ದೆಹಲಿ ಹಿಂಸಾಚಾರಿಗಳಿಗೆ ಪಿಸ್ತೂಲ್ ಸಿಕ್ಕಿದ್ದು ಹೇಗೆ? ಸ್ಫೋಟಕ ಮಾಹಿತಿ
ನವದೆಹಲಿ, ಫೆಬ್ರವರಿ.27: ರಾಷ್ಟ್ರ ರಾಜಧಾನಿ ಹಿಂಸಾಚಾರ ಪ್ರಕರಣವನ್ನು ಕ್ರೈಂ ಬ್ರ್ಯಾಂಚ್ ನ ಎರಡು ವಿಶೇಷ ತನಿಖಾ ತಂಡ(ಎಸ್ಐಟಿ)ಕ್ಕೆ ವಹಿಸಲಾಗಿದ್ದು, ಅಧಿಕಾರಿಗಳು ಚುರುಕಿನ ವಿಚಾರಣೆ ನಡೆಸಿದ್ದಾರೆ. ಈಗಾಗಲೇ 48 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, 514 ಮಂದಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಫೆಬ್ರವರಿ.23ರಿಂದ ಆರಂಭಗೊಂಡ ಹಿಂಸಾಚಾರದ ಹಿಂದೆ ದೆಹಲಿಯ ಜನರಿಗಿಂತ ಹೊರಗಿನವರ ಕೈವಾಡ ಇರುವ ಬಗ್ಗೆ ಎಸ್ಐಟಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಹಿಂಸಾಚಾರದ ಹಿಂದಿರುವ ಕೈಗಳು ಯಾವುವು ಎಂಬುದನ್ನು ಪತ್ತೆ ಮಾಡಲು ಎಲ್ಲ ಆಯಾಮಗಳಲ್ಲಿ ಎಸ್ಐಟಿ ತನಿಖೆ ನಡೆಸುತ್ತಿದೆ.
"ದೆಹಲಿಯ ನಡುರಸ್ತೆಯಲ್ಲಿ ಗನ್ ಹಿಡಿದು ಗುಂಡು ಹಾರಿಸಿದವನ ಬಂಧನವಾಗಿಲ್ಲ"
ಸಿಎಎ ಪರ ಮತ್ತು ವಿರೋಧಿ ಗುಂಪುಗಳ ನಡುವಿನ ಘರ್ಷಣೆ ವೇಳೆ ಕೆಲವರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರೆ, ಫೆಬ್ರವರಿ.25ರಂದು ಕೆಲವರು ಕೈಯಲ್ಲಿ ಪಿಸ್ತೂಲ್ ಹಿಡಿದು ಫೈರಿಂಗ್ ನಡೆಸಿದರು. ಇದನ್ನು ಗಮನದಲ್ಲಿ ಇಟ್ಟುಕೊಂಡು ಜನರ ಕೈಗೆ ಅಷ್ಟು ಸಲೀಸಾಗಿ ಶಸ್ತ್ರಾಸ್ತ್ರಗಳು ಸಿಕ್ಕಿದ್ದು ಹೇಗೆ ಎಂಬುದರ ಮಾಹಿತಯನ್ನು ಎಸ್ಐಟಿ ತಂಡ ಕಲೆ ಹಾಕುತ್ತಿದೆ.
3 ದಶಕಗಳ ಬಳಿಕ ಹಿಂಸಾಚಾರಕ್ಕೆ 38 ಮಂದಿ ಬಲಿ
ರಾಷ್ಟ್ರ ರಾಜಧಾನಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿಚಾರದಲ್ಲಿ ನಡೆದ ಹಿಂಸಾಚಾರಕ್ಕೆ 38 ಮಂದಿ ಬಲಿಯಾಗಿದ್ದಾರೆ. ಇದು ಕಳೆದ ಮೂರು ದಶಕಗಳಲ್ಲಿಯೇ ಅತ್ಯಂತ ಘೋರ ಘಟನೆ ಎಂದು ಹೇಳಲಾಗುತ್ತಿದೆ. 400ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದರೆ, ನೂರಾರು ಮಂದಿ ಮನೆ-ಅಂಗಡಿಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ.
ನೆರೆರಾಜ್ಯದಿಂದ ದೆಹಲಿಗೆ ಗನ್ ಹಿಡಿದು ಬಂದ ಗೂಂಡಾಗಳು?
