ಇಂಡಿಯಾಸ್ ಮೋಸ್ಟ್ ವಾಂಟೆಡ್ ರೂವಾರಿ ಈಗ ಜೈಲುಪಾಲು
ನವದೆಹಲಿ, ಡಿಸೆಂಬರ್ 18: 'ಇಂಡಿಯಾಸ್ ಮೋಸ್ಟ್ ವಾಂಟೆಡ್' ಎಂಬ ಕಾರ್ಯಕ್ರಮದ ನಿರ್ಮಾಪಕರಾಗಿ, ಬಹುಬೇಡಿಕೆಯ ಆಂಕರ್ ಆಗಿದ್ದ ಸುಹೇಬ್ ಇಲಿಯಾಸಿ ಅವರು ಜೈಲು ಪಾಲಾಗಿದ್ದಾರೆ. ಪಾತಕ ಲೋಕದ ಚರಿತ್ರೆಯನ್ನು ಟಿವಿ ಪರದೆ ಮೇಲೆ ತರುತ್ತಿದ ಇಲಿಯಾಸಿ ಈಗ ತಾನೇ ಕ್ರಿಮಿನಲ್ ಪಟ್ಟಿ ಸೇರಿದ್ದಾನೆ.
ಜನಪ್ರಿಯ ಟಿವಿ ಕಾರ್ಯಕ್ರಮಗಳ ನಿರ್ಮಾಪಕ ಹಾಗೂ ನಿರೂಪಕ ಸುಹೇಬ್ ಇಲಿಯಾಸಿ ತನ್ನ ಪತ್ನಿಯ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿದ್ದಾನೆ.
2000ರ ಜನವರಿ 11ರಂದು ಸುಹೇಬ್ ಇಲಿಯಾಸಿ ಅವರ ಪತ್ನಿ ಅಂಜು ಇಲಿಯಾಸಿ ಮಾರಣಾಂತಿಕ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಪರಿಗಣಿಸಲಾಗಿತ್ತು. ಆದರೆ, ಅಂಜು ಅವರ ತಾಯಿ ರುಕ್ಮಾ ಸಿಂಗ್ ಅವರು ಸುಹೇಬ್ ವಿರುದ್ಧ ಆರೋಪ ಮಾಡಿದ್ದರು.
ವರದಕ್ಷಿಣೆಗಾಗಿ ಪೀಡಿಸಿದ್ದರಿಂದ ಅಂಜು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಾಗಾಗಿ ಅಳಿಯನ ವಿರುದ್ಧ ತನಿಖೆ ನಡೆಸಬೇಕೆಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ಕೂಡ ಅಂಜು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದರು. 2014ರಲ್ಲಿ ದೆಹಲಿ ಕೋರ್ಟ್ ಈ ಬಗ್ಗೆ ತನಿಖೆಗೆ ಆದೇಶಿಸಿತ್ತು. ಇಲಿಯಾಸಿ ಪತ್ನಿಯನ್ನು ಕೊಲೆ ಮಾಡಿರೋದು ಈಗ ಸಾಬೀತಾಗಿದ್ದು, ಡಿಸೆಂಬರ್ 20ರಂದು ಶಿಕ್ಷೆಯ ಪ್ರಮಾಣಗೊತ್ತಾಗಲಿದೆ.(ಪಿಟಿಐ)