ಸುಪ್ರೀಂ ನ್ಯಾಯಾಧೀಶರುಗಳ ನೇಮಕದ ಊಹಾತ್ಮಕ ವರದಿ: ಸಿಜೆಐ ಅಸಮಾಧಾನ
ನವದೆಹಲಿ, ಆ. 18: ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನ್ಯಾಯಾಧೀಶರುಗಳನ್ನು ಬಡ್ತಿ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ ಎಂಬ ಮಾಧ್ಯಮಗಳ ವರದಿಗಳ ಬಗ್ಗೆ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಮೂರ್ತಿ ಎನ್ ವಿ ರಮಣ ಬುಧವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂವರು ನ್ಯಾಯಾಧೀಶೆಯರು ಸೇರಿದಂತೆ ಒಟ್ಟು 9 ಮಂದಿ ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ನೀಡುವಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಹಾಗೆಯೇ ಹೆಸರುಗಳನ್ನು ಕೂಡಾ ಮಾಧ್ಯಮಗಳು ಉಲ್ಲೇಖ ಮಾಡಿದ್ದವು.
ಸುನಂದಾ ಪುಷ್ಕರ್ ಪ್ರಕರಣ: ಈ ನಿಗೂಢ ಸಾವಿನ ಎಲ್ಲಾ ತಿರುವುಗಳ ಟೈಮ್ಲೈನ್
ಕರ್ನಾಟಕ ಹೈಕೋರ್ಟ್ನ ನ್ಯಾಯಾಧೀಶೆ ಜಸ್ಟೀಸ್ ಬಿ ವಿ ನಾಗರತ್ನ, ಗುಜರಾತ್ ಹೈಕೋರ್ಟ್ನ ಜಸ್ಟೀಸ್ ಬೇಲ ತ್ರಿವೇದಿ ಹಾಗೂ ತೆಲಂಗಾಣ ಹೈಕೋರ್ಟ್ನ ನ್ಯಾಯಾಧೀಶ ಹಿಮ ಕೊಹ್ಲಿರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ನೀಡಿ ನೇಮಕಾತಿ ಮಾಡುವಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು.
ಈ ವರದಿಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ನ ನ್ಯಾಯಾಧೀಶ ಎನ್ ವಿ ರಮಣ ಈ ಎಲ್ಲಾ ವರದಿಗಳು ಬರೀ ಊಹಾಪೋಹ ಎಂದು ಹೇಳಿದ್ದಾರೆ. ಹಾಗೆಯೇ ಇನ್ನೂ ಕೂಡಾ ಆಯ್ಕೆ ಪ್ರಕ್ರಿಯೆಯೇ ಮುಕ್ತಾಯವಾಗಿಲ್ಲ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ.
ನ್ಯಾಯಮೂರ್ತಿ ನವೀನ್ ಸಿನ್ಹಾರ ವಿದಾಯ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಾಧೀಶ ಎನ್ ವಿ ರಮಣ ಈ ಕೊಲಿಜಿಯಂ ಶಿಫಾರಸು ವರದಿಯ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಈ ಸುದ್ದಿಗಳು ಸುಳ್ಳು, ಇದು ಬರೀ ಊಹಾಪೋಹದ ಸುದ್ದಿಗಳಾಗಿದ್ದು ಮಾಧ್ಯಮಗಳು ಈ ರೀತಿ ಊಹೆ ಮಾಡಿ ವರದಿ ಮಾಡಿರುವುದು ತೀರಾ ದುರದೃಷ್ಟಕರವಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದ್ದಾರೆ.