ದೆಹಲಿಯಲ್ಲಿ ನಡೆದ ಹಿಂಸಾಚಾರದ ಹಿಂದೆ ಹೊರಗಿನಿಂದ ಬಂದವರ ಕೈವಾಡಿವಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಅನುಮಾನ ವ್ಯಕ್ತಪಡಿಸಿದ್ದರು. ಇದೊಂದು ಆಯಾಮದಲ್ಲೂ ವಿಚಾರಣೆ ನಡೆಸಿದ ತನಿಖಾ ತಂಡಕ್ಕೆ ಸ್ಫೋಟಕ ಮಾಹಿತಿ ಸಿಕ್ಕಿದೆ. ನೆರೆಯ ಹರಿಯಾಣ ಮತ್ತು ಉತ್ತರ ಪ್ರದೇಶದ ಲೋನಿ, ಘಜಿಯಾಬಾದ್, ಬಾಗ್ ಪತ್ ಪ್ರದೇಶದಿಂದ ಗನ್ ಹೊಂದಿರುವ ಗೂಂಡಾಗಳು ಆಗಮಿಸಿದ್ದರು ಎಂದು ಹೇಳಲಾಗುತ್ತಿದೆ.
ದೆಹಲಿ ಹಿಂಸಾಚಾರ: ಮೃತರಿಗೆ 10, ಮನೆ-ಅಂಗಡಿ ಹಾನಿಗೆ 5 ಲಕ್ಷ ಪರಿಹಾರ
ಪೊಲೀಸರ ಕೈಗೆ ಸಿಕ್ಕಿಬಿದ್ದವರು ದೆಹಲಿಯವರೇ ಅಲ್ಲ!
ಇನ್ನು, ದೆಹಲಿಯಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿದ್ದ, ಮನೆ ಮತ್ತು ಅಂಗಡಿಗಳ ಮೇಲೆ ಕಲ್ಲುತೂರಾಟ ನಡೆಸಿರುವ ಶಂಕೆ ಮೇಲೆ ಈವರೆಗೂ 120ಕ್ಕೂ ಹೆಚ್ಚು ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಬಹುತೇಕರು ದೆಹಲಿಯ ಮೂಲದವರೇ ಅಲ್ಲ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಇನ್ನೊಂದು ಆಘಾತಕಾರಿ ಅಂಶವೆಂದರೆ ಶಾಹಿನ್ ಬಾಗ್ ಮತ್ತು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳದಲ್ಲಿ ದಂಗೆ ಎಬ್ಬಿಸಲಿಕ್ಕಾಗಿಯೇ ಬಂದಿರುವುದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈಶಾನ್ಯ ದೆಹಲಿ ಆಗುತ್ತಿದೆಯಾ ಅಕ್ರಮ ಶಸ್ತ್ರಾಸ್ತ್ರಗಳ ಕೇಂದ್ರ?
ದೆಹಲಿಯ ಈಶಾನ್ಯ ರಾಜ್ಯವು ಅಕ್ರಮ ಶಸ್ತ್ರಾಸ್ತ್ರಗಳ ಕೇಂದ್ರವಾಗುತ್ತಿದೆಯಾ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದೆ. ಏಕೆಂದರೆ ಪೊಲೀಸರು ಹಿಂಸಾಚಾರಕ್ಕೆ ಸಂಬಂಧಿಸಿದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಬಹುತೇಕ ಜನರು ಪಿಸ್ತೂಲ್ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹರಿಯಾಣ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗದಿಂದ ಈ ಅಕ್ರಮ ಪಿಸ್ತೂಲ್ ಗಳನ್ನು ತೆಗೆದುಕೊಂಡು ಬರಲಾಗುತ್ತಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಬಿಹಾರದ ಮಂಗೇರ್ ಮತ್ತು ಮಧ್ಯಪ್ರದೇಶದ ಖರ್ಗೋನ್ ಮತ್ತು ಬರ್ವಾನಿ ಸೇರಿದಂತೆ ಹಲವೆಡೆ ಅಕ್ರಮ ಪಿಸ್ತೂಲ್ ತಯಾರಿಕಾ ಕೇಂದ್ರಗಳಿವೆ. ಈ ಕೇಂದ್ರಗಳು ದೆಹಲಿಯ ಈಶಾನ್ಯ ಭಾಗಕ್ಕೆ ಸಮೀಪವಾಗಿದ್ದು, ಅಲ್ಲಿಂದ ಪಿಸ್ತೂಲ್ ಗಳನ್ನು ತರಿಸಿಕೊಳ್ಳಲಾಗುತ್ತಿದೆಯಾ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಪಿಸ್ತೂಲ್ 10 ಸಾವಿರ, ಕಂಟ್ರಿ ಪಿಸ್ತೂಲ್ ಗೆ 1,500 ರೂಪಾಯಿ!
