ಸುದರ್ಶನ ಟಿವಿ ಪ್ರಸಾರ ತಡೆಗೆ 'ಪರಮಾಣು ಕ್ಷಿಪಣಿ' ಎಂದ ಸುಪ್ರೀಂಕೋರ್ಟ್
ನವದೆಹಲಿ, ಸಪ್ಟೆಂಬರ್.18: ಖಾಸಗಿ ಸುದ್ದಿ ವಾಹಿನಿ ಸುದರ್ಶನ್ ಟಿವಿಯಲ್ಲಿ ಕಾರ್ಯಕ್ರಮಗಳ ಪ್ರಸಾರಕ್ಕೆ ತಡೆ ನೀಡಿರುವ ಆದೇಶವನ್ನು ಸುಪ್ರೀಂಕೋರ್ಟ್ 'ಪರಮಾಣು ಕ್ಷಿಪಣಿ' ದಾಳಿ ಎಂದು ವಿವರಿಸಿದೆ. ನಾಗರಿಕ ಸೇವೆಗಳಲ್ಲಿ ಮುಸ್ಲಿಮರು ನುಸುಳುತ್ತಿದ್ದಾರೆ ಎನ್ನುವಂತೆ ಬಿಂಬಿಸುವ ಕಾರ್ಯಕ್ರಮ ಪ್ರಸಾರಕ್ಕೆ ಕೋರ್ಟ್ ತಡೆ ನೀಡಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಶುಕ್ರವಾರ ಈ ಬಗ್ಗೆ ಆದೇಶ ಹೊರಡಿಸಿದೆ. ಈ ಆದೇಶದಿಂದ ಉಂಟಾಗುವ ಅಪಾಯಗಳ ಬಗ್ಗೆ ನ್ಯಾಯಾಲಯವು ಗಮನಹರಿಸಿದೆ ಎಂದು ಹೇಳಿದರು. ದೇಶಾದ್ಯಂತ 700 ನ್ಯಾಯಾಲಯಗಳಿವೆ, ಆದರೆ ಇದನ್ನು ವಾಡಿಕೆ ಮಾಡಬಹುದು ಎಂದಿದ್ದಾರೆ.
ವಿದ್ಯುನ್ಮಾನ ಮಾಧ್ಯಮಗಳ ಮೇಲೆ ನಿಯಂತ್ರಣ?: ಸುಪ್ರೀಂಕೋರ್ಟ್ ಚಿಂತನೆ
"ಸುಪ್ರೀಂಕೋರ್ಟ್ ಈಗಾಗಲೇ ಟಿವಿ ಕಾರ್ಯಕ್ರಮಗಳ ಪ್ರಸಾರಕ್ಕೆ ತಡೆ ನೀಡಿದ್ದು, ಇದೊಂದು "ಪರಮಾಣು ಕ್ಷಿಪಣಿ"ಯಂತಿದೆ. ಏಕೆಂದರೆ ಯಾರೂ ಏನನ್ನೂ ಮಾಡುತ್ತಿಲ್ಲ ಎನ್ನುವುದನ್ನು ಅರಿತು ನಾವೇ ಒಂದು ಹೆಜ್ಜೆ ಮುಂದಿಡಬೇಕಿದೆ" ಎಂದು ನ್ಯಾ. ಮಲ್ಹೋತ್ರಾ ಮತ್ತು ನ್ಯಾ. ಕೆ.ಎಂ. ಜೋಸೆಫ್ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ನಲ್ಲಿ ತುಷಾರ್ ಮೆಹ್ತಾ ವಾದವೇನು?
ಸುದರ್ಶನ ಟಿವಿ ಕಾರ್ಯಕ್ರಮ ಪ್ರಸಾರಕ್ಕೂ ಮೊದಲು ಯಾವುದೇ ರೀತಿಯ ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎಂದು ಭಾವಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕಾರ್ಯಕ್ರಮ ಪ್ರಸಾರಕ್ಕೆ ಅನುಮತಿ ನೀಡಲಾಗಿತ್ತು ಎಂದು ಸ್ಯಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸುಪ್ರೀಂಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ.
ತುಷಾರ್ ಮೆಹ್ತಾರನ್ನು ಪ್ರಶ್ನೆ ಮಾಡಿದ ಸುಪ್ರೀಂಕೋರ್ಟ್
ನಾಗರಿಕ ಸೇವೆಗಳಲ್ಲಿ ಮುಸ್ಲಿಮರು ನುಸುಳುತ್ತಿದ್ದಾರೆ ಎನ್ನುವಂತೆ ಬಿಂಬಿಸುವ ಕಾರ್ಯಕ್ರಮ ಪ್ರಸಾರ ಮಾಡಿದ ಬಳಿಕವೂ ಸುದರ್ಶನ್ ಟಿವಿ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ನಿಮ್ಮ ಸರ್ಕಾರಿ ಕಾರ್ಯದರ್ಶಿಗಳ ಅಡಿಯಲ್ಲಿತ್ತು. ಆದರೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಯಾವುದೇ ಕ್ರಮವನ್ನು ತೆಗೆದುಕೊಳ್ಳಲಿಲ್ಲ ಏಕೆ ಎಂದು ಕೋರ್ಟ್ ಪ್ರಶ್ನಿಸಿದೆ. ಅನಿಶ್ಚಿತ ಭಾಷೆಯಲ್ಲಿ ಸಮರ್ಥಿಸಿಕೊಳ್ಳುತ್ತಿದ್ದೀರಾ ಎಂದು ಕೋರ್ಟ್ ಕೇಳಿದೆ.
