ಸಂಸತ್ನಲ್ಲಿ ಧಾರ್ಮಿಕ ಘೋಷಣೆಗಳಿಗೆ ಅವಕಾಶ ನೀಡೊಲ್ಲ: ಸ್ಪೀಕರ್ ಬಿರ್ಲಾ
ನವದೆಹಲಿ, ಜೂನ್ 20: ಸಂಸತ್ನಲ್ಲಿ ಧಾರ್ಮಿಕ ಘೋಷಣೆಗಳನ್ನು ಜಪಿಸುವುದಕ್ಕೆ ಮತ್ತೆ ಅವಕಾಶ ನೀಡುವುದಿಲ್ಲ ಎಂದು ಲೋಕಸಭೆಯ ನೂತನ ಸಭಾಧ್ಯಕ್ಷ ಓಂ ಬಿರ್ಲಾ ಹೇಳಿದ್ದಾರೆ.
ಹಂಗಾಮಿ ಸ್ಪೀಕರ್ ವೀರೇಂದ್ರ ಕುಮಾರ್ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಮತ್ತು ತೃಣಮೂಲ ಕಾಂಗ್ರೆಸ್ ಸಂಸದರು ಸೇರಿದಂತೆ ವಿರೋಧಪಕ್ಷದ ಮುಖಂಡರಿದ್ದ ಭಾಗದಿಂದ ಆಡಳಿತಪಕ್ಷದವರ ಘೋಷಣೆಗಳಿಗೆ ಪ್ರತಿಯಾಗಿ ಬಂದ ಘೋಷಣೆಗಳಿಗೆ ತಡೆಯೊಡ್ಡುವ ಮೂಲಕ ಸರಿಯಾದ ಕೆಲಸ ಮಾಡಿದ್ದರು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಓಂ ಬಿರ್ಲಾಗೆ ವಿಪಕ್ಷ ನಾಯಕ ರಂಜನ್ ಅಭಿನಂದಿಸಿದ ರೀತಿ ವಾಹ್!
ಆಡಳಿತ ಪಕ್ಷದವರ ಘೋಷಣೆಗಳಿಗೆ ಪ್ರತಿಯಾಗಿ ತೃಣಮೂಲ ಕಾಂಗ್ರೆಸ್ನ ಕೆಲವು ಸಂಸದರು ತಮ್ಮದೇ ಶೈಲಿಯಲ್ಲಿ ಘೋಷಣೆ ಕೂಗಿದ್ದರು.
ಸಂಸತ್ತು, ಘೋಷಣೆಗಳನ್ನು ಕೂಗಲು, ಫಲಕಗಳನ್ನು ಪ್ರದರ್ಶಿಸಲು ಅಥವಾ ಬಾವಿಗಿಳಿದು ಗದ್ದಲ ಎಬ್ಬಿಸಲು ಇರುವ ಸ್ಥಳವಲ್ಲ. ಅವರು ಪ್ರತಿಭಟನೆ ಮತ್ತು ಪ್ರದರ್ಶನಗಳನ್ನು ನಡೆಸಲು ಬೇರೆ ದಾರಿಯಿದೆ. ಜನರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಬೇಕಿದ್ದರೆ, ಯಾವುದಾದರೂ ಆರೋಪ ಮಾಡಬೇಕಿದ್ದರೆ ಅಥವಾ ಏನನ್ನಾದರೂ ಹೇಳಬೇಕಿದ್ದರೆ ಅವಕಾಶವಿದೆ. ಆದರೆ, ಗ್ಯಾಲರಿಗೆ ಬಂದು ಅದನ್ನು ಮಾಡುವಂತಿಲ್ಲ ಎಂದು ಬಿರ್ಲಾ ಹೇಳಿದ್ದಾರೆ.
17 ನೇ ಲೋಕಸಭಾ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆ, ಮೋದಿ ಅಭಿನಂದನೆ
ಈ ರೀತಿಯ ಘಟನೆ ಮತ್ತೆ ಮರುಕಳಿಸುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ನಿಯಮಗಳಿಗೆ ಅನುಗುಣವಾಗಿ ಸಂಸತ್ ಅಧಿವೇಶನ ನಡೆಸಲು ಪ್ರಯತ್ನಿಸುತ್ತೇವೆ. ಜೈ ಶ್ರೀರಾಮ್, ಜೈ ಭಾರತ್, ವಂದೇ ಮಾತರಂ ಮುಂತಾದ ಘೋಷಣೆಗಳು ಹಳೆಯ ವಿವಾದ. ಚರ್ಚೆಯ ವೇಳೆ ಅದು ವಿಭಿನ್ನ. ಪ್ರತಿ ಬಾರಿಯೂ ವಿಭಿನ್ನ ಸಂದರ್ಭವಿರುತ್ತದೆ. ಯಾವ ಸಂದರ್ಭದಲ್ಲಿ ಹೇಗೆ ಎಂಬುದನ್ನು ಸ್ಪೀಕರ್ ಸ್ಥಾನದಲ್ಲಿ ಕುಳಿತುಕೊಂಡಿರುವವರು ನಿರ್ಧರಿಸುತ್ತಾರೆ ಎಂದಿದ್ದರು.