ಮಾಜಿ ಪ್ರಧಾನಿ ಮನಮೋಹನ್ ಸಿಂಗ್ಗೆ ನೀಡಿದ Z+ ಭದ್ರತೆ ವಾಪಸ್?
ನವದೆಹಲಿ, ಆಗಸ್ಟ್ 26: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ನೀಡಿದ ಝೆಡ್ ಪ್ಲಸ್ ಶ್ರೇಣಿಯ ಭದ್ರತೆಯನ್ನು ಹಿಂದಕ್ಕೆ ಪಡೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ. ಆದರೆ, ಇದನ್ನು ಕೇಂದ್ರ ಗೃಹ ಸಚಿವಾಲಯ ನಿರಾಕರಿಸಿದೆ.
ಮನಮೋಹನ್ ಸಿಂಗ್ ಅವರಿಗೆ ನೀಡಿದ ವಿಶೇಷ ಭದ್ರತಾ ಪಡೆಯ (ಎಸ್ಪಿಜಿ) ಭದ್ರತೆಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಅದರ ಬದಲು ಅವರಿಗೆ ಕೇಂದ್ರ ಮೀಸಲು ಪಡೆಯ ಪೊಲೀಸರ (ಸಿಆರ್ಪಿಎಫ್) ಭದ್ರತೆ ಹೊಂದಲಿದ್ದಾರೆ. ಪೊಲೀಸ್, ಗುಪ್ತಚರ ಸೇರಿದಂತೆ ವಿವಿಧ ಎಲ್ಲ ಇಲಾಖೆಗಳು ನಡೆಸುವ ನಿರಂತರ ನಡೆಸುವ ಮೌಲ್ಯಮಾಪನದ ಮಾಹಿತಿಗಳ ಆಧಾರದಲ್ಲಿ ಗೃಹ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ ಎಂದು ವರದಿಯಾಗಿದೆ.
ತಾವೇ ಉದ್ಘಾಟಿಸಿದ ಸಿಬಿಐ ಕಟ್ಟಡದಲ್ಲಿ ಬಂಧಿಯಾದ ಚಿದಂಬರಂ
ಎಸ್ಪಿಜಿ ಭದ್ರತೆಯನ್ನು ಕೆಲವೇ ಆಯ್ದ ಗಣ್ಯ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಪ್ರತಿ ವರ್ಷವೂ ಈ ಭದ್ರತೆಯನ್ನು ಪರಾಮರ್ಶೆಗೆ ಒಳಪಡಿಸಲಾಗುತ್ತದೆ. ಗಣ್ಯ ವ್ಯಕ್ತಿಯ ಸ್ಥಾನಮಾನ, ಅವರಿಗೆ ಇರುವ ಬೆದರಿಕೆ ಮುಂತಾದವುಗಳ ಆಧಾರದಲ್ಲಿ ಅವರಿಗೆ ನೀಡಿರುವ ಎಸ್ಪಿಜಿ ಭದ್ರತೆಯನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂದು ನಿರ್ಣಯಿಸಲಾಗುತ್ತದೆ. ಅದರಂತೆಯೇ ಮನಮೋಹನ್ ಸಿಂಗ್ ಅವರ ಎಸ್ಪಿಜಿ ಭದ್ರತೆಯನ್ನು ಪರಾಮರ್ಶೆಗೆ ಒಳಪಡಿಸಲಾಗಿದೆ.
ಸೋನಿಯಾ, ರಾಹುಲ್, ಪ್ರಿಯಾಂಕಾಗೆ ಎಸ್ಪಿಜಿ
ದೇಶದ ಅತ್ಯಂತ ಪ್ರಮುಖ ರಾಜಕಾರಣಿಗಳಿಗೆ ಮಾತ್ರವೇ ಈ ಭದ್ರತೆಯನ್ನು ನೀಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊರತುಪಡಿಸಿದರೆ, ಎಸ್ಪಿಜಿ ಭದ್ರತೆ ಹೊಂದಿರುವ ಇತರೆ ನಾಲ್ವರೂ ಕಾಂಗ್ರೆಸ್ ಮುಖಂಡರೇ ಆಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಕೂಡ ಎಸ್ಪಿಜಿ ಭದ್ರತೆ ನೀಡಲಾಗುತ್ತಿದೆ.
