ಹವಾಮಾನ ಬದಲಾವಣೆ; ಆತಂಕ ಮೂಡಿಸಿದ ತಜ್ಞರ ಎಚ್ಚರಿಕೆ
ನವದೆಹಲಿ, ಮೇ 16; ಕರ್ನಾಟಕದ ರಾಜಧಾನಿ ಬೆಂಗಳೂರು ನಗರದಲ್ಲಿ 50 ವರ್ಷದಲ್ಲೇ ಅತ್ಯಂತ ಚಳಿದಿನ ದಾಖಲಾಗಿದೆ. ಉತ್ತರ ಭಾರತದ ದೆಹಲಿಯ 1951ರ ನಂತರ ಅತ್ಯಂತ ಹೆಚ್ಚಿನ ಸರಾಸರಿ ತಾಪಮಾನಕ್ಕೆ ಸಾಕ್ಷಿಯಾಗಿದೆ. ದೇಶದ ಹವಾಮಾನ ಬದಲಾವಣೆ ತೀವ್ರ ಆತಂಕ ಮೂಡಿಸಿದ್ದು. ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಬಿಸಿ ಗಾಳಿ, ಗರಿಷ್ಟ ತಾಪಮಾನದ ಹೊಡೆತಕ್ಕೆ ಉತ್ತರ ಭಾರತ ತತ್ತರಿಸುತ್ತಿದೆ. ದೆಹಲಿಯಲ್ಲಿ ದಾಖಲೆಯ 49 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಚಂಡಮಾರುತ ಪ್ರಭಾವದಿಂದ ಸುರಿದ ಮಳೆ ಹಠಾತ್ ಪ್ರವಾಹ ಸೃಷ್ಟಿಸಿದೆ.
1966 ಮೇ ತಿಂಗಳ ನಂತರ ದೆಹಲಿಯಲ್ಲಿ ಅಧಿಕ ಎಂದರೆ 49 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ. ಗುರಗಾಂವ್ನಲ್ಲಿ 48 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮುಂದಿನ ದಿನಗಳು ಮತ್ತಷ್ಟು ಕಠಿಣವಾಗಿರುತ್ತದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
ದಕ್ಷಿಣ ಏಷ್ಯಾ ಭಾಗಗಳಲ್ಲಿ ತಾಪಮಾನ ಏರಿಕೆಯಿಂದ ಶಾಖ ಮತ್ತು ಆರ್ದ್ರತೆ ಮಟ್ಟದಲ್ಲಿ ತೀವ್ರ ಏರಿಕೆಯಾಗಿರುವುದರಿಂದ ಭಾರತದಲ್ಲಿ ತೀವ್ರವಾದ ಬಿಸಿಗಾಳಿ ಬೀಸುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ಹವಾಮಾನ ಬದಲಾವಣೆ ಬಗ್ಗೆ ತಜ್ಞರು ನೀಡಿರುವ ಮಾಹಿತಿಗಳು ಇಲ್ಲಿವೆ.
ಜಾಗತಿಕ ತಾಪಮಾನ ಏರಿಕೆ
ಕಳೆದ ಕೆಲವು ದಶಕಗಳಲ್ಲಿ ಜಾಗತಿಕ ತಾಪಮಾನ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ದೆಹಲಿಯಲ್ಲಿ 1951ರ ನಂತರ ಈ ಬಾರಿ ಮಾಸಿಕ ಸರಾಸರಿ ಗರಿಷ್ಠ 40.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಿಸಿದೆ. ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಕ್ ಗುಡ್ಡಗಾಡು ಪ್ರದೇಶಗಳು ಸೇರಿದಂತೆ ಉತ್ತರ ಭಾರತದ ಇತರೆ ರಾಜ್ಯಗಳು ಈ ಋತುವಿನಲ್ಲಿ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ.
ಒಂದೆಡೆ ಉತ್ತರ ಭಾರತ ಬಿಸಿ ಗಾಳಿ, ತಾಪಮಾನ ಏರಿಕೆಯಿಂದ ತತ್ತರಿಸಿದ್ದರೆ, ಭಾನುವಾರ ಕೇರಳ, ಲಕ್ಷದ್ವೀಪಗಳ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಕೇರಳದ ಐದು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಈಶಾನ್ಯ ಭಾರತದ ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯಲ್ಲಿ ಹಠಾತ್ ಪ್ರವಾಹ ಉಂಟಾಗಿದ್ದು, ಹಲವಾರು ಸ್ಥಳಗಳಲ್ಲಿ ಭೂ ಕುಸಿತದಿಂದ ಹಾನಿಯಾಗಿದ್ದು, ರೈಲು ಮತ್ತು ರಸ್ತೆ ಸಂಪರ್ಕ ಕಳೆದುಕೊಂಡಿದೆ.
