ಸ್ವಯಂ ನಿವೃತ್ತಿ ಪಡೆದ ಹಣಕಾಸು ಇಲಾಖೆ ಮಾಜಿ ಕಾರ್ಯದರ್ಶಿ ಸುಭಾಷ್ ಗರ್ಗ್
ನವದೆಹಲಿ, ಜುಲೈ 26: ಹಣಕಾಸು ಇಲಾಖೆ ಮಾಜಿ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಅವರು ಸ್ವಯಂ ನಿವೃತ್ತಿ ಪಡೆದಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ.
ಇತ್ತೀಚೆಗಷ್ಟೇ ಅವರನ್ನು ಹಣಕಾಸು ಇಲಾಖೆಯಿಂದ ವಿದ್ಯುತ್ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. ಈ ದೀಢೀರ್ ಬೆಳವಣಿಗೆಯಿಂದ ಬೇಸರಗೊಂಡ ಗರ್ಗ್ ನಿವೃತ್ತಿಯ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
15 ಹಿರಿಯ ಅಧಿಕಾರಿಗಳ ಕಡ್ಡಾಯ ನಿವೃತ್ತಿಗೆ ಕೇಂದ್ರ ಸರ್ಕಾರ ಆದೇಶ
ರಾಜಸ್ಥಾನ ಕೇಡರ್ ನ 1983 ನೇ ಬ್ಯಾಚಿನ ಐಎಎಸ್ ಅಧಿಕಾರಿ ಗರ್ಗ್ ಅವರ ಸೇವಾವಧಿ ಅಕ್ಟೋಬರ್ರ್ 2020 ರವರಗೂ ಇತ್ತಾದರೂ ಅವರು ಒಂದು ವರ್ಷ ಮೊದಲೇ ಸ್ವಯಂ ನಿವೃತ್ತಿಯ ನಿರ್ಧಾರ ಕೈಗೊಂಡಿದ್ದಾರೆ. ಆದರೆ ತಮ್ಮ ಈ ನಿರ್ಧಾರಕ್ಕೆ ಅವರು ಖಚಿತ ಕಾರಣವನ್ನು ಇದುವರೆಗೆ ಹೊರಹಾಕಿಲ್ಲ.
ಕ್ರಿಪ್ಟೋಕರೆನ್ಸಿ ನಿಷೇಧಕ್ಕೆ ಸಂಬಂಧಿಸಿದಂತೆ, ಸುಭಾಷ್ ಚಂದ್ರ ಗರ್ಗ್ ನೇತೃತ್ವದಲ್ಲಿ ಸಮಿತಿಯೊಂದು ನೀಡಿದ ಶಿಫಾರಸ್ಸುಗಳನ್ನು '2019 ರ ಕ್ರಿಪ್ಟೋಕರೆನ್ಸಿ ನಿಷೇಧ, ಅಧಿಕೃತ ಕರೆನ್ಸಿ ನಿಯಂತ್ರಣ ಕಾಯ್ದೆ'ಯಡಿ ಪಟ್ಟಿ ಮಾಡಲಾಗಿತ್ತು.
ಎನ್ ಡಿಎ ಅಧಿಕಾರಾವಧಿಯಲ್ಲಿ ಆಯಕಟ್ಟಿನ ಹುದ್ದೆಯಲ್ಲಿರುವ ಹಲವು ಅಧಿಕಾರಿಗಳು ಒಂದೋ ಸ್ವಯಂ ನಿವೃತ್ತಿ ಪಡೆದರೆ, ಕೆಲವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸುತ್ತಿರುವ ಘಟನೆಗಳು ನಡೆಯುತ್ತಿದ್ದ ಎರಡನೇ ಅವಧಿಯ ಎನ್ ಡಿಎ ಸರ್ಕಾರದಲ್ಲಿ ಸುಭಾಷ್ ಚಂದ್ರ ಗರ್ಗ್ ಈ ಪಟ್ಟಿಗೆ ಮೊದಲ ಹೆಸರಾಗಿದೆ.
ಕಳೆದ ಅವಧಿಯಲ್ಲಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ, ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಅವರೂ ಸೇವೆಯಿಂದ ಆಚೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಸುಭಾಷ್ ಚಂದ್ರ ಗರ್ಗ್ ಅವರಿದ್ದ ಹಣಕಾಸು ಕಾರ್ಯದರ್ಶಿ ಹುದ್ದೆಗೆ ಅತುನು ಚಕ್ರವರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಅವರು ಹೂಡಿಕೆ ಮತ್ತು ಸಾರ್ವಜನಿಕ ಸಂಪತ್ತು ನಿರ್ವಹಣಾ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.