ಪ್ರತಿ ವರ್ಷ ಭದ್ರತೆ ಮೌಲ್ಯಮಾಪನ
ಭದ್ರತಾ ಸಂಸ್ಥೆಗಳು ಗಣ್ಯಾತಿ ಗಣ್ಯ ವ್ಯಕ್ತಿಗೆ ಇರುವ ಭದ್ರತೆಯ ಆಧಾರದಲ್ಲಿ ಕಾಲಕಾಲಕ್ಕೆ ಭದ್ರತಾ ನಿಯೋಜನೆಯನ್ನು ವೃತ್ತಿಪರ ಮೌಲ್ಯ ನಿರ್ಣಯಕ್ಕೆ ಒಳಪಡಿಸುತ್ತವೆ. ಎಲ್ಲ ಮಾಜಿ ಪ್ರಧಾನಿಗಳಿಗೂ ಎಸ್ಪಿಜಿ ರಕ್ಷಣೆ ನೀಡಿರಲಿಲ್ಲ. ಮನಮೋಹನ್ ಸಿಂಗ್ ಅವರಿಗೆ ಎಸ್ಪಿಜಿ ಭದ್ರತೆ ಮುಂದುವರಿಸಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಎನ್ಡಿಟಿವಿ ವರದಿ ಮಾಡಿತ್ತು.
2004-2014ರವರೆಗೆ ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ವೈಯಕ್ತಿಕವಾಗಿ ಭದ್ರತೆಯ ಕುರಿತು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಅವರು ಸರ್ಕಾರದ ನಿರ್ಧಾರದಂತೆ ಇರಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.
ಮೋದಿ ನಾಯಕನಾಗಿ ಭಾರತವನ್ನು ವಿಫಲಗೊಳಿಸಿದರು: ಮನಮೋಹನ್ ಸಿಂಗ್
ದೇವೇಗೌಡರಿಗೆ ಎಸ್ಪಿಜಿ ಇಲ್ಲ
ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡ ಮತ್ತು ವಿಪಿ ಸಿಂಗ್ ಅವರಿಗೆ ನೀಡಲಾಗಿದ್ದ ಎಸ್ಪಿಜಿ ಭದ್ರತೆಯನ್ನು ಕೂಡ ಎರಡು ದಶಕಗಳ ಹಿಂದೆಯೇ ಹಿಂಪಡೆಯಾಗಿತ್ತು. ಮತ್ತೊಬ್ಬ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅನಾರೋಗ್ಯದ ಕಾರಣ ಹಲವು ವರ್ಷ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಇದ್ದರೂ ಅವರು ನಿಧನರಾಗುವ 2018ರವರೆಗೂ ಎಸ್ಪಿಜಿ ಭದ್ರತೆ ನೀಡಲಾಗಿತ್ತು.
ಎಸ್ಪಿಜಿ ವಾಪಸ್ ಇಲ್ಲ
ಮನಮೋಹನ್ ಸಿಂಗ್ ಅವರಿಗೆ ನೀಡಲಾಗಿರುವ ಭದ್ರತೆಯನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ ಎಂಬ ವರದಿಯನ್ನು ಗೃಹಸಚಿವಾಲಯ ತಳ್ಳಿಹಾಕಿದೆ. ಎಸ್ಪಿಜಿ ಭದ್ರತೆಯ ಕುರಿತಾದ ವಾರ್ಷಿಕ ಪರಾಮರ್ಶೆಯನ್ನು ನಡೆಸಲಾಗಿದೆ. ಆದರೆ, ಅದನ್ನು ವಾಪಸ್ ಪಡೆದುಕೊಳ್ಳುತ್ತಿಲ್ಲ. ಅವರಿಗೆ ನೀಡಿರುವ ಎಸ್ಪಿಜಿ ಭದ್ರತೆಯನ್ನು ಮುಂದುವರಿಸಲಾಗುತ್ತದೆ ಎಂದು ಗೃಹ ಸಚಿವಾಲಯ ಸ್ಪಷ್ಟೀಕರಣ ನೀಡಿದೆ.