ಭಾರತೀಯ ಹವಾಮಾನ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಈ ವರ್ಷದ ಏಪ್ರಿಲ್ನಲ್ಲಿ ವಾಯುವ್ಯ ಮತ್ತು ಮಧ್ಯಭಾರತದಲ್ಲಿ 122 ವರ್ಷಗಳಲ್ಲೇ ಗರಿಷ್ಠ ತಾಪಮಾನ ದಾಖಲಾಗಿದೆ. ಭಾರತ, ಪಾಕಿಸ್ತಾನದಲ್ಲಿ ಮಾನವ ನಿರ್ಮಿತ ಇಂಗಾಲದ ಹೊರಸೂಸುವಿಕೆ ಹೆಚ್ಚಾಗಿರುವುದೇ ಇಂತಹ ಘಟನೆಗಳಿಗೆ ಮೂಲ ಕಾರಣ ಎಂದು ತಜ್ಞರು ಹೇಳಿದ್ದಾರೆ.
ಬಿಸಿ ಗಾಳಿಗೆ ತತ್ತರಿಸಿದೆ ಉತ್ತರ ಭಾರತ
1901ರಿಂದ 2022ರ ಅವಧಿಯಲ್ಲಿ ಈ ಬಾರಿಯ ಮಾರ್ಚ್ ತಿಂಗಳಲ್ಲಿ ಹೆಚ್ಚು ಉಷ್ಣಾಂಶ ದಾಖಲಾದ ತಿಂಗಳಾಗಿದೆ. ಇಡೀ ಭಾರತದಲ್ಲಿ ಅಧಿಕ ತಾಪಮಾನ ದಾಖಲಾಗಿದೆ. ತಂಪಾಗಿರುವ ಈಶಾನ್ಯ ಭಾರತದಲ್ಲೂ ಬಿಸಿ ಗಾಳಿಯಿಂದ ತತ್ತರಿಸಿವೆ. ಕೈಗಾರಿಕೆಗಳ ಸ್ಥಾಪನೆ ನಂತರ ಭೂಮಿಯ ಸರಾಸರಿ ತಾಪಮಾನ 1.2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ ಎಂದು ಜಾಗತಿಕ ಹವಾಮಾನ ಬದಲಾವಣೆ ತಜ್ಞ ಹರ್ಜೀತ್ ಸಿಂಗ್ ಹೇಳಿದ್ದಾರೆ. ಹವಾಮಾನ ಬದಲಾವಣೆ ಕುರಿತು ಅಂತರಸರ್ಕಾರಿ ಸಮಿತಿ 2021ರಲ್ಲಿ ಹೆಚ್ಚುತ್ತಿರುವ ತಾಪಮಾನವು ಬಿಸಿ ಗಾಳಿ ಹೆಚ್ಚಳವು ದೀರ್ಘವಾದ ಬೇಸಿಗೆ ಕಾಲ ಕಡಿಮೆ ಚಳಿಗಾಲವನ್ನು ಸೃಷ್ಠಿಸುತ್ತದೆ ಎಂದು ಎಚ್ಚರಿಕೆ ನೀಡಿತ್ತು.
ಬಿಸಿ ಗಾಳಿ ಹೆಚ್ಚಾಗಲು ಕಾರಣ
ಹವಾಮಾನ ಬದಲಾವಣೆಯು ತಾಪಮಾನ ಹೆಚ್ಚಿಸುವುದು, ಬಿಸಿ ಗಾಳಿ ಸೃಷ್ಟಿಸುವುದು ಮಾತ್ರವಲ್ಲದೆ, ಅಪಾಯಕಾರಿ ಹವಾಮಾನ ವೈಪರೀತ್ಯಕ್ಕೆ ಕಾರಣವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಭಾರತದ ಮೇಲೆ ಲಾ ನಿನಾ ಎಂದು ಹೇಳಲಾಗುವ ಹವಾಮಾನ ಘಟನೆಯಿಂದ ಉಂಟಾದ ಕಡಿಮೆ ಒತ್ತಡದ ವೈಪರೀತ್ಯವು ಪಶ್ಚಿಮ ಮಾರುತಗಳು ಮತ್ತು ಮಧ್ಯಪ್ರಾಚ್ಯದಿಂದ ಬಿಸಿ ಗಾಳಿ ಹೆಚ್ಚಾಗಲು ಕಾರಣವಾಗಲಿದೆ ಎಂದಿದ್ದಾರೆ.
