ಗ್ರಂಥಾಲಯದಲ್ಲಿದ್ದವರು ಕಲ್ಲು ತೂರಾಟಗಾರರು: ಬಿಜೆಪಿ
ನವದೆಹಲಿ, ಫೆಬ್ರವರಿ 17: ಜಾಮಿಯಾ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಪೊಲೀಸರು ನುಗ್ಗಿ ವಿದ್ಯಾರ್ಥಿಗಳ ಮೇಲೆ ಮನಸೋಇಚ್ಛೆ ಲಾಠಿ ಬೀಸಿದ ಪ್ರಕರಣದ ಕುರಿತು ಆಕ್ರೋಶ ವ್ಯಕ್ತವಾಗಿದ್ದು, ಈ ಬಗ್ಗೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಗ್ರಂಥಾಲಯದಲ್ಲಿ ಓದುತ್ತಾ ಕುಳಿತವರು ವಿದ್ಯಾರ್ಥಿಗಳೇ ಅಲ್ಲ ಎಂದಿದೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿರುವ ಜಾಮಿಯಾ ವಿವಿಯ ಕೊಠಡಿಯೊಂದರ ಒಳಗಿನ ದೃಶ್ಯಾವಳಿಗಳನ್ನು ಹಂಚಿಕೊಂಡಿರುವ ಬಿಜೆಪಿ ಐಟಿ ಮುಖ್ಯಸ್ಥ ಅಮಿತ್ ಮಾಳವಿಯ, 'ಗ್ರಂಥಾಲಯದ ಒಳಗಿದ್ದವರು ಕಲ್ಲು ತೂರಾಟಗಾರರು ಎಂದಿದ್ದಾರೆ.
ಜಾಮಿಯಾ ಮಿಲಿಯಾ ಲೈಬ್ರರಿಯಲ್ಲಿ ದೆಹಲಿ ಪೊಲೀಸರ ದಾಂದಲೆ: ವಿಡಿಯೋ ಬಹಿರಂಗ
'ಪೊಲೀಸರು ಗ್ರಂಥಾಲಯ ಪ್ರವೇಶಿಸುವ ಮುನ್ನಾ ಗ್ರಂಥಾಲಯದ ಒಳಗೆ ವಿದ್ಯಾರ್ಥಿಗಳು ಹೀಗೆ ವರ್ತಿಸಿದ್ದರು' ಎಂಬ ಒಕ್ಕಣೆ ನೀಡಿ ವಿಡಿಯೋ ಒಂದನ್ನು ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ. ಅವರು ಟ್ವೀಟ್ ಮಾಡಿರುವ ವಿಡಿಯೋದಲ್ಲಿ ವಿದ್ಯಾರ್ಥಿಗಳು ಆತಂಕದಿಂದ ಒಂದು ಕೊಠಡಿಯ ಒಳಕ್ಕೆ ಬರುತ್ತಾರೆ. ನಂತರ ಬಾಗಿಲು ಹಾಕಿ, ಬಾಗಿಲಿಗೆ ದೊಡ್ಡ ಸ್ಟೂಲ್ ಒಂದನ್ನು ಅಡ್ಡ ಇಡುತ್ತಾರೆ. ಹಾಗೆ ಬಂದ ವಿದ್ಯಾರ್ಥಿಯೊಬ್ಬನ ಕೈಯಲ್ಲಿ ಕಲ್ಲೊಂದು ಇದೆ.
ತನ್ನ ಸಿಎಎ-ಎನ್ಆರ್ಸಿ ವಿರೋಧಿ ನಿಲವು ಹಾಗೂ ಪ್ರತಿಭಟನೆಗಳಿಂದ ದೇಶದಾದ್ಯಂತ ಚರ್ಚೆಯಲ್ಲಿರುವ ಜಾಮಿಯಾ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಡಿಸೆಂಬರ್ 15 ರಂದು ನುಗ್ಗಿದ ಅರೆ ಸೇನಾ ಪಡೆ ಪೊಲೀಸರು ತಮ್ಮ ಪಾಡಿಗೆ ತಾವು ಓದುತ್ತಾ ಕುಳಿತಿರುವ ವಿದ್ಯಾರ್ಥಿಗಳನ್ನು ಮನಸೋಇಚ್ಛೆ ಲಾಠಿಗಳಿಂದ ಹೊಡೆದಿದ್ದರು.
ಪೋಲೀಸರ ಈ ಭಯಾನಕ ಕೃತ್ಯ ಗ್ರಂಥಾಲಯದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದೆ.
ಎರಡು ದಿನಗಳ ಹಿಂದೆ (ಶನಿವಾರ) ವಿಡಿಯೋ ಬಿಡುಗಡೆ ಆಗಿತ್ತು. ಜಾಮಿಯಾ ವಿವಿ ಪ್ರಕಾರ ಈ ವಿಡಿಯೋವನ್ನು ವಿವಿ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ ಬದಲಾಗಿ ವಿಡಿಯೋ ಸೋರಿಕೆ ಆಗಿದೆ.