ಕೇಂದ್ರದಿಂದ 'ಆಧುನಿಕ ದೇವಸ್ಥಾನಗಳ ನಾಶ': ಸೋನಿಯಾ ಗಾಂಧಿ ಕಿಡಿ
ನವದೆಹಲಿ, ಜುಲೈ 2: ತಮ್ಮ ಕ್ಷೇತ್ರವಾದ ರಾಯ್ ಬರೇಲಿಯಲ್ಲಿರುವ ಮಾಡರ್ನ್ ಕೋಚ್ ಫ್ಯಾಕ್ಟರಿಯನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಗುಪ್ತವಾಗಿ ಸಂಚು ನಡೆಸುತ್ತಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಆರೋಪಿಸಿದರು.
ಲೋಕಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ರೈಲ್ವೆ ಕೋಚ್ಗಳನ್ನು ತಯಾರಿಸುವ ಮಾಡರ್ನ್ ಕೋಚ್ ಫ್ಯಾಕ್ಟರಿಯನ್ನು ಸದ್ದಿಲ್ಲದೇ ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ ಫ್ಯಾಕ್ಟರಿಯ ಉದ್ಯೋಗಿಗಳು ಮತ್ತು ಅವರ ಕುಟುಂಬಗಳ ಬದುಕು ತೂಗುಯ್ಯಾಲೆಯಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಗಾಂಧಿಗಳು ಕ್ಷಮೆ ಕೋರಬೇಕು: ಕಾಂಗ್ರೆಸ್ನ ಮಾಜಿ ಪ್ರಧಾನಿ ಮೊಮ್ಮಗ ಆಗ್ರಹ
ಲೋಕಸಭೆಯ ಶೂನ್ಯ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಅವರು, ಖಾಸಗೀಕರಣವು ಸಾವಿರಾರು ಜನರು ನಿರುದ್ಯೋಗಿಗಳಾಗಲು ಕಾರಣವಾಗುತ್ತದೆ. ಅಲ್ಲದೆ, ಆ ಕಾರ್ಖಾನೆಯಲ್ಲಿ ಅಲ್ಲಿ ಸ್ಥಾಪಿಸಿದ ಉದ್ದೇಶಕ್ಕೂ ಇದು ವಿರುದ್ಧವಾಗಿದೆ ಎಂದು ವಿರೋಧ ವ್ಯಕ್ತಪಡಿಸಿದರು.
ಮಾಡರ್ನ್ ಕೋಚ್ ಫ್ಯಾಕ್ಟರಿಯನ್ನು ಅವರು ಪ್ರಯೋಗಕ್ಕೆ ಆಯ್ಕೆಮಾಡಿಕೊಂಡಿರುವುದು ನಿಜವಾದ ಆತಂಕದ ಸಂಗತಿ ಎಂದು ಹೇಳಿದರು.
ಅತ್ಯಾಧುನಿಕ ಕಾರ್ಖಾನೆ
ದೇಶದಲ್ಲಿನ ಉತ್ಪಾದನೆಯ ಚಟುವಟಿಕೆಯನ್ನು ಉತ್ತೇಜಿಸುವ ಸಲುವಾಗಿ ಯುಪಿಎ ಸರ್ಕಾರ ರಾಯ್ ಬರೇಲಿಯಲ್ಲಿ ಫ್ಯಾಕ್ಟರಿಯನ್ನು ನಿರ್ಮಿಸಿತ್ತು. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಕೋಚ್ಗಳನ್ನು ತಯಾರಿಸುವ ಅತ್ಯಂತ ಆಧುನಿಕ ಘಟಕ ಇದಾಗಿದೆ ಎಂದು ಸೋನಿಯಾ ಗಾಂಧಿ ತಿಳಿಸಿದರು.
