ಕಲಾಪ ಇಲ್ಲದಾಗಲೂ ರಾಹುಲ್, ಸೋನಿಯಾ ಇಡಿಗೆ ಸಹಕರಿಸಿಲ್ಲ- ಜೋಶಿ
ನವದೆಹಲಿ ಆಗಸ್ಟ್ 05: ಅಧಿವೇಶನ ಇಲ್ಲದ ಸಂದರ್ಭಗಳಲ್ಲಿ ಸಹ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಜಾರಿ ನಿರ್ದೇಶನಾಲಯದ ತನಿಖೆಗೆ ಸಹಕರಿಸಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಲ್ಹಾದ್ ಜೋಶಿ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ತಿರುಗೇಟು ನೀಡಿದರು.
ಸದ್ಯ ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದೆ. ಅಧಿವೇಶನ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ ಸೋನಿಯಾ ಗಾಂಧಿ ಅವರನ್ನು ವಿಚಾರಣೆಗೆ ಕರೆದರೆ, ನಾವು ಕಲಾಪಗಳಲ್ಲಿ ಹೇಗೆ ಪಾಲ್ಗೊಳ್ಳಬೇಕು ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಧ್ವನಿ ಎತ್ತಿದ್ದರು. ಅದಕ್ಕೆ ಪ್ರತಿಯಾಗಿ ಉತ್ತರಿಸಿದ ಪ್ರಲ್ಹಾದ್ ಜೋಶಿ ಅವರು, ಅಧಿವೇಶನ ಇಲ್ಲದ ಸಂದರ್ಭಗಳಲ್ಲಿ ಸಹ ಕಾಂಗ್ರೆಸ್ ನಾಯಕರು ಇಡಿ ತನಿಖೆಗೆ ಸಹಕರಿಸಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಅಧಿವೇಶನ ಇಲ್ಲದ ವೇಳೆ ಇಡಿ ಅಧಿಕಾರಿಗಳ ವಿಚಾರಣೆಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ಸಹಕರಿಸಿದ್ದಾರೆಯೇ ? ಎಂದು ಕೈನಾಯಕರನ್ನು ಜೋಶಿ ಪ್ರಶ್ನಿಸಿದರು. ಅಸಹಕಾರ ಮೂಲಕ ತನಿಖೆ ನಡೆಯದಂತೆ ತಡೆಯಬೇಕು, ತನಿಖೆಗೆ ಅಡ್ಡಿ ಪಡಿಸಬೇಕು ಎಂಬ ಉದ್ದೇಶ ಕಾಂಗ್ರೆಸ್ ಹೊಂದಿದೆ ಎಂದು ಅವರು ದೂರಿದರು.
ಮಲ್ಲಿಕಾರ್ಜುನ್ ಖರ್ಗೆ ಇಡಿಗೆ ಸಹಕರಿಸಲಿ
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ, ಹಗರಣ ಅವ್ಯವಹಾರ ಪ್ರಕರಣ ಕುರಿತಂತೆ ಜಾರಿ ನಿರ್ದೇಶನಾಲಯದ ತನಿಖೆಗೆ ತಡೆ ಕೋರಿ ರಾಹುಲ್, ಸೋನಿಯಾ ಗಾಂಧಿ ನ್ಯಾಯಾಲಗಳು ಮೆಟ್ಟಿಲು ಏರಿದ್ದರು. ಆದರೆ ಆಸೆಯಂತೆ ಅವರಿಗೆ ತಡೆಯಾಜ್ಞೆ ಸಿಗಲಿಲ್ಲ. ತನಿಖೆಯನ್ನು ತಡೆಯಲು ಸುಪ್ರೀಂ ಕೋರ್ಟ್ ನಿರಾಕರಿಸಿರುವಾಗ ಇನ್ನು ಇಡಿ ತನಿಖೆಯಾಗಲಿ, ವಿಚಾರಣೆಯನ್ನಾಗಲಿ ನಿಲ್ಲಿಸಲು ಸಾಧ್ಯವೇ? ಎಂದು ಜೋಶಿ ಪ್ರಶ್ನಿಸಿದರು.
ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಯಂಗ್ ಇಂಡಿಯಾ ಕಂಪನಿಯ ಸಿಇಒ ಆಗಿದ್ದಾರೆ. ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈ ಕಂಪನಿಯದ್ದು ಪ್ರಮುಖ ಪಾತ್ರ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನ ಇಡಿ ತನಿಖೆಗೆ ಒಳಪಡಿಸಿದ್ದು, ಖರ್ಗೆ ಅವರು ತನಿಖೆಗೆ ಸಹಕರಿಸಬೇಕು ಎಂದು ಕುಟುಕಿದರು.
ಕಾಂಗ್ರೆಸ್ಗೆ ನ್ಯಾಯಾಂಗ್ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ
ಅಧಿವೇಶನ ನಡೆಯುವಾಗ ಇಡಿ ಸಮನ್ಸ ನೀಡಿದರೆ ಹೇಗೆ? ಎಂದು ಕೇಳುವ ಮಲ್ಲಿಕಾರ್ಜುನ ಖರ್ಗೆ ಅವರು, ಅಧಿವೇಶನ ಇಲ್ಲದ ವೇಳೆ ತನಿಖೆಗೆ ಎಷ್ಟು ಸಹಕಾರ ನೀಡಿದ್ದೀರಾ? ಸೋನಿಯಾ ಗಾಂಧಿಗೆ ಸಮನ್ಸ್ ನೀಡಿದ ವೇಳೇ ಸದನದ ಕಲಾಪಕ್ಕೆ ಅಡ್ಡಿಪಡಿಸಿ, ಸದನ ನಡೆಯದಂತೆ ಮಾಡಿದವರು ಕಾಂಗ್ರೆಸ್ ನಾಯಕರು. ಕಲಾಪ ನಡೆಯಲು ಖರ್ಗೆ ಅವರು ಎಷ್ಟು ಸಹಕಾರ ನೀಡಿದ್ದರೆ ಆ ಬಗ್ಗೆ ವಿವರಿಸಲಿ ಎಂದು ಹೇಳಿದರು.
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದವರಿಂದ ನಾವು ಪ್ರಜಾಪ್ರಭುತ್ವದ ಪಾಠ ಕಲಿಯಬೇಕಾಗಿಲ್ಲ. ಕಾಂಗ್ರೆಸ್ ತನ್ನ ಪಕ್ಷದ ರಚನೆಯಲ್ಲೇ ಪ್ರದೇಶದ ಎಲ್ಲಾ ನ್ಯಾಯಾಲಯಗಳು ಕಾಂಗ್ರೆಸ್ನ ಮನವಿಯನ್ನು ತಿರಸ್ಕರಿಸಿದೆ, ಆದರೂ ಕಾಂಗ್ರೆಸ್ ನ್ಯಾಯಾಂಗ ವ್ಯವಸ್ಥೆಯನ್ನೇ ನಂಬುತ್ತಿಲ್ಲ. ಇದು ಪ್ರಜಾಪ್ರಭುತ್ವದ ವಿರೋಧಿ ಧೋರಣೆ ಅಲ್ಲವೇ ಎಂದು ಜೋಶಿ ಕಾಂಗ್ರೆಸ್ ವಿರುದ್ಧ ದೂರಿದರು.