ಸಿಬಿಐ ಮಧ್ಯಂತರ ನಿರ್ದೇಶಕರಿಗೆ ಕಂಟಕ: ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ
ನವದೆಹಲಿ, ಜನವರಿ 16: ಐಪಿಎಸ್ ಅಧಿಕಾರಿ ಎನ್. ನಾಗೇಶ್ವರ್ ರಾವ್ ಅವರನ್ನು ಸಿಬಿಐ ಮಧ್ಯಂತರ ನಿರ್ದೇಶಕರನ್ನಾಗಿ ನೇಮಿಸಿದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿರುವ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ.
ಜನವರಿ 10ರಂದು ಕೇಂದ್ರ ಸರ್ಕಾರದ ನೇಮಕವನ್ನು ಪ್ರಶ್ನಿಸಿ ಎನ್ಜಿಓ ಒಂದು ಅರ್ಜಿ ಸಲ್ಲಿಸಿತ್ತು. ಅದನ್ನು ವಿಚಾರಣೆಗೆ ತೆಗೆದುಕೊಳ್ಳಲು ಬುಧವಾರ ಒಪ್ಪಿಗೆ ಸೂಚಿಸಿದ ಸುಪ್ರೀಂಕೋರ್ಟ್, ಅದರ ತುರ್ತು ವಿಚಾರಣೆಗೆ ಅನುಮತಿ ಮನವಿಯನ್ನು ಪರಿಗಣನೆಗೆ ತೆಗೆದುಕೊಂಡು ಮುಂದಿನ ವಾರಕ್ಕೆ ನಿಗದಿಪಡಿಸಿತು.
ಸಿಬಿಐ ಸಮಗ್ರತೆ ಎತ್ತಿಹಿಡಿಯಲು ಪ್ರಯತ್ನಿಸಿದ್ದೆ: ಮೌನ ಮುರಿದ ವರ್ಮಾ
ಕಾಮನ್ ಕಾಸ್ ಎನ್ಜಿಓ ಮತ್ತು ಆರ್ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಪರವಾಗಿ ಹಾಜರಾಗಿದ್ದ ವಕೀಲ ಪ್ರಶಾಂತ್ ಭೂಷಣ್, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಎಲ್.ಎನ್. ರಾವ್ ಮತ್ತು ಎಸ್.ಕೆ. ಕೌಲ್ ಅವರನ್ನು ಒಳಗೊಂಡ ನ್ಯಾಯಪೀಠಕ್ಕೆ ಈ ಶುಕ್ರವಾರವೇ ವಿಚಾರಣೆ ನಡೆಸುವಂತೆ ಕೋರಿದರು.
ಈ ಶುಕ್ರವಾರವೇ ವಿಚಾರಣೆ ನಡೆಸಲು ಖಂಡಿತಾ ಸಾಧ್ಯವಿಲ್ಲ ಎಂದ ಮುಖ್ಯ ನ್ಯಾಯಮೂರ್ತಿ, ಮುಂದಿನ ವಾರ ವಿಚಾರಣೆ ನಡೆಸಬಹುದು ಎಂದರು.
ಅಲೋಕ್ ವರ್ಮಾ ವಿರುದ್ಧ ಭ್ರಷ್ಟಾಚಾರದ ಸಾಕ್ಷಿ ಇಲ್ಲ : ನ್ಯಾ. ಎಕೆ ಪಟ್ನಾಯಕ್
ಸಿಬಿಐ ನಿರ್ದೇಶಕರಾಗಿದ್ದ ಅಲೋಕ್ ವರ್ಮಾ ಅವರನ್ನು ಭ್ರಷ್ಟಾಚಾರದ ಆರೋಪದ ಮೇರೆಗೆ ಕಡ್ಡಾಯ ರಜೆ ಮೇಲೆ ಕಳುಹಿಸಿದ್ದಾಗ ನಾಗೇಶ್ವರ್ ರಾವ್ ಅವರನ್ನು ಮಧ್ಯಂತರ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಕಾನೂನು ಹೋರಾಟದಲ್ಲಿ ಜಯಗಳಿಸಿದ್ದ ಅಲೋಕ್ ವರ್ಮಾ ಮತ್ತೆ ಸಿಬಿಐ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದರು.
ಆದರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಳಗೊಂಡ ಆಯ್ಕೆ ಸಮಿತಿಯು ಎರಡೇ ದಿನಕ್ಕೆ ಅಲೋಕ್ ವರ್ಮಾ ಅವರನ್ನು ವಜಾಗೊಳಿಸಿತ್ತು. ಅದರ ಬೆನ್ನಲ್ಲೇ ಜ.10ರಂದು ನಾಗೇಶ್ವರ್ ರಾವ್ ಅವರನ್ನು ಮಧ್ಯಂತರ ನಿರ್ದೇಶಕರನ್ನಾಗಿ ಮರು ನೇಮಕ ಮಾಡಲಾಗಿತ್ತು.
ಸಮಿತಿಯಲ್ಲಿ ಇರಲು ಇಷ್ಟವಿಲ್ಲ ಎಂದು ಮೋದಿ, ಖರ್ಗೆಗೆ ತಿಳಿಸಿದ್ದ ನ್ಯಾಯಮೂರ್ತಿ
ರಾವ್ ಅವರನ್ನು ಉನ್ನತ ಅಧಿಕಾರವುಳ್ಳ ಆಯ್ಕೆ ಸಮಿತಿ ನೂತನ ನಿರ್ದೇಶಕರನ್ನು ನೇಮಿಸುವವರೆಗೂ ಇದೇ ಹುದ್ದೆಯಲ್ಲಿ ಮುಂದುವರಿಸುವಂತೆ ನೇಮಿಸಲಾಗಿದೆ.