ಸುನಂದಾ ಪುಷ್ಕರ್ ಕೇಸ್ : ಅರ್ನಬ್ ಗೋಸ್ವಾಮಿ ವಿರುದ್ಧ ಎಫ್ಐಆರ್ ದಾಖಲು?
ನವದೆಹಲಿ, ಫೆಬ್ರವರಿ 11: ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಎಡಿಟರ್ ಇನ್ ಛೀಫ್ ಅರ್ನಬ್ ಗೋಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕುವಂತೆ ದೆಹಲಿ ಪೊಲೀಸರಿಗೆ ಪಟಿಯಾಲ ಹೌಸ್ ಕೋರ್ಟ್ ಸೂಚನೆ ನೀಡಿದೆ.
'ನನ್ನ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಜಾರಿಯಲ್ಲಿರುವ ವೇಳೆಯಲ್ಲೇ ಕೆಲವು ಗೌಪ್ಯ ಮಾಹಿತಿ, ದಾಖಲೆಗಳನ್ನು ಅಕ್ರಮವಾಗಿ ಅರ್ನಬ್ ಅವರು ಸಂಗ್ರಹಿಸಿದ್ದರು.
ಪೊಲೀಸರ ಅಂತರಿಕ ದಾಖಲೆ ಸಂಗ್ರಹ ಗೌಪ್ಯತೆಗೆ ಇದು ಧಕ್ಕೆ ತಂದಿದೆ. ತನಿಖೆ ಜಾರಿಯಲ್ಲಿರುವಾಗಲೇ ಈ ದಾಖಲೆಗಳನ್ನು ಸಾರ್ವಜನಿಕವಾಗಿ ಅಥವಾ ಮಾಧ್ಯಮದ ಮುಂದಿಡುವುದು ಅಪರಾಧವೆನಿಸುತ್ತದೆ' ಎಂದು ತಮ್ಮ ದೂರಿನಲ್ಲಿ ಸಂಸದ ಶಶಿ ತರೂರ್ ಹೇಳಿದ್ದಾರೆ.
ಕೊಲೆಯಾದರಾ ಸುನಂದಾ ಪುಷ್ಕರ್? ರಹಸ್ಯ ವರದಿಯಲ್ಲಿ ಏನಿದೆ?
ಗೋಸ್ವಾಮಿ ಅವರ ಟಿವಿ ವಾಹಿನಿಯು ಉದ್ದೇಶ ಪೂರ್ವಕವಾಗಿ, ಪೂರ್ವಗ್ರಹ ಪೀಡಿತವಾಗಿ ನನ್ನ ಮೇಲೆ ದೋಷಾರೋಪಣೆ ಮಾಡಿದ್ದು, ನನ್ನ ತೇಜೋವಧೆಗೆ ಮುಂದಾಗಿದೆ. ಇದು ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಮಾಡಿದ ಗಿಮಿಕ್ ಅಷ್ಟೇ ಎಂದು ತರೂರ್ ಹೇಳಿದ್ದಾರೆ.
ಅರ್ನಬ್ ವಿರುದ್ಧ ಮಾನನಷ್ಟ ಮೊಕದ್ದಮೆ
2017ರ ಮೇ 8 ರಿಂದ 13ರವರೆಗೆ ರಿಪಬ್ಲಿಕ್ ಚಾನೆಲ್ನಲ್ಲಿ ಸುನಂದಾ ಪುಷ್ಕರ್ ಸಾವಿನ ಕುರಿತಾದ ವರದಿ ಬಿತ್ತರಿಸಲಾಗಿತ್ತು. ಈ ವೇಳೆ ತಮ್ಮ ಘನತೆಗೆ ಧಕ್ಕೆ ಬರುವ ರೀತಿಯಲ್ಲಿ ಟೀಕೆಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ತರೂರ್, ಅರ್ನಬ್ ಗೋಸ್ವಾಮಿ, ರಿಪಬ್ಲಿಕ್ ನ್ಯೂಸ್ ಚಾನೆಲ್ ವಿರುದ್ಧ ದೆಹಲಿ ಹೈಕೋರ್ಟ್ ನಲ್ಲಿ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು ಅಲ್ಲದೇ, ತಮ್ಮ ಘನತೆಗೆ ಧಕ್ಕೆ ತಂದ ಕಾರಣ 2 ಕೋಟಿ ರು. ನಷ್ಟ ಪರಿಹಾರ ತುಂಬಬೇಕೆಂದು ಶಶಿ ತರೂರ್ ಒತ್ತಾಯಿಸಿದ್ದಾರೆ.
