'ಸೂಪರ್ 30' ಖ್ಯಾತಿಯ ಆನಂದ್ರಿಂದ ದೆಹಲಿ ಸರ್ಕಾರಿ ಮಕ್ಕಳಿಗೆ ಪಾಠ
ನವದೆಹಲಿ,ಜುಲೈ 25: ಸೂಪರ್ 30 ಖ್ಯಾತಿಯ ಆನಂದ್ ಕುಮಾರ್ ಅವರು ದೆಹಲಿಯ ಸರ್ಕಾರಿ ಪಿಯು ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದಾರೆ.
ಸೂಪರ್ 30 ಎನ್ನುವ ಐಐಟಿ ಜೆಇ ಸ್ಪರ್ಧಾತ್ಪಕ ಪರೀಕ್ಷೆಗಳ ಉಚಿತ ತರಬೇತಿ ಕೇಂದ್ರದ ಮೂಲಕ ವಿಶ್ವಾದ್ಯಂತ ಹೆಸರು ಮಾಡಿರುವ ಆನಂದ್ ಕುಮಾರ್ ಈ ದೆಹಲಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಪಿಯು ವಿದ್ಯಾರ್ಥಿಗಳಿಗೆ ಉಚಿತ ಪಾಠ ಮಾಡಲು ಒಪ್ಪಿಕೊಂಡಿದ್ದಾರೆ.
ತಿಂಗಳಿಗೊಮ್ಮೆ ಆನ್ಲೈನ್ ಪಾಠ ಆನಂದ್ ಕುಮಾರ್ ಆನ್ಲೈನ್ ತರಗತಿ ತೆಗೆದುಕೊಳ್ಳಲಿದ್ದಾರೆ. ದೆಹಲಿಯ ಕೆಲ ಶಾಲೆಗಳಿಗೆ ಆನಂದ್ ಕುಮಾರ್ ಅವರೊಂದಿಗೆ ಭೇಟಿ ನೀಡಿದ ಬಳಿಕ ಉಪಮುಖ್ಯಮಂತ್ರಿ ಮನೀಶ್ ಸಿಸೊಡಿಯಾ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
2002ರಲ್ಲಿ ಪಾಟ್ನಾದಲ್ಲಿ ಸೂಪರ್ 30 ತರಬೇತಿ ಸಂಸ್ಥೆಯನ್ನು ಆರಂಭಿಸಿದ್ದ ಆನಂದ್ ಕುಮಾರ್ ಭಾರತ ಹಾಗೂ ವಿಶ್ವದಾದ್ಯಂತ ಜನಮನ್ನಣೆ ಗಳಿಸಿದ್ದಾರೆ. ಆದರೆ ಇತ್ತೀಚೆಗೆ ಹೃತಿಕ ರೋಷನ್ ನಟನೆ ಸೂಪರ್ 30 ಚಿತ್ರ ಬಿಡುಗಡೆಯಾದ ಬಳಿಕ ಆನಂದ್ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಅವರ ಜೀವನಾಧಾರಿತ ಕಥೆಯನ್ನೇ ಈ ಚಿತ್ರದಲ್ಲಿ ನಿರೂಪಿಸಲಾಗಿದೆ.
ಈ ಚಿತ್ರಕ್ಕೆ ಈಗಾಗಲೇ ಬಿಹಾರ , ಉತ್ತರಪ್ರದೇಶ, ದೆಹಲಿ ಸರ್ಕಾರಗಳು ತೆರಿಗೆ ವಿನಾಯಿತಿ ನೀಡಿವೆ.ಏತನ್ಮಧ್ಯೆ ಶಾಕಿಂಗ್ ನ್ಯೂಸ್ ಹೊರಬಂದಿದ್ದು, ಆನಂದ್ ಕುಮಾರ್ ಕಳೆದ ಕೆಲ ದಿನಗಳಿಂದ ಮೆದುಳು ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ.
ಪರಿಣಾಮವಾಗಿ ಅವರ ಬಲಕಿವಿ ಬಹುತೇಕ ಕಿವುಡಾಗಿದೆ.ಇದಕ್ಕೆ ಸೂಕ್ತ ಚಿಕಿತ್ಸೆ ಅಸಾಧ್ಯ ಎಂದು ವೈದ್ಯರು ಅಸಹಾಯಕತೆ ಪ್ರದರ್ಶಿಸಿದ್ದಾರೆ. ಹೀಗಾಗಿ ಸಣ್ಣ ವಯಸ್ಸಿನಲ್ಲೇ ಬಯೋಪಿಕ್ ನಿರ್ಮಾಣಕ್ಕೆ ಆನಂದ್ ಕುಮಾರ್ ಅನುಮತಿ ನೀಡಿದ್ದರು ಎನ್ನಲಾಗಿದೆ.