ದೆಹಲಿಯಲ್ಲಿ 11 ಜನರ ನಿಗೂಢ ಆತ್ಮಹತ್ಯೆ ಮತ್ತು ಪ್ರಳಯದ ಸಂದೇಶ!
Recommended Video
ನವದೆಹಲಿ, ಜುಲೈ 03: 'ವಿಶ್ವದ ಅಂತ್ಯವಾಗಲಿದೆ' ಎಂಬ ಸಂದೇಶವೇ ದೆಹಲಿಯಲ್ಲಿ 11 ಜನ ಆತ್ಮಹತ್ಯೆಗೆ ಕಾರಣವಾಯಿತೇ?
ದೆಹಲಿಯಲ್ಲಿ ಒಂದೇ ಮನೆಯಲ್ಲಿ 11 ಜನ ಆತ್ಮಹತ್ಯೆ ಮಾಡಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ ದಿನೇ ದಿನೇ ಕುತೂಹಲಕರ ಮಾಹಿತಿಗಳು ಹೊರಬೀಳುತ್ತಿವೆ.
ಮೇಲ್ನೋಟಕ್ಕೆ ಆತ್ಮಹತ್ಯೆ ಎನ್ನಿಸಿದರೂ, ಒಂದೇ ಕುಟುಂಬದ ಹನ್ನೊಂದು ಜನ ಒಂದೇ ಬಾರಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣವಾದ ಅಂಶವೇನು ಎಂಬ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಅಷ್ಟಕ್ಕೂ ಈ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣವಾಗಿದ್ದು ಒಂದು ಅದೃಶ್ಯ ಸಂದೇಶ ಎಂದು ಕೆಲವು ಮೂಲಗಳು ತಿಳಿಸಿವೆ.
ದೆಹಲಿಯಲ್ಲಿ ಒಂದೇ ಕುಟುಂಬದ 11 ಶವಗಳ ಜೊತೆ ಸಿಕ್ಕ ಡೈರಿಯಲ್ಲೇನಿತ್ತು?
ಕುಟುಂಬದ ಹಿರಿಯ ಮಹಿಳೆ, 77 ವರ್ಷ ವಯಸ್ಸಿನ ನಾರಾಯಣ ದೇವಿ ಅವರ ಪುತ್ರ ಲಲಿತ್ ಭಾಟಿಯಾ ಅವರೇ ಈ ಸಾಮೂಹಿಕ ಆತ್ಮಹತ್ಯೆಯ ರೂವಾರಿ ಎಂಬ ಶಂಕೆ ಈ ಮನೆಯಲ್ಲಿ ಸಿಕ್ಕ ಡೈರಿಯಿಂದ ತಿಳಿದುಬಂದಿದೆ.
ಲಲಿತ್ ಭಾಟಿಯಾಗೆ ಸಿಕ್ಕಿತ್ತು ಅದೃಶ್ಯ ಸಂದೇಶ!
ಹಲವು ವರ್ಷಗಳಿಂದ ಮೌನ ವ್ರತ ಮಾಡುತ್ತಿದ್ದ ಲಲಿತ್ ಭಾಟಿಯಾ ಅವರು ಕೆಲವು ದಿನಗಳಿಂದ ಮಾತನಾಡುವುದಕ್ಕೆ ಆರಂಭಿಸಿದ್ದರು. ಮಾತು ಮಾತಿಗೂ ತಮಗೆ ತಮ್ಮ ತಂದೆಯಿಂದ ಸಂದೇಶವೊಂದು ಬಂದಿದೆ. ಅದು ಈ ಜಗತ್ತಿನ ಅಂತ್ಯದ ಕುರಿತ ಸಂದೇಶ. ನಾವೆಲ್ಲ ಶೀಘ್ರದಲ್ಲೇ ಈ ವಿಶ್ವವನ್ನು ಬಿಡಬೇಕಾಗುತ್ತದೆ ಎಂದು ಅವರು ಮಾತು ಮಾತಿಗೂ ಹೇಳುತ್ತಿದ್ದರು. 10 ವರ್ಷದ ಹಿಂದೆ ನಿಧನರಾಗಿದ್ದ ತಮ್ಮ ತಂದೆ, ತನ್ನ ಬಳಿ ಆಗಾಗ ಮಾತನಾಡುತ್ತಾರೆ, ಈಗ ಈ ರೀತಿಯ ಸಂದೇಶ ಕೊಟ್ಟಿದ್ದಾರೆ ಎಂದು ಅವರು ಕುಟುಂಬಸ್ಥರ ಬಳಿ ಹೇಳುತ್ತಿದ್ದರು.
ಸಂದೇಶದಲ್ಲೇನಿತ್ತು?
'ನಿಮ್ಮ ಕೊನೆಯ ಕ್ಷಣಗಳು ಅಂತಿಮವಾಗುತ್ತಿದ್ದಂತೆಯೇ ನಿಮ್ಮ ಕೊನೆಯ ಆಸೆಗಳು ಈಡೇರುತ್ತವೆ. ಆಗ ಆಕಾಶ ಬಾಯ್ಬಿಡುತ್ತದೆ, ಭೂಮಿ ಕಂಪಿಸುವುದಕ್ಕೆ ಶುರುವಾಗುತ್ತದೆ. ಆಗ ಭಯಪಡಬೇಡಿ. ಜೋರಾಗಿ ಮಂತ್ರವನ್ನು ಪಠಿಸುವುದಕ್ಕೆ ಆರಂಭಿಸಿ. ನಾನು ನಿಮ್ಮನ್ನು ರಕ್ಷಿಸುವುದಕ್ಕೆ ಬರುತ್ತೇನೆ' ಎಂದು ಲಲಿತ್ ಭಾಟಿಯಾ ಅವರ ತಂದೆ, ಭಾಟಿಯಾಗೆ ಮೆಸೇಜ್ ನೀಡಿದ್ದಾರೆ ಎಂದು ಅವರೇ ಕುಟುಂಬಸ್ಥರಿಗೆ ಹೇಳಿದ್ದರು!