ಉದ್ಯೋಗಿಗಳು ಮತ್ತು ಕುಟುಂಬಕ್ಕೆ ಆಪತ್ತು
ಇಲ್ಲಿನ ಉದ್ಯೋಗಿಗಳನ್ನು ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇದು ಉದ್ಯೋಗಿಗಳ ಮತ್ತು ಅವರನ್ನು ಅವಲಂಬಿಸಿರುವ ಕುಟುಂಬಗಳ ಭವಿಷ್ಯವನ್ನು ಆಪತ್ತಿಗೆ ತಳ್ಳಿರುವುದು ದುಃಖದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಮಾಡರ್ನ್ ಕೋಚ್ ಫ್ಯಾಕ್ಟರಿಯನ್ನು ಮತ್ತು ಇತರೆ ಸಾರ್ವಜನಿಕ ಉದ್ದಿಮೆಗಳನ್ನು ಉಳಿಸಬೇಕು ಮತ್ತು ಕಾರ್ಮಿಕರು ಹಾಗೂ ಅವರ ಕುಟುಂಬದವರನ್ನು ಗೌರವಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಸೋನಿಯಾ ಗಾಂಧಿ ಹೇಳಿದರು.
ಅಮೇಥಿ ಆಯ್ತು, ಈಗ ಸೋನಿಯಾ ಗಾಂಧಿ ರಾಯ್ ಬರೇಲಿ ಕ್ಷೇತ್ರದ ಮೇಲೆ ಬಿಜೆಪಿ ಕಣ್ಣು
ಪರಿಸ್ಥಿತಿ ರಹಸ್ಯವಾಗಿ ಉಳಿದಿಲ್ಲ
ಅಲ್ಲದೆ, ಎಚ್ಎಎಲ್, ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಸೇರಿದಂತೆ ಕೆಲವು ಸಾರ್ವಜನಿಕ ವಲಯದ ಸಂಸ್ಥೆಗಳ ಪರಿಸ್ಥಿತಿಯ ಕುರಿತು ಸಹ ಅವರು ಕಳವಳ ವ್ಯಕ್ತಪಡಿಸಿದರು.
ಈ ಸಂಸ್ಥೆಗಳ ಪರಿಸ್ಥಿತಿ ಗೋಪ್ಯವಾಗಿ ಉಳಿದಿಲ್ಲ. ಖಾಸಗೀಕರಣದಿಂದ ಅತಿ ಅಮೂಲ್ಯ ಆಸ್ತಿಗಳು ತೀರಾ ಕಡಿಮೆ ಬೆಲೆಗೆ ಕೆಲವು ಖಾಸಗಿ ಕೈಗಳ ಪಾಲಾಗುತ್ತದೆ. ಅಲ್ಲದೆ ಸಾವಿರಾರು ಮಂದಿ ನಿರುದ್ಯೋಗಿಗಳಾಗುತ್ತಾರೆ ಎಂದು ಆಕ್ಷೇಪಿಸಿದರು.
ದೇವಸ್ಥಾನಗಳು ಅಪಾಯದಲ್ಲಿ
ಸಾರ್ವಜನಿಕ ಉದ್ದಿಮೆಗಳು ಆಧುನಿಕ ಭಾರತದ ದೇವಸ್ಥಾನಗಳು ಎಂದು ಪಂಡಿತ್ ಜವಹರಲಾಲ್ ನೆಹರೂ ಹೇಳಿದ್ದರು. ಅಂತಹ ಹೆಚ್ಚಿನ ದೇವಸ್ಥಾನಗಳು ಇಂದು ಅಪಾಯದಲ್ಲಿ ಇರುವುದನ್ನು ನೋಡಿ ನೋವಾಗುತ್ತದೆ. ಲಾಭಗಳಿದ್ದರೂ ಅವುಗಳ ನೌಕರರಿಗೆ ಸೂಕ್ತ ಸಮಯಕ್ಕೆ ಸಂಬಳ ಸಿಗುತ್ತಿಲ್ಲ. ಕೆಲವು ಉದ್ಯಮಿಗಳಿಗೆ ಲಾಭ ಮಾಡಿಕೊಡುವ ಸಲುವಾಗಿ ಅವುಗಳನ್ನು ಸಂಕಷ್ಟಕ್ಕೆ ನೂಕಲಾಗಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದರು.