ಸುನಂದಾ ಪುಷ್ಕರ್ ಪ್ರಕರಣ: ಸ್ವಾಮಿಗೆ ಸುಪ್ರೀಂ ಪ್ರಶ್ನೆ
ನವದೆಹಲಿ, ಜನವರಿ 29: ಸುನಂದಾ ಪುಷ್ಕರ್ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ನೀವು ಮಾಡಿರುವ ಆರೋಪಗಳನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ ಎಂದು ವಿವರಿಸಿ ಎಂದು ಸುಬ್ರಮಣಿಯನ್ ಸ್ವಾಮಿಗೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ದೆಹಲಿಯ ಲೀಲಾ ಹೋಟೆಲ್ ನಲ್ಲಿ ಜನವರಿ 17, 2014ರಂದು ಶವವಾಗಿ ಪತ್ತೆಯಾಗಿದ್ದರು. ಸುನಂದಾ ಅವರದು ಆಕಸ್ಮಿಕ ಸಾವಲ್ಲ ಎಂದು ಶಂಕೆ ವ್ಯಕ್ತಪಡಿಸಿ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಕೋರ್ಟ್ ಮೆಟ್ಟಿಲೇರಿದ್ದರು.
ಸುನಂದಾ ಪುಷ್ಕರ್ ಕೇಸ್ : ಸ್ವಾಮಿ ಅರ್ಜಿ ತಿರಸ್ಕರಿಸಿದ ಹೈಕೋರ್ಟ್
ಆದರೆ ಜ.19 ರಂದು ಈ ಬಗ್ಗೆ ಮಾತನಾಡಿದ್ದ ಸ್ವಾಮಿ, ಸುನಂದಾ ಪುಷ್ಕರ್ ಪ್ರಕರಣವನ್ನು ಇಷ್ಟರಲ್ಲೇ ಮುಚ್ಚಿಹಾಕುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.
ಸುಬ್ರಮಣಿಯನ್ ಸ್ವಾಮಿ ಅವರ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿದ ಸುಪ್ರೀಂ ಕೋರ್ಟ್, ಸುನಂದಾ ಪುಷ್ಕರ್ ಪ್ರಕರಣದಲ್ಲಿ ನೀವು ಮಾಡಿದ ಆರೋಪಗಳನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದೆ. ಮೊದಲು ನಿಮ್ಮ ಆರೋಪಗಳಿಗೆ ಸಾಕ್ಷಿ ಕೊಡಿ ಎಂದು ಪರೋಕ್ಷವಾಗಿ ಛೀಮಾರಿ ಹಾಕಿದೆ.