ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಾವಿಗೆ ಮತ್ತೊಂದು ಕಾರಣ ಬಹಿರಂಗ
ನವದೆಹಲಿ, ನವೆಂಬರ್ 23: ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಾವಿಗಿರುವ ಮತ್ತೊಂದು ಕಾರಣದ ಬಗ್ಗೆ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಮಾತನಾಡಿದ್ದಾರೆ.
ಈಗಾಗಲೇ ಕೊರೊನಾ ಸೋಂಕಿನ ಮೂರನೇ ಅಲೆಯಿಂದ ದೆಹಲಿ ತತ್ತರಿಸಿದೆ ಹೀಗಿರುವಾಗ ಕೊರೊನಾ ಸೋಂಕಿತರ ಸಾವಿಗೆ ತ್ಯಾಜ್ಯ ಸುಡುವಿಕೆಯೂ ಕಾರಣ ಎಂಬುದು ತಿಳಿದುಬಂದಿದೆ.
ಕೊವಿಡ್ ಲಸಿಕೆ ವಿತರಣೆ: ನ.24ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ಸಭೆ
ದೆಹಲಿಯಲ್ಲಿ ಕೊವಿಡ್-19 ಸಾವಿನ ಪ್ರಮಾಣ ಹೆಚ್ಚಾಗಲು ಕೃಷಿ ತ್ಯಾಜ್ಯ ಸುಡುವುದು ಪ್ರಮುಖ ಕಾರಣವಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಸೋಮವಾರ ಹೇಳಿದ್ದಾರೆ.
ಕೊವಿಡ್ -19 ಸಾಂಕ್ರಾಮಿಕದ ಮಧ್ಯೆ ಕೃಷಿ ತ್ಯಾಜ್ಯ ಸುಡುವಿಕೆಯಿಂದ ಭಾರೀ ಪ್ರಮಾಣದಲ್ಲಿ ಮಾಲಿನ್ಯ ಉಂಟಾಗುತ್ತಿದೆ. ದೆಹಲಿಗೆ ಇದು ಡಬಲ್ ಹೊಡೆತ. ಕೃಷಿ ತ್ಯಾಜ್ಯ ಸುಡುವುದು ಈಗ ಸ್ವಲ್ಪ ಕಡಿಮೆಯಾಗಿರುವುದರಿಂದ ಮಾಲಿನ್ಯವೂ ಕಡಿಮೆಯಾಗಿದ್ದು, ಕೊರೊನಾ ಸಾವಿನ ಪ್ರಮಾಣವೂ ಕೆಲವೇ ವಾರಗಳಲ್ಲಿ ಇಳಿಕೆಯಾಗಲಿದೆ ಎಂದು ಜೈನ್ ವಿಶ್ವಾಸ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ಭಾನುವಾರ 6,746 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 121 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ದೆಹಲಿಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 8,391ಕ್ಕೆ ಏರಿಕೆಯಾಗಿದೆ.
ನೆರೆ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಸುಡುತ್ತಿರುವುದರಿಂದ ವಾಯು ಮಾಲಿನ್ಯ ಹೆಚ್ಚಾಗಿದ್ದು, ಇದು ಕೊರೊನಾ ರೋಗಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮುಂದಿನ ಎರಡು-ಮೂರು ವಾರಗಳಲ್ಲಿ ಸಾವಿನ ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಜೈನ್ ತಿಳಿಸಿದ್ದಾರೆ.