ಮಹತ್ವದ ತೀರ್ಪುಗಳ ನೀಡಿದ ಸುಪ್ರೀಂ ಜಡ್ಜ್ ನಾರಿಮನ್ ನಿವೃತ್ತಿ: ಇಲ್ಲಿದೆ ರೋಹಿಂಟನ್ ಜೀವನದ ಹಾದಿ
ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಗೆ ಅದರದ್ದೇ ಆದ ಘನತೆಯಿದೆ. ಈ ನೇಮಕಾತಿ ಪ್ರಕ್ರಿಯೆಯು ಬಹಳ ಪವಿತ್ರವಾದದ್ದು. ಮಾಧ್ಯಮಗಳು ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯ ಪಾವಿತ್ರತ್ಯೆಯನ್ನು ಅರ್ಥೈಸಿಕೊಂಡು ಅದಕ್ಕೆ ಗೌರವ ನೀಡಬೇಕು ಎಂದು ಕೂಡಾ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಇನ್ನೂ ಕೂಡಾ ಆಯ್ಕೆ ಪ್ರಕ್ರಿಯೆಯೇ ಕೊನೆಯಾಗದೆ ಇರುವಾಗ ಮಾಧ್ಯಮಗಳು ತಮ್ಮದೇ ಊಹೆ ಮಾಡಿಕೊಂಡು ವರದಿ ಮಾಡುವುದು ಸರಿಯಾದ ಕ್ರಮವಲ್ಲ. ಮಾಧ್ಯಮಗಳು ಈ ಮೂಲಕ ನ್ಯಾಯಾಲಯದ ಘನತೆ ಹಾಗೂ ಗೌರವಕ್ಕೆ ಧಕ್ಕೆ ಉಂಟು ಮಾಡಿದೆ. ಈ ರೀತಿ ಊಹೆ ಮಾಡಿ ವರದಿ ಮಾಡುವುದರಿಂದಾಗಿ ಉಜ್ವಲ ಪ್ರತಿಭೆಗಳ ವೃತ್ತಿ ಪ್ರತಿಭೆ, ಬೆಳವಣಿಗೆಗಳು ಹಾಳಾಗುತ್ತದೆ ಎಂದು ಎನ್ ವಿ ರಮಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಸದರು, ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣ 2 ವರ್ಷದಲ್ಲಿ ಶೇ.17 ಹೆಚ್ಚಳ
ಮಾಧ್ಯಮಗಳು ಈ ವಿಚಾರದಲ್ಲಿ ಮಾಡಿರುವ ವರದಿಗಳನ್ನು ನೋಡಿ ನನಗೆ ಬಹಳ ಅಸಮಾಧಾನವಾಗಿದೆ. ಮಾಧ್ಯಮಗಳು ನಮ್ಮ ವ್ಯವಸ್ಥೆಯ ಒಂದು ಭಾಗ. ಇದರಲ್ಲಿ ಸಂಬಂಧಪಟ್ಟವರು ನ್ಯಾಯಾಲಯದ ಸಮಗ್ರತೆ ಮತ್ತು ಘನತೆಯನ್ನು ಎತ್ತಿಹಿಡಿಯಬೇಕೆಂದು ನಾನು ನಿರೀಕ್ಷೆ ಮಾಡುತ್ತೇವೆ ಎಂದಿದ್ದಾರೆ.
ಹಾಗೆಯೇ ಈ ಸಂದರ್ಭದಲ್ಲೇ ನವೀನ್ ಸಿನ್ಹಾರ ವಿದಾಯ ಕಾರ್ಯಕ್ರಮದ ಬಗ್ಗೆ ಉಲ್ಲೇಖ ಮಾಡಿದ ನ್ಯಾಯಮೂರ್ತಿಗಳು, "ನಾನು ಈ ಗಂಭೀರವಾದ ವಿದಾಯ ಕಾರ್ಯಕ್ರಮದಲ್ಲಿ ಈ ರೀತಿ ಮಾತನಾಡಿದ್ದಕ್ಕೆ ಸಹೋದರ ನವೀನ್ ಸಿನ್ಹಾ ನನ್ನನ್ನು ಕ್ಷಮಿಸುತ್ತಾರೆ ಎಂದು ನಾವು ಭಾವಿಸುತ್ತೇನೆ. ಈ ವಿಚಾರದಲ್ಲಿ ನನ್ನ ಅಸಮಾಧಾನವನ್ನು ನ್ಯಾಯಾಧೀಶರು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಭಾರತ ದೇಶಕ್ಕೆ ಸಿನ್ಹಾರು ಇನ್ನಷ್ಟು ಕೊಡುಗೆಗಳನ್ನು ನೀಡುತ್ತಾರೆ ಎಂದು ನನಗೆ ನಂಬಿಕೆಯಿದೆ. ನನ್ನ ಎಲ್ಲಾ ಸಹೋದರ, ಸಹೋದರಿ ನ್ಯಾಯಾಧೀಶರ ಪರವಾಗಿ ನಾನು ನಿಮಗೆ ಅಭಿನಂದನೆ ತಿಳಿಸುತ್ತೇನೆ," ಎಂದು ಕೂಡಾ ಹೇಳಿದರು.
(ಒನ್ಇಂಡಿಯಾ ಸುದ್ದಿ)