ಶಾಖದ ಅಲೆಗಳು ಜನರ ಆರೋಗ್ಯ, ಕೆಲಸ, ಜೀವನದ ಗುಣಮಟ್ಟ, ಆರ್ಥಿಕತೆ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಅಧಿಕೃತ ದಾಖಲೆಗಳ ಪ್ರಕಾರ 1992 ರಿಂದ 2015ರವರೆಗೆ ದೇಶಾದ್ಯಂತ ಬಿಸಿಗಾಳಿಯಿಂದ 24 ಸಾವಿರಕ್ಕೂ ಹೆಚ್ಚಿನ ಸಾವುಗಳಿಗೆ ಕಾರಣವಾಗಿದೆ. ಭೂ ವಿಜ್ಞಾನ ಸಚಿವಾಲಯದ ವರದಿಯ ಪ್ರಕಾರ ಪ್ರತಿ 10 ಲಕ್ಷ ಜನಸಂಖ್ಯೆಗೆ ಮರಣ ಪ್ರಮಾಣ 62.2 ಪ್ರತಿಶತ ಹೆಚ್ಚಾಗಿದೆ ಎಂದು ಹೇಳಿದೆ.
ಉಷ್ಣತೆಯಿಂದ ಆರೋಗ್ಯದ ಮೇಲೆ ಪ್ರಭಾವ
ಬಿಸಿ ಗಾಳಿಯು ಮನುಷ್ಯನ ಆರೋಗ್ಯದ ಮೇಲೆ ತೀವ್ರ ಪ್ರಭಾವ ಬೀರುತ್ತದೆ ಮತ್ತು ಹಲವು ಸಮಸ್ಯೆಗಳಿಗೂ ಕಾರಣವಾಗುತ್ತದೆ. ಕೆಲಸ ಮಾಡುವ ಆರೋಗ್ಯವಂತ ಮನುಷ್ಯನ ಕ್ಷಮತೆಯನ್ನು ಶೇಕಡಾ 30 ರಿಂದ 40ರವರೆಗೆ ಕಡಿಮೆ ಮಾಡುತ್ತದೆ. ಇದು ಉತ್ಪಾದಕತೆ ಮೇಳೆ ಪರಿಣಾಮ ಬೀರಲಿದ್ದು, ದೇಶದ ಆರ್ಥಿಕ ವ್ಯವಸ್ಥೆಗೆ ಹೊಡೆತ ಬೀಳಲು ಕಾರಣವಾಗಲಿದೆ.
"ತೀವ್ರವಾದ ತಾಪಮಾನ ಏರಿಕೆಯಿಂದ ನಿರ್ಜಲೀಕರಣ, ಮೆದುಳು ಸಂಬಂಧಿತ ಆಘಾತವಾಗುವ ಸಾಧ್ಯತೆ ಹೆಚ್ಚಾಗಿದೆ. ದೀರ್ಘಕಾಲದ ಕಾಯಿಲೆಗಳಿರುವವರು, ವಯೋವೃದ್ಧರು ಮತ್ತು ಮಕ್ಕಳ ಮೇಲೆ ಬಿಸಿ ಗಾಳಿಯ ಪರಿಣಾಮ ತೀವ್ರವಾಗಿರಲಿದೆ" ಎಂದು ತಜ್ಞರು ಹೇಳಿದ್ದಾರೆ.
ತಾಪಮಾನ ಕಡಿಮೆ ಮಾಡಲೇಬೇಕು
ಅರಣ್ಯ ಪ್ರದೇಶ ಹೆಚ್ಚು ಮಾಡುವುದು ಎಂದಿಗಿಂತ ತುರ್ತಾಗಿ ಆಗಬೇಕಿದೆ. ಜೀವ ವೈವಿಧ್ಯ ಉಳಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ನಗರ ಪ್ರದೇಶಗಳಲ್ಲೂ ಮರ ಬೆಳೆಸುವ ಜಾಗೃತಿ ಮೂಡಿಸಬೇಕು. ಅಭಿವೃದ್ಧಿ ಹೆಸರಲ್ಲಿ ಮರಗಳ ಹನನ ನಿಲ್ಲಿಸಬೇಕು.
ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕಿದೆ. ನೀರಿನ ದುರ್ಬಳಕೆ ಕಡಿಮೆ ಮಾಡಬೇಕಿದೆ. ನೈಸರ್ಗಿಕ ಸಂಪನ್ಮೂಲಗಳ ಮಿತ ಬಳಕೆ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಬೇಕು.