ಕಾಂಗ್ರೆಸ್-ಪಿಡಿಪಿ ಮೈತ್ರಿ ಮಾಡಿಕೊಂಡರೆ ಉಗ್ರರಿಗೆ ಲಾಭ: ಸ್ವಾಮಿ!
ನವದೆಹಲಿ, ಜುಲೈ 03: ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುತ್ತದೆ ಎಂಬ ವದಂತಿಯ ಕುರಿತು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಮತ್ತು ಪಿಡಿಪಿ ಮೈತ್ರಿ ಮಾಡಿಕೊಳ್ಳುವ ವದಂತಿ ನಿಜವೇ ಆದರೆ ಕಾಶ್ಮೀರಕ್ಕೆ ಅದಕ್ಕಿಂತ ದೌರ್ಭಾಗ್ಯ ಬೇರೆ ಇಲ್ಲ. ಏಕೆಂದರೆ ಎರಡೂ ಪಕ್ಷಗಳೂ ಉಗ್ರರ ಪರವಾಗಿವೆ ಎಂದು ಸ್ವಾಮಿ ಹೇಳಿದ್ದಾರೆ.
ದ್ರಾಕ್ಷಿ ಹುಳಿ ಎನ್ನುತ್ತಿದೆ ಕಾಂಗ್ರೆಸ್: ಸುಬ್ರಮಣಿಯನ್ ಸ್ವಾಮಿ ಲೇವಡಿ!
ಈ ಎರಡು ಪಕ್ಷಗಳ ಮೈತ್ರಿಯಿಂದ ಅವರಿಗೆ ರಾಜಕೀಯವಾಗಿ ಲಾಭವಾಗಬಹುದು. ಉಗ್ರರಿಗೂ ಲಾಭವಾಗಬಹುದು. ಆದರೆ ಕಾಶ್ಮೀರಕ್ಕೆ ಮಾತ್ರ ಇದು ಭಾರೀ ನಷ್ಟ ಎಂದು ಅವರು ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ವಾಪಸ್ ಪಡೆದ ನಂತರ ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಯಲ್ಲಿದೆ. ಇದೀಗ ಪಿಡಿಪಿಯು ಕಾಂಗ್ರೆಸ್ ಪಕ್ಷದೊಂದಿಗೆ ಸೇರಿ ಸರ್ಕಾರ ರಚಿಸುತ್ತದೆ ಎಂಬ ವದಂತಿ ಹರಡಿತ್ತು. ಆದರೆ ಈ ವದಂತಿಯನ್ನು ಕಾಂಗ್ರೆಸ್ ಮತ್ತು ಪಿಡಿಪಿ ಎರಡೂ ಅಲ್ಲಗಳೆದಿದ್ದವು.
ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, 'ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲಿವೆ ಎಂಬ ವದಂತಿ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದುನ್ನು ನೋಡಿ ಅಚ್ಚರಿಯಾಗಿದೆ. ಅಷ್ಟೇ ಅಲ್ಲ, ಈ ಕುರಿತು ನಾನು ಮತ್ತು ಸೋನಿಯಾಗಾಂಧಿ ನಡುವೆ ಸಭೆ ಸಹ ನಡೆದಿದೆ ಎಂದೂ ಹೇಳಲಾಗಿದೆ. ಇದು ಸಂಪೂರ್ಣ ಸುಳ್ಳು. ಫೇಕ್ ನ್ಯೂಸಿಗೆ ಇದು ಅತ್ಯಂತ ತಾಜಾ ಉದಾಹರಣೆ' ಎಂದಿದ್ದಾರೆ.