ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನದ ವಿಶೇಷತೆಗಳೇನು?
ಬೆಂಗಳೂರು, ಸೆ. 18: ಹಿಂದೆ ಎಸ್. ನಿಜಲಿಂಗಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ದೆಹಲಿಯಲ್ಲಿ ಕರ್ನಾಟಕ ಭವನವನ್ನು ನಿರ್ಮಾಣ ಮಾಡಲಾಗಿತ್ತು. ಇದೀಗ 53 ವರ್ಷಗಳ ಬಳಿಕ ಹಳೆಯ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ರಾಜ್ಯದಿಂದ ಕೇಂದ್ರ ಸರ್ಕಾರದ ಕೆಲಸಗಳಿಗೆ ತೆರಳುವ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಕರ್ನಾಟಕ ಭವನ-1 ಕಾವೇರಿಯಲ್ಲಿ ವಾಸ್ತವ್ಯಕ್ಕೆ ಅನುಕೂಲವಿದೆ. ಜನಸಾಮಾನ್ಯರಿಗೆ ಬೇರೆ ಕರ್ನಾಟಕ ಭವನದ ಬೇರೆ ಬೇರೆ ಕಟ್ಟಡಗಳಲ್ಲಿ ವಾಸ್ತವ್ಯಕ್ಕೆ ಅವಕಾಶವಿದೆ. ಇದೀಗ ಕಾವೇರಿ ಭವನದ ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಹಲವು ವಿಶೇಷತೆಗಳನ್ನು ಒಳಗೊಂಡ ಬಹುನಿರೀಕ್ಷಿತ ಕರ್ನಾಟಕ ಭವನದ ಪುನರ್ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದೆಹಲಿಯಲ್ಲಿ ಭೂಮಿ ಪೂಜೆ ಮಾಡಿದ್ದಾರೆ. ರಾಜ್ಯದಿಂದ ಬೆಂಗಳೂರಿಗೆ ತೆರಳುವವರಿಗೆ ಸೂರಾಗಿರುವ ಕರ್ನಾಟಕ ಭವನ ಕಟ್ಟಡವನ್ನು ಪುನರ್ ನಿರ್ಮಾಣ ಮಾಡಲು ಸರ್ಕಾರ ಹಿಂದೆಯೆ ತೀರ್ಮಾನ ಮಾಡಿತ್ತು. ಇವತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಂಕುಸ್ಥಾಪನೆ ಮಾಡಿದ್ದಾರೆ.
ವಿಜಯೇಂದ್ರ ಸೂಪರ್ ಸಿಎಂ ಆರೋಪಕ್ಕೆ ಯಡಿಯೂರಪ್ಪ ತಿರುಗೇಟು!
ರಾಷ್ಟ್ರದ ರಾಜಧಾನಿಯಲ್ಲಿ 120 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಜ್ಯದ ರಾಯಭಾರಿ ಕಚೇರಿ ಎಂದೇ ಬಣ್ಣಿಸಲಾಗುವ ಕರ್ನಾಟಕ ಭವನ-1 ಕಾವೇರಿ ಕಟ್ಟಡ ಎರಡು ತಳ ಮಹಡಿಗಳು, ನೆಲ ಮಹಡಿ ಹಾಗೂ ಆರು ಮಹಡಿ ಒಳಗೊಂಡಂತೆ ಒಟ್ಟು ಒಂಭತ್ತು ಮಹಡಿಗಳ ಈ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಮೆ. ಬಾಲಾಜಿ ಕೃಪಾ ಪ್ರಾಜೆಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಗುತ್ತಿಗೆ ಕೊಡಲಾಗಿದೆ. ಮುಂದಿನ 24 ತಿಂಗಳಲ್ಲಿ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲಿದೆ.
