ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ರಾಜ್ಯಗಳಿಗೆ ಅಧಿಕಾರವಿಲ್ಲ: ಸುಪ್ರೀಂಕೋರ್ಟ್
ನವದೆಹಲಿ, ಮೇ 06: ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ರಾಜ್ಯಗಳಿಗೆ ಅಧಿಕಾರ ಇಲ್ಲ ಎಂದು ಹೇಳುವ ಸಂವಿಧಾನದ 102 ನೇ ತಿದ್ದುಪಡಿ ವಿಚಾರದಲ್ಲಿ ಸುಪ್ರೀಂಕೋರ್ಟ್ ಭಿನ್ನಮತದ ತೀರ್ಪು ನೀಡಿದೆ.
ಮೂವರು ನ್ಯಾಯಮೂರ್ತಿಗಳು ಇದರ ಪರವಾಗಿ ತೀರ್ಪು ನೀಡಿದ್ದಾರೆ, ಅಶೋಕ್ ಭೂಷಣ್ ಹಾಗೂ ನಜೀರ್ ಅವರು ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಅಧಿಕಾರ ಇರಬೇಕು ಎಂದು ಹೇಳಿದ್ದಾರೆ.
ಮೀಸಲಾತಿಗಾಗಿ ಒಟ್ಟು ಪ್ರಮಾಣವು ಶೇ.50ರಷ್ಟು ಮೀರಬಾರದು ಎಂದು ಹೇಳಿದ್ದ 1992ರ ಇಂದಿರಾ ಸಾಹ್ನಿ ಪ್ರಕರಣದ ತೀರ್ಪನ್ನು ಮರುಪರಿಶೀಲನೆಗೆ ಒಳಪಡಿಸುವ ಅಗತ್ಯ ಇಲ್ಲ. ವಿವಿಧ ತೀರ್ಪುಗಳ ಸಂದರ್ಭದಲ್ಲಿ ಪದೇ ಪದೇ ಈ ತೀರ್ಪನ್ನು ಎತ್ತಿ ಹಿಡಿಯಲಾಗಿದೆ ಎಂದು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಹೇಳಿದೆ.
ಮರಾಠಾ ಸಮುದಾಯಕ್ಕೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಮೀಸಲು ನೀಡುವುದಕ್ಕಾಗಿ ಮಹಾರಾಷ್ಟ್ರ ಸರ್ಕಾರ ರೂಪಿಸಿದ್ದ ಕಾಯ್ದೆಯನ್ನು ಪೀಠವು ರದ್ದುಪಡಿಸಿದೆ. ಶೇ.50ರ ಮೀಸಲು ಮಿತಿಯನ್ನು ಮೀರಿ ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವುದು ಅಸಾಧಾರಣ ಎನ್ನುವಂತಹ ಪರಿಸ್ಥಿತಿ ಏನೂ ಸೃಷ್ಟಿಯಾಗಿಲ್ಲ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ ಹೇಳಿದೆ.
102 ತಿದ್ದುಪಡಿ ಏನು?: ಸಂವಿಧಾನಕ್ಕೆ 2018ರಲ್ಲಿ 102ನೇ ತಿದ್ದುಪಡಿ ಮಾಡಿ 338 ಬಿ ಮತ್ತು 342ಎ ವಿಧಿಗಳನ್ನು ಸೇರಿಸಲಾಗಿದೆ. 338ಬಿ ವಿಧಿಯು ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ರಚನೆ, ಕರ್ತವ್ಯಗಳು ಮತ್ತು ಅಧಿಕಾರಕ್ಕೆ ಸಂಬಂಧಿಸಿದ್ದಾಗಿದೆ.
342ಎ ವಿಧಿಯು ನಿರ್ದಿಷ್ಟ ಜಾತಿಯು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಕ್ಕೆ ಸೇರುತ್ತದೆಯೇ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ರಾಷ್ಟ್ರಪತಿಗೆ ನೀಡುತ್ತದೆ, ಪಟ್ಟಿಯನ್ನು ಬದಲಾಯಿಸುವ ಅಧಿಕಾರವನ್ನು ಸಂಸತ್ತಿಗೆ ನೀಡುತ್ತದೆ.
ಮರಾಠಾ ಸಮುದಾಯಕ್ಕೆ ಶೇ.16ರಷ್ಟು ಮೀಸಲಾತಿ ನೀಡುವ ಎಸ್ಇಬಿಸಿ ಕಾಯ್ದೆಯನ್ನು ಮಹಾರಾಷ್ಟ್ರ 2018ರಲ್ಲಿ ಅಂಗೀಕರಿಸಿತ್ತು. 2019ರ ಜೂನ್ನಲ್ಲಿ ಬಾಂಬೆ ಹೈಕೋರ್ಟ್ ಅದನ್ನು ಎತ್ತಿ ಹಿಡಿದಿತ್ತು. ಆದರೆ ನೇಮಕಾತಿಯಲ್ಲಿನ ಮೀಸಲಾತಿಯನ್ನು ಶೇ.12ಕ್ಕೆ ಮತ್ತು ಶಿಕ್ಷಣ ಸಂಸ್ಥೆ ಪ್ರವೇಶಾತಿ ಮೀಸಲಾತಿಯನ್ನು ಶೇ.13ಕ್ಕೆ ಇಳಿಸಿತ್ತು.