SPG ಪಾಸ್: ರಾಜ್ಯಸಭೆಯಲ್ಲಿ ರಗಡ್ ಗಲಾಟೆ, ಕಾಂಗ್ರೆಸ್ ಸಭಾತ್ಯಾಗ!
ದೆಹಲಿ, ಡಿಸೆಂಬರ್.03: ರಾಜ್ಯಸಭೆಯಲ್ಲಿ ವಿಶೇಷ ಭದ್ರತಾ ಸೌಲಭ್ಯ ವಿಧೇಯಕ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಯಿತು. ಗಾಂಧಿ ಕುಟುಂಬದ ಮೂವರಿಗೆ ನೀಡಿದ್ದ ಎಸ್ ಪಿಜಿ ಸೌಲಭ್ಯ ವಾಪಸ್ ಪಡೆದಿದ್ದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸದಸ್ಯರು ಕೆಂಡಾಮಂಡಲರಾದರು.
ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಪತ್ನಿ ಸೋನಿಯಾ ಗಾಂಧಿ, ಪುತ್ರ ರಾಹುಲ್ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕಾ ವಾದ್ರಾ ಗಾಂಧಿಗೆ ನೀಡಿದ್ದ ವಿಶೇಷ ಭದ್ರತಾ ಸೌಲಭ್ಯವನ್ನು ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ವಾಪಸ್ ಪಡೆದಿತ್ತು. ಎಸ್ ಪಿಜಿ ಬದಲು ಝೆಡ್ ಪ್ಲಸ್ ಭದ್ರತೆ ನೀಡುವುದಾಗಿ ಘೋಷಿಸಿತ್ತು.
ಗಾಂಧಿ ಕುಟುಂಬಕ್ಕೆ ಏಕಿಲ್ಲ SPG ಸೌಲಭ್ಯ: ರಾಜ್ಯಸಭೆಯಲ್ಲೂ ಇದೇ ಚರ್ಚೆ
ಇದರ ಮಧ್ಯೆ ರಾಜ್ಯಸಭೆಯಲ್ಲಿ ವಿಶೇಷ ಭದ್ರತಾ ಸೌಲಭ್ಯ ವಿಧೇಯಕವನ್ನು ಗೃಹ ಸಚಿವ ಅಮಿತ್ ಶಾ ಮಂಡಿಸಿದರು. ಈ ವೇಳೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಗಾಂಧಿ ಕುಟುಂಬವನ್ನು ವಿರೋಧಿಸುತ್ತಿಲ್ಲ. ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಿದೆ ಎಂದು ಹೇಳಿದರು.
ವಿಶೇಷ ಭದ್ರತಾ ಸೌಲಭ್ಯ ಪ್ರತಿಷ್ಠೆ ಅಲ್ಲವೇ ಅಲ್ಲ!
ವಿಶೇಷ ಭದ್ರತಾ ಸೌಲಭ್ಯ ಎಂಬುದು ಪ್ರತಿಷ್ಛೆಯ ಪ್ರಶ್ನೆಯಲ್ಲ. ಎಸ್ ಪಿಜಿ ಭದ್ರತೆಗಾಗಿ ಪಟ್ಟು ಹಿಡಿದಿರುವ ಉದ್ದೇಶವಾದರೂ ಏನು. ಎಸ್ ಪಿಜಿ ಭದ್ರತೆಯನ್ನು ದೇಶದ ಪ್ರಮುಖ ನಾಯಕರಿಗೆ ಮಾತ್ರ ನೀಡಲಾಗುತ್ತದೆಯೇ ವಿನಃ ಎಲ್ಲರಿಗೂ ಈ ಸೌಲಭ್ಯ ಒದಗಿಸಲು ಆಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಮೇಲ್ಮನೆಯಲ್ಲಿ 5ನೇ ತಿದ್ದುಪಡಿ ವಿಧೇಯಕ ಅಂಗೀಕಾರ
ರಾಜ್ಯಸಭೆಯಲ್ಲಿ ಎಸ್ ಪಿಜಿ ಬಿಲ್ ನ 5ನೇ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು. ಈ ವೇಳೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಇದು ಐದನೇ ತಿದ್ದುಪಡಿಯಾಗಿದ್ದು, ಈ ಹಿಂದಿನ ನಾಲ್ಕು ತಿದ್ದುಪಡಿ ಒಂದು ಕುಟುಂಬವನ್ನು ವಿರೋಧಿಸಿ ಮಾಡಲಾಗಿತ್ತು. ಆದರೆ, ನಾವು ಗಾಂಧಿ ಕುಟುಂಬವನ್ನು ವಿರೋಧಿಸುತ್ತಿಲ್ಲ. ನಾವು ವಿರೋಧಿಸುತ್ತಿರುವುದು ಕುಟುಂಬ ರಾಜಕಾರಣವನ್ನು ಎಂದು ಅಮಿತ್ ಶಾ ಹೇಳಿದರು.
ರಾಜ್ಯಸಭೆಯಲ್ಲಿ ಎಸ್ ಪಿಜಿ ವಿಧೇಯಕ ಅಂಗೀಕಾರ
ಇನ್ನು, ರಾಜ್ಯಸಭೆಯಲ್ಲಿ ಅಮಿತ್ ಶಾ ನೀಡಿದ ಉತ್ತರದಿಂದ ವಿರೋಧ ಪಕ್ಷಗಳು ಕೆರಳಿ ಕೆಂಡವಾದವು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್ ಸದಸ್ಯರು, ರಾಜ್ಯಸಭೆ ಕಲಾಪವನ್ನು ಬಹಿಷ್ಕರಿಸಿ ಹೊರ ನಡೆದರು.
ಸಂಸತ್ ಕೆಳಮನೆಯಲ್ಲಿ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ
ಇಂದು ರಾಜ್ಯಸಭೆಯಲ್ಲಿ ಎಸ್ ಪಿಸಿ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ಸಿಕ್ಕಿದೆ. ಇದಕ್ಕೂ ಮೊದಲೇ ಲೋಕಸಭೆಯಲ್ಲಿ ತಿದ್ದುಪಡಿ ವಿಧೇಯಕವನ್ನು ಸಲ್ಲಿಸಿ ಒಪ್ಪಿಗೆ ಪಡೆಯಲಾಗಿದೆ. ಇನ್ನು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಂಕಿತಕ್ಕೆ ತಿದ್ದುಪಡಿ ವಿಧೇಯಕವನ್ನು ಕಳುಹಿಸಿಕೊಡಲಾಗುತ್ತದೆ.