ಎಸ್. ನಿಜಲಿಂಗಪ್ಪ ಅವರ ಪರಿಕಲ್ಪನೆ
ನವದೆಹಲಿಯ ಚಾಣಕ್ಯಪುರಿಯಲ್ಲಿರುವ ಕೌಟಿಲ್ಯ ಮಾರ್ಗದ ಸಂಖ್ಯೆ 10ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದವನಹಳ್ಳಿ ನಿಜಲಿಂಗಪ್ಪ ಅವರ ಪರಿಕಲ್ಪನೆಯಲ್ಲಿ ರಾಜ್ಯದ ಗಣ್ಯರ ವಾಸ್ತವ್ಯಕ್ಕೆ ಕರ್ನಾಟಕ ಭವನ ಕಟ್ಟಡವು 1967 ರಲ್ಲಿ ನಿರ್ಮಾಣಗೊಂಡಿತ್ತು. ಐವತ್ತು ವರ್ಷಗಳಿಗೂ ಹೆಚ್ಚು ಕಾಲದ ಈ ಕಟ್ಟಡದಲ್ಲಿ ಕಾಲಕಾಲಕ್ಕೆ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಹವಾಮಾನ ವೈಪರೀತ್ಯಗಳಿಂದ ಕಟ್ಟಡವು ಶಿಥಿಲಗೊಳ್ಳುತ್ತಿರುವುದನ್ನು ಪರಿವೀಕ್ಷಿಸಿದ ಹಳೆಯ ಕಟ್ಟಡವನ್ನು ಕೆಡವಿ, ಅದೇ ಸ್ಥಳದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಹಿಂದೆಯೆ ಬರಲಾಗಿತ್ತು.
ಹೊಸ ಕಟ್ಟಡ ನಿರ್ಮಾಣ
2018 ರ ಫೆಬ್ರವರಿ 1 ರಂದು ಮೆ. ಸಿವಿಲ್ ಏಡ್ ಟೆಕ್ನೋ ಕ್ಲಿನಿಕ್ ತಾಂತ್ರಿಕ ಸಂಸ್ಥೆ ನೀಡಿದ ತಾಂತ್ರಿಕ ಶಿಫಾರಸ್ಸನ್ನು ಅಂಗೀಕರಿಸಿದ ರಾಜ್ಯ ಸರ್ಕಾರ ಕಟ್ಟಡ ಪುನನಿರ್ಮಾಣ ಕಾಮಗಾರಿಗಳಿಗೆ 87 ಕೋಟಿ ರೂ ಗಳಿಗೆ ಆಡಳಿತಾತ್ಮಕ ಅನುಮೋದನೆ ಹಾಗೂ 81 ಕೋಟಿ ರೂ. ತಾಂತ್ರಿಕ ಮಂಜೂರಾತಿ ನೀಡಿದೆ. ಮುಂದಿನ ಎರಡು ವರ್ಷಗಳಲ್ಲಿ ಕಟ್ಟಡ ನಿರ್ಮಾಣ ಮುಗಿಯಲಿದೆ.
ಉದ್ದೇಶಿತ ಕಟ್ಟಡದ ನೀಲ ನಕ್ಷೆ ಹಾಗೂ ಹಾಲಿ ಕಟ್ಟದ ಸ್ಥಳ ಸಮೀಕ್ಷೆ ಮಾಡಲಾಗಿದೆ. ವರದಿ ಅನ್ವಯ ಗಣ್ಯರ ಐಷಾರಾಮಿ ಕೊಠಡಿಗಳನ್ನು ಐಷಾರಾಮಿ ಕೊಠಡಿಗಳ ಸಂಖ್ಯೆ ನಾಲ್ಕರಿಂದ ಎರಡಕ್ಕೆ ಇಳಿಕೆ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚಿಸಿದ್ದಾರೆ.
ಕೊಠಡಿಗಳ ಸಂಖ್ಯೆ ಹೆಚ್ಚಳ
ಕರ್ನಾಟಕ ಭವನದಲ್ಲಿ ಕಚೇರಿಗಳ ಉಪಯೋಗಕ್ಕಾಗಿ ನಿಗದಿಪಡಿಸಿದ್ದ ಜಾಗೆ ಕಡಿತಮಾಡಿ, ಆ ಸ್ಥಳವನ್ನು ಬಳಸಿಕೊಂಡು ಐಷಾರಾಮಿ ಕೊಠಡಿಗಳ ಸಂಖ್ಯೆಯನ್ನು 14 ರಿಂದ 31ಕ್ಕೆ ಹಾಗೂ ಕೊಠಡಿಗಳ ಸಂಖ್ಯೆಯನ್ನು 12 ರಿಂದ 15ಕ್ಕೆ, ಹೀಗೆ ಒಟ್ಟಾರೆ ಕೊಠಡಿಗಳನ್ನು 30 ರಿಂದ 48ಕ್ಕೆ ಹೆಚ್ಚಿಸಲಾಗಿದೆ.
