ಸುನಂದಾ ಪುಷ್ಕರ್ ದೇಹದ ಮೇಲೆ 15 ಗಾಯ: ಪೊಲೀಸರ ಮಾಹಿತಿ
ನವದೆಹಲಿ, ಆಗಸ್ಟ್ 21: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ಸಾವಿನ ಪ್ರಕರಣದಲ್ಲಿ ದೆಹಲಿ ಪೊಲೀಸರು ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.
ಶಶಿ ತರೂರ್ ಅವರ ಜತೆಗಿನ ಸಂಬಂಧ ಉತ್ತಮವಾಗಿರದಿದ್ದರಿಂದ ಸುನಂದಾ ಪುಷ್ಕರ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಆಕೆಯ ಸಾವಿಗೂ ಕೆಲವು ದಿನಗಳ ಮೊದಲು ಅವರ ದೇಹದ ಮೇಲೆ ವಿವಿಧ ಗಾಯದ ಕಲೆಗಳು ಉಂಟಾಗಿದ್ದವು ಎಂದು ಪೊಲೀಸರು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಸುನಂದಾ ಪುಷ್ಕರ್ ಕೇಸ್ : ಅರ್ನಬ್ ಗೋಸ್ವಾಮಿ ವಿರುದ್ಧ ಎಫ್ಐಆರ್ ದಾಖಲು?
ಅಲ್ಲದೆ, ಸುನಂದಾ ಅವರು ಆತ್ಮಹತ್ಯೆಯ ನಿರ್ಧಾರ ತೆಗೆದುಕೊಳ್ಳುವ ರೀತಿಯಲ್ಲಿ ಶಶಿ ತರೂರ್ ಅವರು ಪತ್ನಿಗೆ ಹಿಂಸೆ ನೀಡಿದ್ದರು ಎಂದು ಆರೋಪಿಸಿದ್ದಾರೆ.
ಪುಷ್ಕರ್ ಅವರ ಸಾವು ದೇಶದಾದ್ಯಂತ ಚರ್ಚೆಗೊಳಗಾಗಿತ್ತು. ತರೂರ್ ಅವರ ಅಕ್ರಮ ಸಂಬಂಧದ ಕುರಿತು ದಂಪತಿ ನಡುವೆ ಟ್ವಿಟ್ಟರ್ನಲ್ಲಿ ಕೂಡ ಹಲವು ಬಾರಿ ಜಗಳ ನಡೆದಿತ್ತು. ಪುಷ್ಕರ್ ಅವರ ದೇಹವು 2014ರ ಜನವರಿ 17ರಂದು ದೆಹಲಿಯ ಹೋಟೆಲ್ ಲೀಲಾದಲ್ಲಿ ಪತ್ತೆಯಾಗಿತ್ತು.
ತರೂರ್ ಮೇಲೆ ಎರಡು ಪ್ರಕರಣ
ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಕೇಂದ್ರದ ಮಾಜಿ ಸಚಿವ ತರೂರ್ ವಿರುದ್ಧ, ದೆಹಲಿ ಪೊಲೀಸರು ಐಪಿಸಿ ಸೆಕ್ಷನ್ 498-ಎ (ಪತಿ ಅಥವಾ ಅವರ ಸಂಬಂಧಿಯು ಮಹಿಳೆಯನ್ನು ಕ್ರೂರವಾಗಿ ನಡೆಸಿಕೊಂಡಿರುವುದು) ಮತ್ತು 306 (ಆತ್ಮಹತ್ಯೆಗೆ ಪ್ರಚೋದನೆ) ಆರೋಪಗಳನ್ನು ದಾಖಲಿಸಿದ್ದಾರೆ.
ವಿಷ ಸೇವನೆಯೇ ಸಾವಿಗೆ ಕಾರಣ
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಅವರಿಗೆ ಮರಣೋತ್ತರ ಪರೀಕ್ಷೆ ವರದಿ ಕುರಿತು ವಿವರಿಸಿದ ಪೊಲೀಸರು, ಪುಷ್ಕರ್ ಅವರ ಸಾವು ವಿಷ ಸೇವನೆಯಿಂದ ನಡೆದಿದೆ. ಅವರ ದೇಹದ ಮೊಣಕೈ, ಕೈ, ಕಾಲು ಮುಂತಾದ ಭಾಗಗಳಲ್ಲಿ 15 ಗಾಯದ ಕಲೆಗಳಾಗಿದ್ದವು ಎಂದು ತಿಳಿಸಿದ್ದಾರೆ.
