"ಶೀಘ್ರದಲ್ಲಿಯೇ ರಷ್ಯಾದ ಸ್ಪುಟ್ನಿಕ್ ಲಸಿಕೆ ಭಾರತಕ್ಕೆ"
ನವದೆಹಲಿ, ಡಿಸೆಂಬರ್ 22: ರಷ್ಯಾದ ಸ್ಫುಟ್ನಿಕ್ ವಿ ಲಸಿಕೆಯು ಶೀಘ್ರದಲ್ಲಿಯೇ ಭಾರತಕ್ಕೆ ಬರಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭರವಸೆ ವ್ಯಕ್ತಪಡಿಸಿದ್ದಾರೆ.
"ಮೊದಲು ಆರೋಗ್ಯ ಕಾರ್ಯಕರ್ತರು, ವೈದ್ಯರು ಹಾಗೂ ಸಿಬ್ಬಂದಿಗೆ ಕೊರೊನಾ ಲಸಿಕೆ ನೀಡಲಾಗುವುದು. ನಮ್ಮ ವಿಜ್ಞಾನಿಗಳು ಶೀಘ್ರವೇ ಲಸಿಕೆಗಳ ಪ್ರಯೋಗಗಳನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ" ಎಂದು ತಿಳಿಸಿದ್ದಾರೆ.
"ಕೃಷಿ ವಲಯದ ವಿರುದ್ಧ ಹೋಗುವ ಪ್ರಶ್ನೆಯೇ ಇಲ್ಲ"
ಲಕ್ನೋನ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನದ ವಿಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಭಾರತ ಕಲ್ಪಿಸಿಕೊಳ್ಳಲೂ ಆಗದಿದ್ದ ಯುದ್ಧ ಮಾಡುವಂತೆ ಕೋವಿಡ್ ಸಾಂಕ್ರಾಮಿಕ ಮಾಡಿದೆ. ಈ ಯುದ್ಧದಲ್ಲಿ ಶಸ್ತ್ರಗಳು ಹಾಗೂ ಸೈನಿಕರೊಂದಿಗೆ ಹೋರಾಡುವ ಬದಲು ನಮ್ಮ ವೈದ್ಯಕೀಯ ಸಿಬ್ಬಂದಿಯನ್ನು ಮುಂಚೂಣಿಯಲ್ಲಿರಿಸಿ ಯುದ್ಧದಲ್ಲಿ ಹೋರಾಡುತ್ತಿದ್ದೇವೆ. ಇವರೆಲ್ಲರೂ ಕೊರೊನಾ ಎಂಬ ಶತ್ರುವಿನ ವಿರುದ್ಧ ಹೋರಾಟದಲ್ಲಿದ್ದಾರೆ. ಇಂಥದ್ದೇ ಪರಿಸ್ಥಿತಿ ನೂರು ವರ್ಷದ ಹಿಂದೆ ಸ್ಪಾನಿಷ್ ನಲ್ಲಿನ ಸಾಂಕ್ರಾಮಿಕ ಕಾಣೀಸಿಕೊಂಡಾಗಲೂ ಎದುರಾಗಿತ್ತು" ಎಂದರು.
ವೈದ್ಯರ ಹೊರತಾಗಿ ಯಾವ ಸೂಪರ್ ಮ್ಯಾನ್ ಕೂಡ ಜನರನ್ನು ಈ ಸೋಂಕಿನಿಂದ ರಕ್ಷಿಸಲು ಸಾಧ್ಯವಿಲ್ಲ. ವೈದ್ಯರೇ ಸೂಪರ್ ಹೀರೋಗಳು. ವೈದ್ಯರು, ನರ್ಸ್, ಇವರೆಲ್ಲರ ಮಾನವೀಯ ಗುಣ ಎಂದಿಗೂ ನೆನಪಿಸಿಕೊಳ್ಳುವಂಥದ್ದು ಎಂದು ಶ್ಲಾಘಿಸಿದ್ದಾರೆ.
ಸರ್ಕಾರದ ಮೊದಲ ಆದ್ಯತೆ ಆರೋಗ್ಯ ಸೇವೆ. ಆದರೆ 135 ಕೋಟಿ ಜನರಿಗೆ ಆರೋಗ್ಯ ಸೇವೆ ನೀಡುವುದು ಬಹುದೊಡ್ಡ ಜವಾಬ್ದಾರಿ. ಆರೋಗ್ಯ ಕ್ಷೇತ್ರದ ಮೇಲೆ ಸರ್ಕಾರ 1.16%ರಷ್ಟು ಜಿಡಿಪಿ ವ್ಯಯಿಸಿದೆ. ಈ ಕ್ಷೇತ್ರದಲ್ಲಿ ಖಾಸಗಿಯವರೂ ವಿನಿಯೋಗ ಮಾಡದಿದ್ದರೆ ಪರಿಸ್ಥಿತಿ ಇನ್ನಷ್ಟು ಕಠಿಣವಾಗುತ್ತಿತ್ತು ಎಂದಿದ್ದಾರೆ.
ಪ್ರತಿಯೊಬ್ಬರೂ ಆರೋಗ್ಯ ಸೇವೆಯಿಂದ ವಂಚಿತರಾಗದಂತೆ ಮಾಡಲು ಆಯುಷ್ಮಾನ್ ಭಾರತ ಯೋಜನೆಯನ್ನು ನೂರು ಮಿಲಿಯನ್ ಕುಟುಂಬಗಳಿಗೆ ಜಾರಿಗೆ ತರಲಾಯಿತು. ಇದುವರೆಗೂ 17,000 ಕೋಟಿ ರೂವರೆಗೆ 1.5 ಕೋಟಿ ಜನರು ಇದರ ಉಪಯೋಗ ಪಡೆದುಕೊಂಡಿದ್ದಾರೆ. ದೇಶದಲ್ಲಿ ಆರೋಗ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಕೆಲಸ ನಡೆಯುತ್ತಿದೆ. ಇದಕ್ಕೆ ಉದಾಹರಣೆ, ದೇಶದಲ್ಲಿ 2014ರಲ್ಲಿ 381 ವೈದ್ಯಕೀಯ ಕಾಲೇಜುಗಳ ಸಂಖ್ಯೆ ಈಗ 541ಕ್ಕೆ ಏರಿರುವುದು ಎಂದರು.