ಲಾಕ್ಡೌನ್: ಶುಕ್ರವಾರ ವಿರೋಧ ಪಕ್ಷಗಳ ಸಭೆ ಕರೆದ ಸೋನಿಯಾ ಗಾಂಧಿ
ದೆಹಲಿ, ಮೇ 19: ಕೊರೊನಾ ವೈರಸ್ ಲಾಕ್ಡೌನ್, ವಲಸೆ ಕಾರ್ಮಿಕರ ಸಂಕಷ್ಟ ಹಾಗೂ ಕಾರ್ಮಿಕರ ಕಾನೂನುಗಳಲ್ಲಿ ಬದಲಾವಣೆ ಕುರಿತಂತೆ ಚರ್ಚಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರೋಧ ಪಕ್ಷಗಳ ಸಭೆ ಕರೆದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದ್ದು, ಮಮತಾ ಬ್ಯಾನರ್ಜಿ, ಶರದ್ ಪವಾರ್, ಸ್ಟಾಲಿನ್ ಸೇರಿದಂತೆ ಸುಮಾರು ಹದಿನೈದು ಪಕ್ಷದ ಮುಖಂಡರು ಈ ಚರ್ಚೆಯಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ವಲಸೆ ಕಾರ್ಮಿಕರ ಸಂಕಷ್ಟ: ಪ್ರಿಯಾಂಕಾ ಗಾಂಧಿ ಮನವಿಗೆ 'ಓಕೆ' ಎಂದ ಸಿಎಂ ಯೋಗಿ
ಲಾಕ್ಡೌನ್ನಿಂದ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಸೋನಿಯಾ ಗಾಂಧಿ ಇತರೆ ಪಕ್ಷಗಳ ಜೊತೆ ಚರ್ಚಿಸಲು ಮುಂದಾಗಿದ್ದಾರೆ.
ಕೊರೊನಾ ವೈರಸ್ ಭೀತಿಯಿಂದ ಕೇಂದ್ರ ಸರ್ಕಾರ ದೇಶದಲ್ಲಿ ನಾಲ್ಕನೇ ಹಂತದ ಲಾಕ್ಡೌನ್ ಜಾರಿ ಮಾಡಿದೆ. ಮೇ 31ರವರೆಗೂ ಲಾಕ್ಡೌನ್ ಇರಲಿದೆ. ಈ ನಡುವೆ ಸಾವಿರಾರು ಕಾರ್ಮಿಕರು ಊರುಗಳಿಗೆ ತೆರಳಲು ಹೆದ್ದಾರಿಗಳಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಹೆಚ್ಚು ಅಪಘಾತಗಳು ಸಂಭವಿಸುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವೂ ಕೇಂದ್ರ ವಿರುದ್ಧ ಟೀಕೆ ಮಾಡಿತ್ತು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ನಾಯಕರು ವಲಸೆ ಕಾರ್ಮಿಕರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಅವರಿಗೆ ಸಾರಿಗೆ ವ್ಯವಸ್ಥೆ ಮಾಡಿಕೊಡಿ, ಊಟದ ವ್ಯವಸ್ಥೆ ಮಾಡಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.
ವಲಸೆ ಕಾರ್ಮಿಕರನ್ನು ಭೇಟಿ ಮಾಡಿದ ಮಾತನಾಡಿದ್ದ ರಾಹುಲ್ ಗಾಂಧಿ ಬಗ್ಗೆ ವಿತ್ತೆ ಸಚಿವೆ ನಿರ್ಮಲಾ ಸೀತಾರಾಮನ್ ಕಾಲೆಳೆದಿದ್ದರು. ಇದೆಲ್ಲವೂ ನಾಟಕ ಎಂದು ಟೀಕಿಸಿದ್ದರು.