ಸೊಹ್ರಾಬುದ್ದಿನ್ ಪ್ರಕರಣಕ್ಕೆ ಹೊಸ ತಿರುವು ನೀಡಲಿರುವ ಸಾಕ್ಷಿಯ ಹೇಳಿಕೆ
ಮುಂಬೈ, ಡಿಸೆಂಬರ್ 20: "ಕೆಲವು ರಾಜಕಾರಣಿಗಳು ಮತ್ತು ಅಧಿಕಾರಿಗಳ ಹೆಸರು ಹೇಳಲು ನನಗೆ ಆಗ ಭಯವಾಗಿತ್ತು. ಆದ್ದರಿಂದ ನನ್ನನ್ನು ಈಗ ಮತ್ತೊಮ್ಮೆ ವಿಚಾರಣೆ ಮಾಡಿ" ಎಂದು ಸೊಹ್ರಾಬುದ್ದಿನ್ ಎನ್ ಕೌಂಟರ್ ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬರು ಹೇಳಿದ್ದಾರೆ.
ಸೊಹ್ರಾಬುದ್ದಿನ್ ನ ಸಹಚರರಾಗಿದ್ದ ಆಜಮ್ ಖಾನ್ ತನ್ನನ್ನು ಮರುವಿಚಾರಣೆ ನಡೆಸುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನಾನು ಸಾಕ್ಷಿ ಹೇಳುವ ಇಪ್ಪತ್ತು ದಿನಗಳ ಮೊದಲಿನಿಂದಲೂ ನನಗೆ ತೀರಾ ಕಿರುಕುಳ ನೀಡಲಾಗುತ್ತಿತ್ತು. ಆದ್ದರಿಂದ ನಾನು ಈ ಪ್ರಕರಣದ ಕುರಿತಂತೆ ಕೆಲವು ಐಪಿಎಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳ ಹೆಸರನ್ನು ಹೇಳಲು ಹೆದರಿದೆ ಎಂದು ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಗುಜರಾತ್ ಪೊಲೀಸ್ ಅಧಿಕಾರಿಗಳ ವೈಷಮ್ಯ, ಸೊಹ್ರಾಬುದ್ದೀನ್ ಎನ್ ಕೌಂಟರ್
ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 21 ರಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಲಿದ್ದು, ಈ ಸಮಯದಲ್ಲಿ ಆಜಮ್ ಖಾನ್ ಹೇಳಿಕೆ ತೀವ್ರ ಕುತೂಹಲ ಕೆರಳಿಸಿದೆ.
ನನಗೆ ಬೆದರಿಕೆ ಇದೆ
ನನ್ನ ವಿಚಾರಣೆ ನಡೆಯುವ ಸಂದರ್ಭದಲ್ಲಿ ನನ್ನ ಮೇಲೆ ಸಾಕಷ್ಟು ಒತ್ತಡವಿತ್ತು, ಸೊಹ್ರಾಬುದ್ದಿನ್, ಪ್ರಜಾಪತಿಯಂತೆ ನನ್ನನ್ನೂ ಸಾಯಿಸುವ ಬೆದರಿಕೆ ಇದ್ದಿದ್ದರಿಂದ ನಾನು ಆಗ ಎಲ್ಲರ ಹೆಸರನ್ನೂ ಹೇಳಲು ಸಾಧ್ಯವಾಗಿರಲಿಲ್ಲ. ನನ್ನನ್ನು ಮತ್ತೊಮ್ಮೆ ವಿಚಾರಣೆ ನಡೆಸಿ. ನನಗೆ ರಕ್ಷಣೆ ನೀಡಿ ಎಂದು ಆಜಮ್ ಖಾನ್ ಕೇಳಿಕೊಂಡಿದ್ದಾರೆ.
ತನಿಖೆ ಸರಿಯಾಗಿ ನಡೆದಿಲ್ಲ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾಗಿ ವಿಚಾರಣೆ ನಡೆದಿಲ್ಲ. ಒಟ್ಟು 500 ಸಾಕ್ಷಿಗಳನ್ನು ಪಟ್ಟಿ ಮಾಡಲಾಗಿತ್ತು. ಆದರೆ ವಿಚಾರಣೆ ನಡೆಸಿದ್ದು ಮಾತ್ರ 210 ಸಾಕ್ಷಿಗಳನ್ನು ಎಂದು ಖಾನ್ ಹೇಳಿದ್ದಾರೆ.
ಸೊಹ್ರಾಬುದ್ದಿನ್, ಪ್ರಜಾಪತಿ ಎನ್ಕೌಂಟರ್ ನಕಲಿ : ಸಿಬಿಐ ವಾದ ಅಂತಿಮ
ಇವರನ್ನು ಏಕೆ ವಿಚಾರಣೆ ಮಾಡಿಲ್ಲ?
ಐಪಿಎಸ್ ಅಧಿಕಾರಿ ರಜನೀಶ್ ರೈ, ಮಹೇಂದ್ರ ಜಾಲಾ ಮುಂತಾದವರು ಪ್ರಮುಖ ಸಾಕ್ಷಿಗಳಾಗಿದ್ದರು. ಆದರೆ ನ್ಯಾಯಾಲಯವೇಕೆ ಇವರ ವಿಚಾರಣೆ ನಡೆಸಿಲ್ಲ ಎಂದು ಖಾನ್ ಪ್ರಶ್ನಿಸಿದರು.
ಪತ್ನಿಗೂ ಬೆದರಿಕೆ
ನಾನು ಸತ್ಯಾಂಶವನ್ನು ಮುಚ್ಚಿಡುವಂತೆ ಮತ್ತು ಕೆಲವರ ಹೆಸರು ಹೇಳದಂತೆ ನನ್ನ ಮೇಲೆ ಬಹಳ ಒತ್ತಡವಿತ್ತು. ಮಾತ್ರವಲ್ಲ, ನನ್ನ ಪತ್ನಿಗೂ ಬೆದರಿಕೆ ಒಡ್ಡಲಾಗಿತ್ತು. ಸೊಹ್ರಾಬುದ್ದಿನ್ ಮತ್ತು ಪ್ರಜಾಪತಿಯಂತೆ ನನ್ನನ್ನೂ ಮುಗಿಸುವ ಬೆದರಿಕೆ ಒಡ್ಡಲಾಗುತ್ತಿತ್ತು. ಈ ಭಯದಿಂದಲೇ ನಾನು ಕೆಲವರ ಹೆಸರನ್ನು ಹೇಳಲಿಲ್ಲ. ದಯವಿಟ್ಟು ನನ್ನನ್ನು ಮತ್ತೊಮ್ಮೆ ವಿಚಾರಣೆಗೊಳಪಡಿಸಿ ಎಂದು ಖಾನ್ ಮನವಿಮಾಡಿಕೊಂಡಿದ್ದಾರೆ.
ಸೊಹ್ರಾಬುದ್ದೀನ್ ಎನ್ ಕೌಂಟರ್: ಅನುಮಾನ ಮೂಡಿಸಿದ ಇನ್ಸ್ಪೆಕ್ಟರ್ ಹೇಳಿಕೆ