ರಫೇಲ್ ದಾಖಲೆ ಕದ್ದವರ ವಿರುದ್ಧ ಕ್ರಮ ಕೈಗೊಳ್ಳಿ : ರಾಹುಲ್ ಆಗ್ರಹ
ನವದೆಹಲಿ, ಮಾರ್ಚ್ 07 : "ಒಂದೆಡೆ ನೀವು ಹೇಳುತ್ತಿದ್ದೀರಿ ರಫೇಲ್ ದಾಖಲೆಗಳು ಕಾಣೆಯಾಗಿವೆಯೆಂದು. ಇದರರ್ಥ ಅವು ಅಸಲಿ ದಾಖಲೆಗಳಾಗಿದ್ದು, ರಫೇಲ್ ಡೀಲ್ ನಡೆಯುತ್ತಿದ್ದಾಗ ಸಮಾನಾಂತರ ಮಾತುಕತೆ ನಡೆಯುತ್ತಿದ್ದುದು ಸ್ಪಷ್ಟವಾಗಿದೆ" ಎಂದು ರಾಹುಲ್ ಗಾಂಧಿ ಕೇಂದ್ರವನ್ನು ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ.
ರಫೇಲ್ ಡೀಲ್ ಅಗ್ನಿಕುಂಡದಲ್ಲಿ ರಹಸ್ಯ ದಾಖಲೆಗಳೊಂದಿಗೆ ಎನ್ ರಾಮ್
ರಫೇಲ್ ದಾಖಲೆಗಳು ಕೇಂದ್ರ ರಕ್ಷಣಾ ಸಚಿವಾಲಯದಿಂದ ಕಳುವಾಗಿವೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ, ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಎಲ್ಲ ಸತ್ಯಗಳು ಹೊರಬರಬೇಕು ಮತ್ತು ತನಿಖೆಗೆ ಆದೇಶಿಸಬೇಕು ಎಂದಿದ್ದಾರೆ.
ರಫೇಲ್ ದಾಖಲೆಗಳನ್ನು ಕೇಂದ್ರ ಸರ್ಕಾರ ಕದ್ದಿದೆ: ರಾಹುಲ್ ಗಾಂಧಿ
ಆ ದಾಖಲೆ ಕಳುವಾಗಲು ಯಾರು ಕಾರಣರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ರಫೇಲ್ ಯುದ್ಧ ವಿಮಾನ ಕೊಳ್ಳುವಾಗ ಫ್ರಾನ್ಸ್ ಸರಕಾರದ ಜೊತೆ ಸಮಾನಾಂತರ ಮಾತುಕತೆ ಆರಂಭಿಸಿದ್ದಕ್ಕೆ ಪ್ರಧಾನಿ ಕಚೇರಿಯ ವಿರುದ್ಧ ತನಿಖೆ ನಡೆಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.
ರಫೇಲ್ ದಾಖಲೆಗಳು ಕಾಣೆಯಾಗಿದ್ದಕ್ಕೆ ಇದನ್ನು ಬಯಲಿಗೆಳೆದ ನಿಮ್ಮ (ದಿ ಹಿಂದೂ) ವಿರುದ್ಧ ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗುತ್ತಿದೆ. ಆದರೆ, 30,000 ಕೋಟಿ ರುಪಾಯಿ ಹಗರಣದಲ್ಲಿ ಭಾಗಿಯಾಗಿರುವ ವ್ಯಕ್ತಿ (ಅನಿಲ್ ಅಂಬಾನಿ) ವಿರುದ್ಧ ಯಾವುದೇ ತನಿಖೆಯಿಲ್ಲವೆ? ಎಂದು ರಾಹುಲ್ ಗಾಂಧಿ ಕಿಡಿ ಕಾರಿದರು.
ರಫೇಲ್ ಖರೀದಿ: ಮಾಧ್ಯಮಗಳು ಬೆದರಿಕೆಗೆ ಜಗ್ಗಬಾರದು ಎಂದ ಎನ್ ರಾಮ್
ಅವರ ಮಾತುಗಳು ಮುಂಬರುವ ಲೋಕಸಭೆ ಚುನಾವಣೆ ಮತ್ತು ಮಹಾಘಟಬಂಧನದತ್ತ ತಿರುಗಿತು. ಬಿಜೆಪಿ ವಿರೋಧಿ ಪಕ್ಷಗಳ ಜೊತೆ ಮೈತ್ರಿ ಸರಿಯಾದ ಹಾದಿಯಲ್ಲಿ ಸಾಗಿದೆ. ಆದರೆ, ದೆಹಲಿಯಲ್ಲಿ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದು ಬೇಡ ಎಂದು ಸರ್ವಾನುಮತದಿಂದ ಪಕ್ಷದ ಕಚೇರಿಯಲ್ಲಿ ನಿರ್ಧರಿಸಲಾಗಿದೆ ಎಂದು ರಾಹುಲ್ ತಿಳಿಸಿದರು.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಲಾದ ಏರ್ ಸ್ಟ್ರೈಕ್ ಬಗ್ಗೆ ಸಾಕ್ಷ್ಯ ನಾನು ಕೇಳುತ್ತಿರುವುದರ ಬಗ್ಗೆ ನಾನು ಏನೂ ಮಾತಾಡುವುದಿಲ್ಲ. ಆದರೆ, ಇತ್ತೀಚೆಗೆ ಹುತಾತ್ಮರಾದ ಸಿಆರ್ಪಿಎಫ್ ಯೋಧರ ಕುಟುಂಬದ ಸದಸ್ಯರೇ ಈ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಅಲ್ಲಿ (ದಾಳಿ ನಡೆಸಿದ ಸ್ಥಳದಲ್ಲಿ) ಏನಾಗಿದೆ ಎಂಬುದರ ವಿವರಣೆ ನೀಡಿ ಎಂದು ಅವರು ಕೇಳುತ್ತಿದ್ದಾರೆ ಎಂದು ರಾಹುಲ್ ಪ್ರಶ್ನಿಸುತ್ತಿರುವವರ ಪರ ವಕಾಲತ್ತು ವಹಿಸಿದರು.
ಏರ್ ಸ್ಟ್ರೈಕ್ ಬಗ್ಗೆ ಸಾಕ್ಷ್ಯ ಕೇಳುತ್ತಿರುವುದು ಅವರದೇ ಪಕ್ಷದವರಾದ ನವಜೋತ್ ಸಿಂಗ್ ಸಿಧು, ಮನೀಷ್ ತಿವಾರಿ, ದಿಗ್ವಿಜಯ್ ಸಿಂಗ್, ಕಪಿಲ್ ಸಿಬಲ್ ಇತ್ಯಾದಿ ಇತ್ಯಾದಿ. ಈ ಬಗ್ಗೆ ತಿರುಗೇಟು ನೀಡಿರುವ ಭಾರತೀಯ ವಾಯು ಸೇನೆ, ನಾವು ಇಟ್ಟ ಗುರಿಯನ್ನು ಸರಿಯಾಗಿ ತಲುಪಿದ್ದೇವೆ, ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದೇವೆ ಎಂದಿದ್ದರು. ಆದರೆ, ಆ ದಾಳಿಯಲ್ಲಿ ಎಷ್ಟು ಉಗ್ರರು ಸತ್ತಿದ್ದಾರೆ ಎಂಬ ಬಗ್ಗೆ ಲೆಕ್ಕ ಎಣಿಸುವುದು ನಮ್ಮ ಕೆಲಸವಲ್ಲ ಎಂದು ಏರ್ ಚೀಫ್ ಮಾರ್ಷಲ್ ಹೇಳಿದ್ದರು.