ರಾಷ್ಟ್ರಪತಿ ಚುನಾವಣೆಗೆ ಮೈಸೂರಿನ ಮಾರ್ಕರ್ ಪೆನ್!
ನವದೆಹಲಿ, ಜುಲೈ 17: ಇಂದು(ಜುಲೈ 17) ಬೆಳಗ್ಗೆ 10 ಗಂಟೆಯಿಂದ ನಡೆಯುತ್ತಿರುವ ರಾಷ್ಟ್ರಪತಿ ಚುನಾವಣೆಗೆ ಮತಪತ್ರದ ಮೇಲೆ ಬರೆಯುವುದಕ್ಕೆ ವಿಶೇಷ ಮಾರ್ಕರ್ ಪೆನ್ ಬಳಸಲಾಗುತ್ತಿದೆ.
ಯಾರೂ ಸಹ ತಮ್ಮ ಸ್ವಂತ ಪೆನ್ನಿನಿಂದ ಮತಪತ್ರದ ಮೇಲೆ ಬರೆಯವಂತಿಲ್ಲ. ಭಾರತೀಯ ಚುನಾವಣಾ ಆಯೋಗವೇ ಈ ವಿಶೇಷ ಪೆನ್ನನ್ನು ನೀಡಿದೆ. ಈ ಪೆನ್ನನ್ನು ಮೈಸೂರು ಪೇಂಟ್ ಮತ್ತು ವಾರ್ನಿಶ್ ಲಿಮಿಟೆಡ್ ತಯಾರಿಸಿ, ರಾಷ್ಟ್ರಪತಿ ಚುನಾವಣೆಗೆಂದು ಪೂರೈಸಿದೆ.
ಇಂದು ರಾಷ್ಟ್ರಪತಿ ಚುನಾವಣೆ: ವಿಧಾನಸೌಧದ ಕೊಠಡಿ 106ರಲ್ಲಿ ಮತದಾನ
ಮತದಾನದ ಕೋಣೆಗೆ ಸಂಸದರು ಮತ್ತು ಶಾಸಕರು ಪ್ರವೇಶಿಸುತ್ತಿದ್ದಂತೆಯೇ ಅವರ ಬಳಿ ಬೇರೆ ಪೆನ್ನುಗಳಿದ್ದರೆ ಅವನ್ನು ತೆಗೆದುಕೊಂಡು, ಅದರ ಬದಲಿಗೆ ಮಾರ್ಕರ್ ಪೆನ್ನನ್ನು ನೀಡಲಾಗುತ್ತದೆ. ನೇರಳೆ ಬಣ್ಣದ ಶಾಯಿಯ ಈ ಮಾರ್ಕರ್ ಮೂಲಕವೇ ಮತದಾರರು ಮತಚಲಾಯಿಸಬೇಕಾಗುತ್ತದೆ. ಮತಚಲಾಯಿಸಿದ ನಂತರ ಅವರ ಪೆನ್ನುಗಳನ್ನು ವಾಪಸ್ ನೀಡಿ, ಮಾರ್ಕರ್ ಅನ್ನು ಹಿಂಪಡೆಯಲಾಗುತ್ತದೆ.
ಜುಲೈ 17ಕ್ಕೆ ರಾಷ್ಟ್ರಪತಿ ಚುನಾವಣೆ, 20 ರಂದು ಮತ ಎಣಿಕೆ
ಅಕಸ್ಮಾತ್ ಯಾರಾದರೂ ತಮ್ಮ ಸ್ವಂತ ಪೆನ್ನಿನಿಂದ ಮತಚಲಾಯಿಸಿದ್ದರೆ ಆ ಮತ ಅಮಾನ್ಯವಾಗುತ್ತದೆ.
ಹಸಿರು, ಗುಲಾಬಿ ಬಣ್ಣದ ಮತಪತ್ರ
ಒಟ್ಟು 32 ಮತಕೇಂದ್ರಗಳನ್ನು ನಿರ್ಮಿಸಲಾಗಿದ್ದು, ಸಂಸತ್ತಿನ ರೂಂ ನಂ. 62 ರಲ್ಲಿ ಮತದಾನ ನಡೆಯುತ್ತಿದೆ. ಬ್ಯಾಲೆಟ್ ಪೇಫರ್ ಗಳು ಹಸಿರು ಹಾಗೂ ಗುಲಾಬಿ ಬಣ್ಣದಲ್ಲಿದ್ದು, ಹಸಿರು ಬಣ್ಣದ ಮತಪತ್ರ ಸಂಸದರಿಗೆ ಮತ್ತು ಗುಲಾಬಿ ಬಣ್ಣದ್ದು ಶಾಸಕರಿಗೆ. ಈ ಮತಪತ್ರದಲ್ಲಿ ಎರಡು ಕಾಲಂ ಇದ್ದು, ಒಂದು ಕಾಲಂ ನಲ್ಲಿ ಅಭ್ಯರ್ಥಿಯ ಹೆಸರು ಮತ್ತು ಇನ್ನೊಂದು ಕಾಲಂ ನಲ್ಲಿ ಮತ ಚಲಾಯಿಸುವುದು ಯಾರಿಗೆ ಎಂಬುದನ್ನು ಗುರುತು ಮಾಡಬೇಕು.
ಮತಪತ್ರದ ಭಾಷೆ
ಸಂಸದರು ಮತಚಲಾಯಿಸುವ ಮತಪತ್ರದಲ್ಲಿರುವ ವಿವರಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿರಲಿದ್ದು, ಶಾಸಕರು ಮತಚಲಾಯಿಸುವ ಮತಪತ್ರದಲ್ಲಿನ ವಿವರಗಳು ಇಂಗ್ಲಿಷ್ ಮತ್ತು ಆಯಾ ರಾಜ್ಯದ ವ್ಯಾವಹಾರಿಕ ಭಾಷೆಯಲ್ಲಿರಲಿವೆ.
ಗೌಪ್ಯತೆ ಕಾಪಾಡಲು
ಒಂದೇ ಶಾಯಿಯಿಂದ ಮತಚಲಾಯಿಸುವುದರಿಂದ ಚುವಾವಣೆಯಲ್ಲಿ ಗೌಪ್ಯತೆ ಕಾಯ್ದುಕೊಳ್ಳುವುದಕ್ಕೆ ಸಾಧ್ಯವಿದೆ. ಮಾತ್ರವಲ್ಲ ಇದರಿಂದ ಮತದಾನ ಏಕರೂಪವಾಗಿರುತ್ತದೆ.
ಯಾರಿಗೆ ಪ್ರಥಮ ಪ್ರಜೆಯ ಪಟ್ಟ?
ಎನ್ ಡಿಎ ಮೈತ್ರಿಕೂಟದಿಂದ ರಾಮ್ ನಾಥ್ ಕೋವಿಂದ್ ಮತ್ತು ಯುಪಿಎ ಮೈತ್ರಿಕೂಟದಿಂದ ಮೀರಾ ಕುಮಾರ್ ಚುನಾವಣೆಯ ಕಣದಲ್ಲಿದ್ದು, ಜುಲೈ 20 ರಂದು ಹೊರಬೀಳಲಿರುವ ಫಲಿತಾಂಶದಲ್ಲಿ ಪ್ರಥಮ ಪ್ರಜೆಯ ಗದ್ದುಗೆ ಯಾರ ಪಾರಾಗಲಿದೆ ಎಂಬುದು ತಿಳಿಯಲಿದೆ.