ಕರ್ನಾಟಕ ಭವನ-1 'ಕಾವೇರಿ' ಕಟ್ಟಡದ ಲೋವರ್ ಬೇಸ್ಮೆಂಟ್ ಹಾಗೂ ಅಪ್ಪರ್ ಬೇಸ್ಮೆಂಟ್ನಲ್ಲಿ ತಲಾ 2,335 ಚದುರ ಮೀಟರ್ ಪ್ರದೇಶವಿದೆ. ಬೇಸ್ಮೆಂಟ್ನಲ್ಲಿ ನಾಲ್ಕು ಗಾಲಿಯ 151 ವಾಹನಗಳು ಹಾಗೂ 107 ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶವಿದೆ. ಅಪ್ಪರ್ ಬೇಸ್ಮೆಂಟ್ನಲ್ಲಿ ವಾಹನ ಚಾಲಕರ ಕೊಠಡಿ, ಭ್ರದ್ರತಾ ಸಿಬ್ಬಂದಿಯ ವಿಶ್ರಾಂತಿ ಕೊಠಡಿ, ಲಾಂಡ್ರಿ ಇರಲಿದೆ.
ಅಲ್ಲದೆ, ಇದೇ ಕಟ್ಟಡದಲ್ಲಿ 1030 ಚದುರ ಮೀಟರ್ ಪ್ರದೇಶದ ನೆಲ ಮಹಡಿ ಮಾತ್ರವಲ್ಲದೆ, ಅದೇ ವಿಸ್ತೀರ್ಣದ ಆರು ಮಹಡಿಗಳು ಇರುತ್ತವೆ. ನೆಲಮಹಡಿಯಲ್ಲಿ ಸ್ವಾಗತ ಮತ್ತು ನಿರೀಕ್ಷಣಾ ಕೊಠಡಿ, ವೀಡಿಯೋ ಸಮ್ಮೇಳನ ಕೊಠಡಿ, ಅಡುಗೆ ವಸ್ತುಗಳ ಉಗ್ರಾಣ (ಪ್ಯಾಂಟ್ರಿ) , ಗಣ್ಯಾತಿಗಣ್ಯರ ವಿಶ್ರಾಂತಿ ಕೊಠಡಿ, ಭೋಜನಾಲಯ, ಸಭಾ ಕೊಠಡಿ, ಶ್ರವ್ಯ-ದೃಶ್ಯ ಕೊಠಡಿ, ಚರ್ಚಾ ಕೊಠಡಿ, ಭೋಜನಾಲಯ ಹಾಗೂ ಶೌಚಾಲಯಗಳಿರುತ್ತವೆ.
ಮೊದಲ ಮಹಡಿ
ಮೊದಲ ಮಹಡಿಯಲ್ಲಿ ಸಮನ್ವಯ ಶಾಖೆ, ಭದ್ರತಾ ಕೊಠಡಿ, ವಾಸ್ತವ್ಯ ಮತ್ತು ಉಗ್ರಾಣ ವಿಭಾಗದ ವ್ಯವಸ್ಥಾಪಕರ ಕೊಠಡಿ, ಸಹಾಯಕ ಕಾರ್ಯಪಲಕ ಅಭಿಯಂತರರ ಕೊಠಡಿ, ಲೆಕ್ಕಪತ್ರ ವಿಭಾಗ ಮತ್ತು ಕೊಠಡಿ, ಗಣಕ ನಿಯಂತ್ರಣ ಕೊಠಡಿ, ಆಡಳಿತ ವಿಭಾಗ, ಶಿಷ್ಠಾಚಾರ ಕಚೇರಿ, ತಾಂತ್ರಿಕ ವಿಭಾಗ, ವೈದ್ಯಕೀಯ ಸೇವಾ ಕೊಠಡಿ ಹಾಗೂ ಅಡುಗೆ ವಸ್ತುಗಳ ಉಗ್ರಾಣ (ಪ್ಯಾಂಟ್ರಿ) ಗೆ ಅವಕಾಶ ಕಲ್ಪಿಸಲಾಗಿದೆ.
ಎರಡನೇ ಮಹಡಿಯಲ್ಲಿ ನಿವಾಸಿ ಆಯುಕ್ತರು, ಅಪರ ನಿವಾಸಿ ಆಯುಕ್ತರು, ಮನೆ ವಾರ್ತೆ ವಿಭಾಗದ ಉಪ ನಿವಾಸಿ ಆಯುಕ್ತರು ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದ ಉಪ ನಿವಾಸಿ ಆಯುಕ್ತರು, ಸಹಾಯಕ ನಿವಾಸಿ ಆಯುಕ್ತರು ಹಾಗೂ ಬೆಂಬಲಿತ ಸಿಬ್ಬಂದಿಯ ಕಚೇರಿಗಳು ಇರುತ್ತವೆ. ಅಧಿಕಾರಿಗಳ ವಿಶ್ರಾಂತಿ ಗೃಹ, ಅಧಿಕಾರಿಗಳ ಭೋಜನಾಲಯ, ಮನರಂಜನಾ ತಾಣ ಹಾಗೂ ಅಡುಗೆ ವಸ್ತುಗಳ ಉಗ್ರಾಣ (ಪ್ಯಾಂಟ್ರಿ) ಅವಕಾಶ ಕಲ್ಪಿಸಲು ಯೋಜಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿಗಳ ಕೊಠಡಿ
ಮೂರನೇಮುಖ್ಯ ನ್ಯಾಯಮೂರ್ತಿಗಳ ಕೊಠಡಿ ಮಹಡಿಯಲ್ಲಿ , ಕಾನೂನು ಕೋಶ ಮತ್ತು ಸಂಸದರ ಕೋಶದ ಕಚೇರಿಗಳು, ವಿಶೇಷ ಮತ್ತು ಅಪರ ಪ್ರತಿನಿಧಿಗಳ ಕಚೇರಿಗಳು ಹಾಗೂ ಆಪ್ತ ಕಾರ್ಯದರ್ಶಿಗಳ ಕೊಠಡಿ, ಕಚೇರಿ ವಿಸ್ತೀರ್ಣ, ಗ್ರಂಥಾಲಯ, ಅತಿಥಿ ಗೃಹ, ವ್ಯಾಯಾಮ ಶಾಲೆ ಹಾಗೂ ಅಡುಗೆ ವಸ್ತುಗಳ ಉಗ್ರಾಣ (ಪ್ಯಾಂಟ್ರಿ) ವಿನ್ಯಾಸ ರೂಪಿಸಲಾಗಿದೆ.
ನಾಲ್ಕನೇ ಮಹಡಿಯಲ್ಲಿ ಗಣ್ಯರ ಕೊಠಡಿಗಳು, ಆರು ಐಷಾರಾಮಿ ಕೊಠಡಿಗಳು, ಯೋಗ ಕೇಂದ್ರ, ವ್ಯಾಯಾಮ ಶಾಲೆ ಹಾಗೂ ಅಡುಗೆ ವಸ್ತುಗಳ ಉಗ್ರಾಣ ( ಪ್ಯಾಂಟ್ರಿ ) ಇರುತ್ತವೆ. ಐದನೇ ಮಹಡಿಯಲ್ಲಿ ವಿವಿಐಪಿಗಳ ಕೊಠಡಿ ಮಲ್ಲಿಗೆ ಒಳಗೊಂಡಂತೆ ಮೂರು ಐಷಾರಾಮಿ ಕೊಠಡಿಗಳು ಇರಲಿವೆ. ಆರನೇ ಮಹಡಿಯಲ್ಲಿಯೂ ವಿವಿಐಪಿ ಕೊಠಡಿ ಸಂಪಿಗೆ ಒಳಗೊಂಡಂತೆ ಐದು ಐಷಾರಾಮಿ ಕೊಠಡಿಗಳು ಇರಲಿವೆ.