ಸುನಂದಾ ಪುಷ್ಕರ್ ಕೇಸ್ : ಮತ್ತೊಮ್ಮೆ ಚಾರ್ಜ್ ಶೀಟ್ ಸಲ್ಲಿಕೆ
ಪಾಕ್ ಪತ್ರಕರ್ತೆ ಜತೆ ಸಂಬಂಧ
ಪತಿ ಶಶಿ ತರೂರ್ ಅವರೊಂದಿಗಿನ ಸಂಬಂಧ ಚೆನ್ನಾಗಿರಲಿಲ್ಲ. ಜಗಳದಿಂದ ಅವರು ಮಾನಸಿಕ ಕ್ಷೋಬೆಗೆ ಒಳಗಾಗಿದ್ದರು ಮತ್ತು ತೀವ್ರ ನೊಂದಿದ್ದರು ಎಂದು ಹಿರಿಯ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ನ್ಯಾಯಾಲಯಕ್ಕೆ ತಿಳಿಸಿದರು.
ಪಾಕಿಸ್ತಾನದ ಪತ್ರಕರ್ತೆ ಮೆಹರ್ ತರಾರ್ ಅವರೊಂದಿಗಿನ ತರೂರ್ ಅವರ ಸಂಬಂಧ ಕೂಡ ಸುನಂದಾ ಅವರ ನೋವನ್ನು ಹೆಚ್ಚಿಸಿತ್ತು ಎಂದು ಹೇಳಿದರು.
ಪಾಕ್ ಪತ್ರಕರ್ತೆಗೆ ತರೂರ್ ಇಮೇಲ್
ಚಾರ್ಜ್ಶೀಟ್ನಲ್ಲಿ ದಾಖಲಾಗಿರುವ ಸುನಂದಾ ಅವರ ಸ್ನೇಹಿತೆ ಮತ್ತು ಪತ್ರಕರ್ತೆ ನಳಿನಿ ಸಿಂಗ್ ಅವರ ಹೇಳಿಕೆಯನ್ನು ಪ್ರಾಸಿಕ್ಯೂಟರ್ ನ್ಯಾಯಾಲಯದ ಗಮನಕ್ಕೆ ತಂದರು.
ತರೂರ್ ಅವರು ಪಾಕ್ ಪತ್ರಕರ್ತೆ ತರಾರ್ ಅವರಿಗೆ ಕಳುಹಿಸಿದ ಇಮೇಲ್ನಲ್ಲಿ 'ನನ್ನ ಅತಿ ಪ್ರೀತಿಯ' ಎಂದು ಉಲ್ಲೇಖಿಸಿದ್ದನ್ನು ಕೂಡ ತಿಳಿಸಿದರು. ತರೂರ್ ಅವರ ಪರ ವಕೀಲ ವಿಕಾಸ್ ಪಹ್ವಾ, ಈ ಹೇಳಿಕೆಯನ್ನು ನಿರಾಕರಿಸಿದರು. ಅಂತಹ ಯಾವುದೇ ಇಮೇಲ್ ಕುರಿತು ತಮಗೆ ಮಾಹಿತಿ ಇಲ್ಲ ಎಂದು ಅವರು ಹೇಳಿದರು.
ಮುಂದಿನ ವಿಚಾರಣೆಯನ್ನು ಆಗಸ್ಟ್ 31ಕ್ಕೆ ನಿಗದಿಪಡಿಸಲಾಗಿದೆ.
ಸುನಂದಾ ಪುಷ್ಕರ್ ಸಾವು: ಸಂಸದ ಶಶಿ ತರೂರ್ ವಿರುದ್ಧ ಫೆ. 21ರಿಂದ ವಿಚಾರಣೆ