ಜಮಾತ್ ಮಸೀದಿಗೆ ಹೋಗಿದ್ದವರ ರಾಜ್ಯಾವಾರು ಅಂಕಿ-ಅಂಶ ಇಲ್ಲಿದೆ
ದೆಹಲಿ, ಮಾರ್ಚ್ 31: ದೇಶಾದ್ಯಂತ ಕೊರೊನಾ ವೈರಸ್ ಭೀತಿಯಲ್ಲಿದೆ. ಸೋಂಕು ಹರಡುವಿಕೆಯನ್ನು ನಿಯಂತ್ರಸಲು ಕೇಂದ್ರ ಸರ್ಕಾರ 21 ದಿನಗಳ ಕಾಲ ಲಾಕ್ಡೌನ್ ಘೋಷಿಸಿದೆ. ಲಾಕ್ಡೌನ್ನಿಂದ ಸೋಂಕು ಹರಡುವಿಕೆಯಲ್ಲಿ ಇಳಿಮುಖ ಕಂಡಿದೆ ಎನ್ನಲಾಗುತ್ತಿದೆ. ಇದೀಗ, ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದಿದ್ದ ಧಾರ್ಮಿಕ ಕಾರ್ಯಕ್ರಮ ಭಾರತದ ಪಾಲಿಗೆ ಕಂಟಕವಾಗಲಿದ್ಯಾ ಎಂಬ ಅನುಮಾನ ಕಾಡ್ತಿದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸುಮಾರು 2000 ಜನರು ಭಾಗವಹಿಸಿದ್ದರು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಈ ಕಾರ್ಯಕ್ರಮದಲ್ಲಿ ಇದ್ದವರ ಪೈಕಿ ಇದುವರೆಗೂ 24 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇನ್ನು 7 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ ಎಂಬ ಆಘಾತಕಾರಿ ವಿಷಯ ಬಹಿರಂಗವಾಗಿದೆ. ಸತ್ತವರ ಪೈಕಿ ತೆಲಂಗಾಣದಲ್ಲಿ 6 ಜನ ಹಾಗೂ ಕರ್ನಾಟಕದಲ್ಲಿ ಒಬ್ಬರು ಎನ್ನಲಾಗಿದೆ.
ಮಾರ್ಚ್ ತಿಂಗಳಲ್ಲಿ ನಡೆದಿದ್ದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಪೈಕಿ ರಾಜ್ಯಾವಾರು ಅಂಕಿ-ಅಂಶ ಲಭ್ಯವಾಗಿದೆ. ಈ ಪೈಕಿ ತಮಿಳುನಾಡಿನಿಂದ ಅತಿ ಹೆಚ್ಚು ಜನರು ಈ ಮಸೀದಿಯಲ್ಲಿ ಕಾಣಿಸಿಕೊಂಡಿದ್ದರಂತೆ. ಉಳಿದಂತೆ ಯಾವ ಯಾವ ರಾಜ್ಯದಿಂದ ಎಷ್ಟು ಜನರು ಭಾಗವಹಿಸಿದ್ದರು? ಮುಂದೆ ಓದಿ....
334 ಜನರು ಆಸ್ಪತ್ರೆಗೆ ರವಾನೆ
ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮಾಹಿತಿ ನೀಡಿದ್ದು, ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ 1500 ರಿಂದ 2000 ಜನರು ಭಾಗವಹಿಸಿದ್ದರು. ಈ ಪೈಕಿ 24 ಜನರಿಗೆ ಸೋಂಕು ದೃಢವಾಗಿದೆ. 334 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 700 ಜನರನ್ನು ಕ್ವಾರೆಂಟೈನ್ಗೆ ಒಳಪಡಿಸಲಾಗಿದೆ. ಉಳಿದವರ ಸಂಪರ್ಕಿಸಲಾಗುತ್ತಿದೆ ಎಂದಿದ್ದಾರೆ.
ತಮಿಳುನಾಡಿನ ಜನರು ಹೆಚ್ಚು
ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ತಮಿಳುನಾಡಿನಿಂದ 501 ಜನರು ಭಾಗವಹಿಸಿದ್ದರು ಎಂಬ ಅಂಕಿ ಅಂಶ ಬಹಿರಂಗವಾಗಿದೆ. ರಾಜ್ಯವಾರು ನೋಡುವುದಾರೇ ತಮಿಳುನಾಡಿನವರೇ ಹೆಚ್ಚು. ತಮಿಳುನಾಡು ಬಿಟ್ಟರೆ ಅಸ್ಸಾಂ ಮೂಲದವರು 216 ಜನ ಹಾಗೂ ಉತ್ತರ ಪ್ರದೇಶದ 156 ಜನರು ಹೋಗಿದ್ದರು.
ಬಿಹಾರ್ದಿಂದ ಕರ್ನಾಟಕ?
ಮಹಾರಾಷ್ಟ್ರದಿಂದ 109 ಜನರು, ಮಧ್ಯಪ್ರದೇಶದಿಂದ 107 ಜನರು, ಬಿಹಾರ್ ರಾಜ್ಯದಿಂದ 86 ಜನರು, ಪಶ್ಚಿಮ ಬಂಗಾಳದಿಂದ 73 ಜನರು, ಹೈದರಾಬಾದ್ ನಲ್ಲಿ 55 ಜನರು, ರಾಂಚಿಯಿಂದ 46 ಜನರು, ಅಂಡಮಾನ್ 21 ಜನರು, ಹರಿಯಾಣದಿಂದ 22, ಹಿಮಾಚಲ ಪ್ರದೇಶದಿಂದ 15 ಹಾಗೂ ಕರ್ನಾಟಕದಿಂದ 45 ಜನರು ಎಂದು ತಿಳಿದುಬಂದಿದೆ. ಆದರೆ, ಕರ್ನಾಟಕದಿಂದ 54 ಜನರು ಹೋಗಿದ್ದರು ಎಂದು ಕರ್ನಾಟಕ ಆರೋಗ್ಯ ಸಚಿವ ಶ್ರೀರಾಮುಲು ಮಾಹಿತಿ ನೀಡಿದ್ದಾರೆ.
281 ಜನರು ವಿದೇಶಿಗರು
ಕೇರಳದಿಂದ 15 ಜನರು, ಮೇಘಲಾಯದಿಂದ 5, ಒಡಿಶಾ 15, ಪಂಜಾಬ್ನಲ್ಲಿ 9 ಜನರು, ರಾಜಸ್ಥಾನದಲ್ಲಿ 19, ಉತ್ತರಾಖಂಡದಿಂದ 34 ಜನರು ಈ ಕಾರ್ಯಕ್ರಮದಲ್ಲಿದ್ದರು. ಹಾಗೂ ವಿದೇಶದಿಂದ ಸುಮಾರು 281 ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸದ್ಯದ ದಾಖಲೆಗಳ ಪ್ರಕಾರ 1830 ಜನರು ಈ ಸಮಾರಂಭದಲ್ಲಿ ಇದ್ದರು ಎಂಬ ವಿಷಯ ಬಹಿರಂಗವಾಗಿದೆ.