ಸುಭಾಷ್ ಛೋಪ್ರಾ ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೇಮಕ
ನವದೆಹಲಿ, ಅಕ್ಟೋಬರ್ 24: ಸುಭಾಷ್ ಛೋಪ್ರಾ ಅವರು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ(ಡಿಪಿಸಿಸಿ) ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.
ಈ ಕುರಿತು ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಡಿಪಿಸಿಸಿ ಅಧ್ಯಕ್ಷರ ಜೊತೆಗೆ ಡಿಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಕೀರ್ತಿ ಆಜಾದ್ ಅವರನ್ನು ನೇಮಿಸಿದೆ.
ಡಿಪಿಸಿಸಿ ಅಧ್ಯಕ್ಷರಾಗಿದ್ದ ಶೀಲಾ ದೀಕ್ಷಿತ್ ಅವರು ಜುಲೈನಲ್ಲಿ ನಿಧನರಾದ ಕಾರಣ ಆ ಸ್ಥಾನ ತೆರವುಗೊಂಡಿತ್ತು. ಇದೀಗ ಆ ಸ್ಥಾನಕ್ಕೆ ಸುಭಾಷ್ ಛೋಪ್ರಾ ಅವರನ್ನು ಆಯ್ಕೆ ಮಾಡಲಾಗಿದೆ.
ಸುಭಾಷ್ ಛೋಪ್ರಾ ಈ ಹಿಂದೆ 1998ರಿಂದ 2003ರ ಜೂನ್ವರೆಗೂ ದೆಹಲಿ ಘಟಕದ ಅಧ್ಯಕ್ಷರಾಗಿದ್ದರು. ದೆಹಲಿ ವಿಧಾನಸಭೆ ಚುನಾವಣೆಗೆ ಇನ್ನು ಮೂರು ತಿಂಗಳು ಬಾಕಿ ಇರುವಂತೆ ಛೋಪ್ರಾ ಅವರನ್ನು ಡಿಪಿಸಿಸಿ ಅಧ್ಯಕ್ಷರನ್ನಾಗಿ ಎರಡನೇ ಬಾರಿಗೆ ಆಯ್ಕೆ ಮಾಡಲಾಗಿದೆ.
ಸುಭಾಷ್ ಛೋಪ್ರಾ ಡಿಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿರುವುದು ಇದು ಎರಡನೇ ಬಾರಿಯಾಗಿದೆ.ಸುಭಾಷ್ ಛೋಪ್ರಾ ಆಯ್ಕೆಗೂ ಮುನ್ನ ಡಿಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೀರ್ತಿ ಆಜಾದ್ ಅವರ ಹೆಸರು ಕೇಳಿಬರುತ್ತಿತ್ತು. ಆದರೆ, ಆಜಾದ್ ಅವರನ್ನು ಡಿಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಕಾಲ್ಕಾಜಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿರುವ ಛೋಪ್ರಾ, 1998ರಲ್ಲಿ ಮೊದಲ ಬಾರಿಗೆ ದೆಹಲಿ ವಿಧಾನಸಭೆ ಪ್ರವೇಶಿಸಿದ್ದರು. ಮತ್ತು 2003 ಮತ್ತು 2008ರಲ್ಲಿ ಶಾಸಕರಾಗಿ ಮರುಆಯ್ಕೆಯಾದರು. 2003ರ ಜೂನ್ನಿಂದ ಡಿಸೆಂಬರ್ ಅವಧಿವರೆಗೆ ದೆಹಲಿ ವಿಧಾನಸಭೆ ಸ್ಪೀಕರ್ ಆಗಿಯೂ ಛೋಪ್ರಾ ಸೇವೆ ಸಲ್ಲಿಸಿದ್ದರು.
1970ರಿಂದ 71ರವರೆಗೆ ದೆಹಲಿ ವಿಶ್ವವಿದ್ಯಾಲಯ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಛೋಪ್ರಾ ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಂಡಿದ್ದರು.
1993ರಲ್ಲಿ ಗೋಲೆ ಮಾರ್ಕೆಟ್ ಕ್ಷೇತ್ರದಿಂದ ಮೊದಲ ಬಾರಿಗೆ ಆಜಾದ್ ಶಾಸಕರಾಗಿ ಆಯ್ಕೆಯಾದರು. ಆದರೆ, ಮುಂದಿನ ಚುನಾವಣೆಯಲ್ಲಿ ಬಿಹಾರದ ಧರ್ಭಾಗಾದಿಂದ ಸ್ಪರ್ಧಿಸಿ, ಸೋತು ಹೋದರು.