ಕೇಂದ್ರ ಕಾಯ್ದೆಗಳ ವಿರುದ್ಧ ನಿರ್ಣಯ ಮಂಡಿಸಲು ಯಾವುದೇ ತಕರಾರಿಲ್ಲ; ಸುಪ್ರೀಂ
ನವದೆಹಲಿ, ಮಾರ್ಚ್ 20: ವಿವಾದಾತ್ಮಕ ಕೃಷಿ ಕಾಯ್ದೆ ಹಾಗೂ ಸಿಎಎಗಳಂಥ ಕೇಂದ್ರ ಕಾಯ್ದೆಗಳ ವಿರುದ್ಧ ರಾಜ್ಯ ವಿಧಾನಸಭೆಗಳಲ್ಲಿ ನಿರ್ಣಯ ಮಂಡಿಸಲು ಯಾವುದೇ ತೊಂದರೆಯಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದ್ದು, ಕೇರಳ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳನ್ನು ಉಲ್ಲೇಖಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ನೇತೃತ್ವದ ಪೀಠವು, ನಿರ್ಣಯ ಎನ್ನುವುದು ವಿಧಾನಸಭೆ ಸದಸ್ಯರ ಬಹುಮತ ಅಭಿಪ್ರಾಯವಾಗಿರುತ್ತದೆ. ಹೀಗಾಗಿ ರಾಜ್ಯಗಳು ಕೇಂದ್ರ ಕಾಯ್ದೆಗಳನ್ನು ವಿರೋಧಿಸಿ ನಿರ್ಣಯಗಳನ್ನು ಮಂಡಿಸಲು ಯಾವುದೇ ತಕರಾರಿಲ್ಲ ಎಂದು ಹೇಳಿದೆ.
3 ಕೋಟಿ ಪಡಿತರ ಚೀಟಿ ರದ್ದು; ಕೇಂದ್ರ, ರಾಜ್ಯಗಳಿಗೆ ಸುಪ್ರೀಂ ಸೂಚನೆ
ರಾಜಸ್ಥಾನ ಮೂಲದ ಎನ್ಜಿಒ ಸಮತಾ ಆಂದೋಲನ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ಶುಕ್ರವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ. ರಾಜಸ್ಥಾನ, ಕೇರಳ, ಪಂಜಾಬ್ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಕೃಷಿ ಕಾನೂನು ಸಂಬಂಧ ಯಾವುದೇ ಸಂಬಂಧ ಹೊಂದಿಲ್ಲ. ಆದರೂ ನಿರ್ಣಯ ಮಂಡಿಸಿವೆ ಎಂದು ಅರ್ಜಿಯಲ್ಲಿ ನಮೂದಿಸಲಾಗಿತ್ತು.
ಹಿರಿಯ ವಕೀಲರಾದ ಸೌಮ್ಯಾ ಚಕ್ರವರ್ತಿ ಅವರು ಸಮಿತಿಯನ್ನು ಪ್ರತಿನಿಧಿಸಿದ್ದು, ಈ ನಿರ್ಣಯಗಳನ್ನು ರದ್ದುಮಾಡಿ ಅವುಗಳನ್ನು ಅನೂರ್ಜಿತಗೊಳಿಸುವಂತೆ ಮನವಿ ಮಾಡಿದ್ದರು.
ಸಿಎಎ ಕಾಯ್ದೆ ಸಮಾನತೆ ಹಕ್ಕನ್ನು ಉಲ್ಲಂಘಿಸುವ ಕಾನೂನಾಗಿದೆ. ಇದನ್ನು ರದ್ದುಗೊಳಿಸಬೇಕು ಎಂದು ಕೇರಳ ವಿಧಾನಸಭೆಯು ಡಿಸೆಂಬರ್ 31, 2019ರಂದು ಮಂಡಿಸಿದ್ದ ನಿರ್ಣಯವನ್ನು ಗಮನದಲ್ಲಿಟ್ಟುಕೊಂಡು ಈ ಅರ್ಜಿ ಸಲ್ಲಿಸಲಾಗಿತ್ತು.
ಈ ಬಗ್ಗೆ ಉಲ್ಲೇಖಿಸಿದ ನ್ಯಾಯಾಲಯ, ಇದು ಕೇರಳ ವಿಧಾನಸಭೆಯ ಬಹುಮತದ ಅಭಿಪ್ರಾಯವಾಗಿತ್ತು. ಕಾನೂನನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರಷ್ಟೆ ಎಂದು ತಿಳಿಸಿದೆ.