Breaking ಡಿಕೆ ಶಿವಕುಮಾರ್ಗೆ ಮತ್ತೆ ಕಹಿ: ಸದ್ಯಕ್ಕೆ ಜೈಲೇ ಗತಿ
ನವದೆಹಲಿ, ಸೆಪ್ಟೆಂಬರ್ 25: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಬುಧವಾರವೂ ಕಹಿ ಎದುರಾಗಿದೆ. 20 ದಿನಗಳಿಗೂ ಅಧಿಕ ಸಮಯದಿಮದ ವಿಚಾರಣೆ ಮತ್ತು ಬಂಧನ ಎದುರಿಸುತ್ತಿರುವ ಅವರು ತಿಹಾರ್ ಜೈಲಿನಲ್ಲಿಯೇ ಇರುವಂತಾಗಿದೆ. ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.
ಆ. 4ರಂದು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಿ ಸೆ. 3ರಂದು ಬಂಧನಕ್ಕೆ ಒಳಗಾದ ಡಿಕೆ ಶಿವಕುಮಾರ್ ಅವರ ಜಾಮೀನಿನ ಬಯಕೆಗೆ ಕೋರ್ಟ್ ತಣ್ಣೀರು ಸುರಿದಿದೆ. ಡಿಕೆ ಶಿವಕುಮಾರ್ ಅವರ ಬಿಡುಗಡೆಯಾಗಲಿದೆ ಎಂದು ಬೆಳಿಗ್ಗೆಯಿಂದಲೂ ಪೂಜೆ ಪ್ರಾರ್ಥನೆಗಳನ್ನು ಸಲ್ಲಿಸಿ ಕಾದಿದ್ದ ಅವರ ಅಭಿಮಾನಿಗಳಿಗೆ ಕೂಡ ತೀವ್ರ ನಿರಾಸೆಯಾಗಿದೆ.
Live: ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಜಾ
14 ದಿನಗಳ ಕಾಲ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಲಾಗಿತ್ತು. ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಬಳಿಕ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಸೆ 23ರಂದು ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಎರಡೂ ಕಡೆಯ ವಾದ ವಿವಾದಗಳನ್ನು ಆಲಿಸಿದ್ದ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್, ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿದ್ದರು.
ಒಂದೇ ಸಾಲಿನಲ್ಲಿ ತೀರ್ಪು ಪ್ರಕಟ
ರೋಸ್ ಅವೆನ್ಯೂ ಕೋರ್ಟ್ನಲ್ಲಿ ಬುಧವಾರ ಸಂಜೆ ಜಾಮೀನು ಅರ್ಜಿ ಕುರಿತಾದ ತೀರ್ಪನ್ನು ಒಂದೇ ಸಾಲಿನಲ್ಲಿ ಪ್ರಕಟಿಸಿದ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರು ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದರು.
ಮೇಲ್ಮನವಿಗೆ ಅವಕಾಶ
ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿರುವುದರಿಂದ ಡಿಕೆ ಶಿವಕುಮಾರ್ ಅವರು ದೆಹಲಿಯ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದು, ಅವರು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಆದರೆ ಅವರು ಅರ್ಜಿ ಸಲ್ಲಿಸಿದ ಬಳಿಕವೂ ಅದು ವಿಚಾರಣೆಗೆ ಬಂದು ತೀರ್ಪು ಹೊರಬೀಳುವವರೆಗೂ ಅವರು ಜೈಲಿನಲ್ಲಿ ಇರಬೇಕಾಗುತ್ತದೆ.
ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ
ಮೂಲಗಳ ಪ್ರಕಾರ ಡಿಕೆ ಶಿವಕುಮಾರ್ ಅವರು ಗುರುವಾರವೇ ದೆಹಲಿ ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಅನಾರೋಗ್ಯದ ಕಾರಣ ಅವರು ಜೈಲಿನ ಬದಲು ಆಸ್ಪತ್ರೆಗೆ ದಾಖಲಾಗುವ ಸಂಭವವೂ ಇದೆ. ಇಷ್ಟು ದಿನ ಚಿಕಿತ್ಸೆ ಪಡೆದ ಆರ್ಎಂಎಲ್ ಆಸ್ಪತ್ರೆಯಲ್ಲದೆ ಬೇರೆ ಆಸ್ಪತ್ರೆಗೂ ಅವರನ್ನು ದಾಖಲಿಸಬಹುದಾಗಿದೆ.
ಅಕ್ಟೋಬರ್ 1ರಂದು ಅವಧಿ ಮುಕ್ತಾಯ
ಡಿಕೆ ಶಿವಕುಮಾರ್ ಅವರ ನ್ಯಾಯಾಂಗ ಬಂಧನದ ಅವಧಿ ಅ. 1ರವರೆಗೂ ಇರಲಿದೆ. ಹೀಗಾಗಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ ಬಳಿಕ ಬೇಗನೆ ಅವರ ಪರ ಆದೇಶ ಹೊರಬಿದ್ದರೆ ಅವರು ಬಂಧನದಿಂದ ಮುಕ್ತಿ ಪಡೆಯಬಹುದು. ಇಲ್ಲದಿದ್ದರೆ, ಅ. ರಂದು ನ್ಯಾಯಾಂಗ ಬಂಧನ ಅವಧಿ ಮುಕ್ತಾಯಗೊಂಡು ಪುನಃ ವಿಚಾರಣೆ ನಡೆಯುವವರೆಗೂ ಜೈಲು ವಾಸ ಅನಿವಾರ್ಯವಾಗಲಿದೆ.