ಆತಂಕಕಾರಿ, ವಿನಾಶಕಾರಿ ಮೋದಿ ಸರಕಾರವನ್ನು ತೊಲಗಿಸಬೇಕು: ಮ.ಮೋ.ಸಿಂಗ್
ಎಸ್ಪಿಜಿ ಬೇಡವೆಂದಿದ್ದ ಸಿಂಗ್ ಮಗಳು
ಎಸ್ಪಿಜಿಯಲ್ಲಿ ಸುಮಾರು 3,000 ಸಿಬ್ಬಂದಿಯಿದ್ದು, ಪ್ರಧಾನಿ, ಮಾಜಿ ಪ್ರಧಾನಿಗಳು ಹಾಗೂ ಇತರೆ ಆಯ್ದ ಕೆಲವು ಗಣ್ಯರಿಗೆ ಹಾಗೂ ಅವರ ಕುಟುಂಬದವರಿಗೆ ಭದ್ರತೆ ಒದಗಿಸಲಾಗುತ್ತದೆ. 2014ರಲ್ಲಿ ಮನಮೋಹನ್ ಸಿಂಗ್ ಅವರ ಸರ್ಕಾರ ಅಂತ್ಯಗೊಂಡಾಗ ಅವರ ಮಗಳು ಆಗಲೇ ತಮಗೆ ನೀಡಲಾಗಿದ್ದ ಎಸ್ಪಿಜಿ ಭದ್ರತೆಯನ್ನು ವಾಪಸ್ ತೆಗೆದುಕೊಳ್ಳುವಂತೆ ಕೋರಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರ ದತ್ತು ಪುತ್ರಿ ಕೂಡ ಭದ್ರತೆಯನ್ನು ನಿರಾಕರಿಸಿದ್ದರು.
1985ರಲ್ಲಿ ಎಸ್ಪಿಜಿ ಸ್ಥಾಪನೆ
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಅಂಗರಕ್ಷಕರಿಂದಲೇ 1984ರಲ್ಲಿ ಹತ್ಯೆಯಾಗಿದ್ದರು. ಹೀಗಾಗಿ ಪ್ರಧಾನಿಗಳ ಭದ್ರತೆಯನ್ನು ಹೆಚ್ಚಿಸಲು ಮರುವರ್ಷ ಎಸ್ಪಿಜಿಯನ್ನು ಸ್ಥಾಪನೆ ಮಾಡಲಾಗಿತ್ತು. 1991ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆಯಾದ ಬಳಿಕ ಎಸ್ಪಿಜಿ ಕಾಯ್ದೆಯಲ್ಲಿ ತಿದ್ದುಪಡಿ ತಂದು ಮಾಜಿ ಪ್ರಧಾನಿಗಳು ಮತ್ತು ಅವರ ಕುಟುಂಬದವರಿಗೂ ಹತ್ತು ವರ್ಷ ಭದ್ರತೆ ಒದಗಿಸಲು ನಿರ್ಧರಿಸಲಾಗಿತ್ತು. 2003ರಲ್ಲಿ ಅದಕ್ಕೆ ತಿದ್ದುಪಡಿ ತಂದಿದ್ದ ವಾಜಪೇಯಿ ಸರ್ಕಾರ, ಹತ್ತು ವರ್ಷದ ಸ್ವಯಂಚಾಲಿತ ಭದ್ರತೆಯನ್ನು ಒಂದು ವರ್ಷಕ್ಕೆ ಇಳಿಸಿತ್ತು. ಇದು ಗಣ್ಯ ವ್ಯಕ್ತಿಗೆ ಇರುವ ಬೆದರಿಕೆ ಮಟ್ಟವನ್ನು ಪರಿಗಣಿಸಿ ಕೇಂದ್ರ ಸರ್ಕಾರ ನಿರ್ಧರಿಸುವಂತೆ ತಿದ್ದುಪಡಿ ತರಲಾಗಿತ್ತು.