ಪ್ರಸಾರಕ್ಕೆ ತಡೆ ವಿಧಿಸುವುದೇ ಕಾನೂನಾಗಲು ಬಿಡುವುದಿಲ್ಲ
"ಸುದ್ದಿ ವಾಹಿನಿಗಳಲ್ಲಿ ಪ್ರಸಾರ ಪೂರ್ವದಲ್ಲಿಯೇ ಕಾರ್ಯಕ್ರಮಗಳಿಗೆ ತಡೆಯಾಜ್ಞೆ ವಿಧಿಸುವ ಗಂಭೀರ ಅಪಾಯವಿದೆ. ಕೆಲವು ಪಂಚಾಯತ್ ಚುನಾವಣೆಗಳಲ್ಲಿ ಸಿವಿಲ್ ಕೋರ್ಟ್ ಗಳು ಕೆಲವು ಕಾರ್ಯಕ್ರಮಗಳಿಗೆ ಇದೇ ರೀತಿ ತಡೆಯಾಜ್ಞೆ ಹೊರಡಿಸಲಿದೆ. ಆದರೆ ಮುಂದಿನ ದಿನಗಳಲ್ಲಿ ಇದೇ ಒಂದು ಕಾನೂನು ಮಾಡುವುದಕ್ಕೆ ನಾವು ಬಯಸುವುದಿಲ್ಲ" ಎಂದು ನ್ಯಾ. ಚಂದ್ರಚೂಡಾ ತಿಳಿಸಿದ್ದಾರೆ. ಸುದರ್ಶನ್ ಟಿವಿಯ ವಿರುದ್ಧದ ತಡೆಯಾಜ್ಞೆಯು ಸುಲಭವಾದ ಪ್ರಕರಣಗಳಲ್ಲಿ ಒಂದಾಗಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಆಯಾ ಕೋರ್ಟ್ ವ್ಯಾಪ್ತಿಯಲ್ಲೇ ಕೆಲವು ಪ್ರಕರಣಗಳು ಇತ್ಯರ್ಥವಾಗಲಿ
ಪ್ರತಿ ಬಾರಿ ದೂರುಗಳು ಬಂದಾಗ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಕಾರ್ಯವನ್ನು ಸುಪ್ರೀಂಕೋರ್ಟ್ ಮಾಡುತ್ತದೆ. ಇದೊಂದು ಸುಲಭ ಮತ್ತು ಕ್ಷಿಪ್ರಗತಿಯಲ್ಲಿ ಇತ್ಯರ್ಥಗೊಳ್ಳುವ ಪ್ರಕರಣವಾಗಿದ್ದರಿಂದ ಕೋರ್ಟ್ ಗೆ ಸರಿ ಎನ್ನಿಸಿದ್ದನ್ನು ಮಾಡಿದೆ. ಆದರೆ ಮುಂದಿನ ದಿನಗಳಲ್ಲಿ ಇಂಥ ಪ್ರಕರಣಗಳನ್ನೆಲ್ಲ ಸುಪ್ರೀಂಕೋರ್ಟ್ ಹೊಸ್ತಿಲಿಗೆ ತರುವುದು ಉತ್ತಮ ಬೆಳವಣಿಗೆಯಲ್ಲ. ಇಂಥ ನೂರಾರು ಪ್ರಕರಣಗಳನ್ನೂ ಸುಪ್ರೀಂಕೋರ್ಟ್ ಇತ್ಯರ್ಥಗೊಳಿಸುವುದಕ್ಕೆ ಆಗುವುದಿಲ್ಲ. ಬದಲಿಗೆ ಆಯಾ ಸ್ಥಳೀಯ ಕೋರ್ಟ್ ವ್ಯಾಪ್ತಿಯಲ್ಲಿಯೇ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದು ಉತ್ತಮ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಮಾಧ್ಯಮಗಳು ತಮ್ಮ ಜವಾಬ್ದಾರಿ ಅರಿತುಕೊಂಡು ನಡೆಯಲಿ
ಇಂಥ ಪ್ರಕರಣಗಳಲ್ಲಿ ವ್ಯವಸ್ಥಿತಿ ಬದಲಾವಣೆಗಳನ್ನು ತರುವುದರ ಮೂಲಕ ಭವಿಷ್ಯದಲ್ಲಿ ನ್ಯಾಯಾಲಯಗಳನ್ನು ಇಂಥ ಪ್ರಕರಣಗಳ ವ್ಯಾಪ್ತಿಗೆ ತರದಂತೆ ನೋಡಿಕೊಳ್ಳಬಹುದು. ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುವುದು ತಪ್ಪು ಎಂಬ ಸಂದೇಶವನ್ನು ಮಾಧ್ಯಮಗಳು ಕೂಡಾ ಅರಿತುಕೊಂಡು ನಡೆಯಬೇಕು. ಪತ್ರಿಕಾ ಸ್ವಾತಂತ್ರ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯವನ್ನು ನಾವೂ ಕೂಡಾ ಗೌರವಿಸುತ್ತೇವೆ. ಆದರೆ ಮಾಧ್ಯಮಗಳು ಯಾವುದೇ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಕಾರ್ಯಕ್ರಮಗಳನ್ನು ನಿರೂಪಿಸಬಾರದು. ನಾವೆಲ್ಲರೂ ಭಾರತೀಯರು ಎಂದು ಬಿಂಬಿಸುವಂತಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವತ್ತ ಹೆಚ್ಚು ಲಕ್ಷ್ಯ ವಹಿಸಬೇಕು ಎಂದು ಕೋರ್ಟ್ ಸೂಚಿಸಿದೆ.