ಶಶಿ ತರೂರ್ ಗೆ ನಿರೀಕ್ಷಣಾ ಜಾಮೀನು
ಈ ಪ್ರಕರಣದಲ್ಲಿ ತರೂರ್ ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಕ್ರೌರ್ಯದ ಆರೋಪಗಳನ್ನು ಹೊರಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ದೆಹಲಿ ಕೋರ್ಟ್, ಮೇ 24ರಂದು ಪ್ರಕರಣವನ್ನು ಹೆಚ್ಚುವರಿ ಮುಖ್ಯ ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಧೀಶ ಸಮರ್ ವಿಶಾಲ್ ಅವರಿಗೆ ವರ್ಗಾಯಿಸಿತ್ತು.
ಪ್ರಕರಣದಲ್ಲಿ ಸಲ್ಲಿಸಲಾದ ದೋಷಾರೋಪವನ್ನು ಸಹ ಕೋರ್ಟ್ ಪರಿಗಣನೆಗೆ ತೆಗೆದುಕೊಂಡಿತ್ತು. ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರಿಗೆ ಜೂನ್ 05, 2018ರಲ್ಲಿ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.
ಸುನಂದಾ ಪುಷ್ಕರ್ ಅನುಮಾನಾಸ್ಪದ ಸಾವು
2014 ರ ಜನವರಿ 14 ರಂದು ದೆಹಲಿಯ ಪಂಚತಾರಾ ಹೋಟೆಲ್ ವೊಂದರಲ್ಲಿ ಸುನಂದಾ ಪುಷ್ಕರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಅವರು ಆತ್ಮಹತ್ಯೆ ಮಾಡಿಕೊಂದಿದ್ದಾರೆಂದು ಹೇಳಲಾಗಿತ್ತಾದರೂ, ಇದು ಅಸಹಜ ಸಾವು ಎಂದು ನಂತರ ದೂರು ದಾಖಲಾಗಿತ್ತು. ಶಶಿ ತರೂರ್ ವಿರುದ್ಧ ಭಾರತೀಯ ದಂಡ ಸಂಹಿತೆಯ 306 (ಆತ್ಮಹತ್ಯೆಗೆ ಕುಮ್ಮಕ್ಕು), 498 A (ಪತಿ ಅಥವಾ ಪತಿಯ ಸಂಬಂಧಿಕರಿಂದ ಮಹಿಳೆಯ ಮೇಲೆ ನಡೆಯುವ ಕ್ರೌರ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರೇಡಿಯೋ ವಿಕಿರಣ ವಸ್ತು ಪತ್ತೆಯಾಗಿರಲಿಲ್ಲ
ಸುನಂದಾ ಅವರ ವಿಸೇರಾದಲ್ಲಿ ವಿಷವಿದೆ ಎಂದು ಹೇಳಲಾಗಿತ್ತು. ಭಾರತದಲ್ಲಿರುವ ಪ್ರಯೋಗಾಲಯಗಳಲ್ಲಿ ಅಣುವಿಕಿರಣ ಪದಾರ್ಥ ಇರುವುದನ್ನು ಪತ್ತೆ ಮಾಡಲು ಸಾಧ್ಯವಿರಲಿಲ್ಲ. ಅಲ್ಲದೆ, ಸುನಂದಾ ಸಾವಿಗೆ ಬಳಸಲಾದ ವಿಷವನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿತ್ತು. ಈ ವಿಷದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಎಫ್ ಬಿಐ ನೆರವು ಕೋರಲಾಯಿತು. ವಾಷಿಂಗ್ಟನ್ ನಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಸುನಂದಾ ಅವರ ವಿಸೇರಾ ಸ್ಯಾಂಪಲ್ ಗಳ ಪರೀಕ್ಷೆ ನಡೆಸಲಾಯಿತು.
ಈ ವರದಿಯಂತೆ ಪೊಲೊನಿಯಂ ಸೇರಿದಂತೆ ಯಾವುದೇ ರೇಡಿಯೋ ವಿಕಿರಣ ವಸ್ತು ಪತ್ತೆಯಾಗಿಲ್ಲ. ಸುನಂದಾ ಪುಷ್ಕರ್ ಸಾವಿಗೆ ಪೊಲೊನಿಯಂ ಕಾರಣ ಎಂಬ ಅನುಮಾನ ವ್ಯಕ್ತವಾದ ಹಿನ್ನಲೆಯಲ್ಲಿ ಈ ಪರೀಕ್ಷೆ ನಡೆಸಲಾಗಿತ್ತು.