ಆತ್ಮಹತ್ಯೆಗೆ ಅಂಧಾಚರಣೆ ಕಾರಣವಾಯ್ತೆ?
ಮೃತರ ಕೆಲವು ಸಂಬಂಧಿಕರ ಪ್ರಕಾರ ಹನ್ನೊಂದು ಜನರೂ ಸಹಜವಾಗಿಯೇ ಇರುತ್ತಿದ್ದರು. 'ಅವರು ದೈವಭಕ್ತರಾಗಿದ್ದರೇ ಹೊರತು ಅಂಧಾಚರಣೆ ಮಾಡುತ್ತಿರಲಿಲ್ಲ. ಲಲಿತ್ ಭಾಟಿಯಾ ಮಾತ್ರ ಮೌನಾಚರಣೆ ಮಾಡುತ್ತಿದ್ದರಿಂದ ಅವರು ಬೇರೆಯವರೊಂದಿಗೆ ಸಂವಹನ ಮಾಡುತ್ತಿದ್ದುದು ಟಿಪ್ಪಣಿ ಮೂಲಕವೇ! ಈ ಮನೆಯ ಮಗಳು ಪ್ರಿಯಾಂಕ ಎಂಬುವವರ ನಿಶ್ಚಿತಾರ್ಥವಾಗಿತ್ತು. ಸದ್ಯದಲ್ಲೇ ಮದುವೆಯೂ ನಡೆಯುವುದರಲ್ಲಿತ್ತು. ಇಂಥ ಸಂದರ್ಭದಲ್ಲಿ ಈ ರೀತಿಯ ಅತಿರೇಕದ ನಿರ್ಧಾರ ಕೈಗೊಳ್ಳುವ ಅಗತ್ಯವೇನಿರುತ್ತದೆ? ಇದು ಆತ್ಮಹತ್ಯೆಯಲ್ಲ' ಎಂಬುದು ಸಂಬಂಧಿಕರ ವಾದ.
ಮನೆಯಲ್ಲಿ ಸಿಕ್ಕ ವಿಚಿತ್ರ ಡೈರಿ
ಈ ಮನೆಯಲ್ಲಿ ಸಿಕ್ಕ ವಿಚಿತ್ರ ಡೈರಿಯಲ್ಲಿ ಚಿತ್ರ, ವಿಚಿತ್ರ ವಾಕ್ಯಗಳು, ಸಂಕೇತಗಳಿದ್ದು ಇದು ಮತ್ತಷ್ಟು ಅನುಮಾನವನ್ನುಂಟು ಮಾಡಿದೆ. ಡೈರಿಯಲ್ಲಿ ಮನೆಯ ಸದಸ್ಯರ ಸಾವಿನ ಬಗ್ಗೆ ಮೊದಲೇ ನಿರ್ಧರಿಸಿದಂಥ ವಾಕ್ಯಗಳೂ ಕಾಣುತ್ತವೆ. ಅತಿಯಾದ ದೈವಭಕ್ತಿಯೇ ಭ್ರಮೆಯಾಗಿ, ಮೂಢನಂಬಿಕೆಯಾಗಿ ಬದಲಾಗಿ ಇವರಿಂದ ಇಂಥ ಕೃತ್ಯವನ್ನು ಮಾಡಿಸಿತೇ ಎಂಬುದು ಈಗಿರುವ ಅನುಮಾನ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.
ಏನಿದು ಘಟನೆ?
ಜೂನ್ 30 - ಜುಲೈ 1ರ ನಡುವೆ ದೆಹಲಿಯ ಬುರಾರಿ ಎಂಬಲ್ಲಿ ಒಂದು ಮನೆಯಲ್ಲಿ ಒಂದೇ ಕುಟುಂಬದ 11 ಜನರ ಶವ ಪತ್ತೆಯಾಗಿತ್ತು. ಇವುಗಳಲ್ಲಿ 10 ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, 1 ಶವ ಮಾತ್ರ ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕುಟುಂಬದ ಹಿರಿಯ ಸದಸ್ಯೆ ನಾರಾಯಣ ದೇವಿ (77), ಆಕೆಯ ಮಗಳು ಪ್ರತಿಭಾ (57), ಮಗ ಭವನೇಶ್ (50), ಲಲಿತ್ ಭಾಟಿಯಾ (45), ಭವನೇಶ್ ಪತ್ನಿ ಸವಿತಾ (48) ಮತ್ತು ಅವರ ಮೂರು ಮಕ್ಕಳು ಮೀನು (23), ನೀತು (25), ಧ್ರುವ್ (15). ಲಲಿತ್ ಭಾಟಿಯಾ ಹೆಂಡತಿ ಟೀನಾ (42), ಅವರ ಮಗ ಶಿವಂ (15), ಪ್ರತಿಭಾ ಮಗಳು ಪ್ರಿಯಾಂಕಾ (33) ಇವರೇ ಮೃತ ದುರ್ದೈವಿಗಳು.