ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಪ್ರಕರಣ: ಹೊಸ ನ್ಯಾಯಪೀಠ ಸ್ಥಾಪನೆಗೆ ಮನವಿ
ನವದೆಹಲಿ, ಆಗಸ್ಟ್ 25: ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧದ 2009ರ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿದ್ದು, ಸೂಕ್ತ ನ್ಯಾಯಪೀಠದ ಎದುರು ಈ ಪ್ರಕರಣವನ್ನು ಇರಿಸುವಂತೆ ಮುಖ್ಯ ನ್ಯಾಯಮೂರ್ತಿಗೆ ಮನವಿ ಮಾಡಿದೆ.
'ನಾನು ಇನ್ನು ಕೆಲವು ದಿನಗಳಲ್ಲಿ ಪದವಿಯಿಂದ ಕೆಳಕ್ಕಿಳಿಯುತ್ತಿದ್ದೇನೆ. ಈ ಪ್ರಕರಣವು ವಿಸ್ತೃತವಾದ ವಿಚಾರಣೆಗೆ ಒಳಪಡಬೇಕಾದ ಅವಶ್ಯಕತೆಯಿದೆ' ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ಹೇಳಿದರು. 2009ರ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ಸೆ. 10ಕ್ಕೆ ಮುಂದೂಡಲಾಗಿದೆ.
ನ್ಯಾಯಾಂಗ ನಿಂದನೆ: ಸುಪ್ರೀಂಕೋರ್ಟ್ ಕ್ಷಮೆ ಕೋರಲು ಪ್ರಶಾಂತ್ ಭೂಷಣ್ ನಕಾರ
ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ನ್ಯಾಯಾಂಗ ನಿಂದನೆ, ನ್ಯಾಯಮೂರ್ತಿಗಳ ವಿರುದ್ಧದ ಟೀಕೆ, ಅವುಗಳ ಪ್ರಕ್ರಿಯೆ, ಸ್ವಯಂಪ್ರೇರಿತ ದೂರುಗಳ ಶಿಷ್ಟಾಚಾರಗಳ ಸಂಗತಿಗಳ ಕುರಿತು ಆಳವಾದ ವಾದ ವಿವಾದ ನಡೆಯಬೇಕಾದ ಅಗತ್ಯಗಳಿವೆ ಎಂದು ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿತು.
ತೆಹೆಲ್ಕಾ ನಿಯತಕಾಲಿಕೆಗೆ 2009ರಲ್ಲಿ ನೀಡಿದ್ದ ಸಂದರ್ಶನದಲ್ಲಿ ವಕೀಲ ಪ್ರಶಾಂತ್ ಭೂಷಣ್, ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದವರು ಭ್ರಷ್ಟರಾಗಿದ್ದರು ಎಂದು ಹೇಳಿಕೆ ನೀಡಿದ್ದರು. ಇದರ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು.
ನ್ಯಾ. ಕರ್ಣನ್ ವಿಚಾರದಲ್ಲಿ ಕುರುಡಾಗಿದ್ದ ಭಾರತ, ಪ್ರಶಾಂತ್ ಭೂಷಣ್ ವಿಚಾರದಲ್ಲಿ ಎಚ್ಚೆತ್ತಿದೆ...
ಪ್ರಶಾಂತ್ ಭೂಷಣ್ ಪರ ಹಾಜರಿದ್ದ ವಕೀಲ ರಾಜೀವ್ ಧವನ್, ಈ ಪ್ರಕರಣವನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸುವಂತೆ ಕೋರಿದರು. ಪ್ರಶಾಂತ್ ಭೂಷಣ್ ಅವರು ಕಾನೂನಿನ ಕುರಿತಾದ ಪ್ರಶ್ನೆಗಳನ್ನು ಎತ್ತಿದ್ದು, ಅದಕ್ಕೆ ಉತ್ತರಗಳು ಬೇಕಿವೆ ಎಂದರು.