಕ್ಕೆ ಕೊಂಡೊಯ್ದಿತ್ತು.