ದೆಹಲಿ ಮತ್ತು ನೋಯ್ಡಾ ಪ್ರದೇಶದಲ್ಲಿ ಇರುವ ಕ್ರಿಮಿನಲ್ ಗಳಿಗೆ ಅತ್ಯಂತ ಕಡಿಮೆ ಬೆಲೆಗೆ ಪಿಸ್ತೂಲ್ ಗಳು ಸಿಗುತ್ತಿವೆ. ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಪಿಸ್ತೂಲ್ ತಯಾರಿಕೆಯ ಕಚ್ಚಾವಸ್ತುಗಳು ಬರುತ್ತವೆ. ಮೀರತ್ ನಲ್ಲಿಯೇ ಸಿದ್ಧಗೊಳ್ಳುವ ಪಿಸ್ತೂಲ್ ಗಳು ಈಶಾನ್ಯ ದೆಹಲಿ ಮತ್ತು ನೋಯ್ಡಾ ಪ್ರದೇಶದಲ್ಲಿನ ಗೂಂಡಾಗಳಿಗೆ ಕೇವಲ 10 ಸಾವಿರ ರೂಪಾಯಿಗೆ ಸಿಗುತ್ತದೆ. ಇನ್ನು, 1,500 ರೂಪಾಯಿ ನೀಡಿದರೆ ಕಂಟ್ರಿ ಪಿಸ್ತೂಲ್ ಸಿಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಕ್ರಮವಾಗಿ ಪಿಸ್ತೂಲ್ ತಯಾರಿಸುತ್ತಿದ್ದ ಇಬ್ಬರ ಬಂಧನ
ಕಳೆದ ತಿಂಗಳಷ್ಟೇ ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಿತು. ಈ ವೇಳೆಯಲ್ಲಿ ಉತ್ತರ ಪ್ರದೇಶದ ಮೀರತ್ ನಲ್ಲಿ ಇರುವ ಅಕ್ರಮ ಪಿಸ್ತೂಲ್ ತಯಾರಿಕಾ ಕಾರ್ಖಾನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಮೀರತ್ ಕಾರ್ಖಾನೆಯಲ್ಲಿ ತಯಾರಿಸಿದ ಪಿಸ್ತೂಲ್ ಗಳನ್ನು ದೆಹಲಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕೂಡಾ ಬಂಧಿಸಲಾಗಿತ್ತು. ಇನ್ನು, ದಾಳಿ ವೇಳೆ 60 ಸೆಮಿ-ಆಟೋಮೆಟಿಕ್ ಪಿಸ್ತೂಲ್ ಮತ್ತು ಮದ್ದು-ಗುಂಡುಗಳನ್ನು ವಶಕ್ಕೆ ಪಡೆದ ಪೊಲೀಸರು ಕಾರ್ಖಾನೆಗೆ ಬೀಗ ಜಡಿದಿದ್ದರು.
3 ಸಾವಿರದ ಪಿಸ್ತೂಲ್, 10 ರಿಂದ 35 ಸಾವಿರಕ್ಕೆ ಮಾರಾಟ
ಇಬ್ಬರು ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ 3 ಸಾವಿರ ರೂಪಾಯಿಗೆ ಖರೀದಿಸಿದ ಪಿಸ್ತೂಲ್ ನ್ನು 10 ರಿಂದ 35 ಸಾವಿರ ರೂಪಾಯಿಗೆ ಮಾರಾಟ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ವಿಶೇಷ ಪಡೆಯ ಡಿಸಿಪಿ ಪ್ರಮೋದ್ ಕುಶ್ವಾಲಾ ತಿಳಿಸಿದ್ದರು. ಇದರ ಜೊತೆಗೆ ಇತ್ತೀಚಿಗಷ್ಟೇ ಬಂಧಿಸಿದ ಗ್ಯಾಂಗ್ ನಿಂದ 30 ಪಿಸ್ತೂಲ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವೆಲ್ಲ ಮಧ್ಯಪ್ರದೇಶದ ಬರ್ವಾನಿಯಲ್ಲಿ ತಯಾರಿಸಿದ್ದು ಎಂದು ತಿಳಿದು ಬಂದಿದೆ.
ಹಿಂಸಾಚಾರಗಳ ಕೈಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು
ದೆಹಲಿಯಲ್ಲಿ ಹಿಂಸಾಚಾರ ನಡೆಸಿದ ದುಷ್ಕರ್ಮಿಗಳು ಪೊಲೀಸರು ಎಂಬ ಭಯವಿಲ್ಲದೇ ಮನಸೋಯಿಚ್ಛೆ ಗುಂಡಿನ ದಾಳಿ ನಡೆಸಿದ್ದರು. ನಾಲ್ವರು ಚೂರಿ ಇರಿತದಿಂದ ಮೃತಪಟ್ಟಿದ್ದರೆ, 20ಕ್ಕೂ ಹೆಚ್ಚು ಮಂದಿ ಗುಂಡೇಟಿನಿಂದ ಗಾಯಗೊಂಡು ಮೃತಪಟ್ಟಿದ್ದರು. ಕನಿಷ್ಠ 10 ಮಂದಿ ಫೈರಿಂಗ್ ವೇಳೆ ಸ್ಥಳದಲ್ಲೇ ಮೃತಪಟ್ಟಿದ್ದರು ಎನ್ನಲಾಗಿದೆ. ಇನ್ನು, ಹಿಂಸಾಚಾರಕ್ಕೆ ದುಷ್ಕರ್ಮಿಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿದ್ದರು ಎಂದು ತಿಳಿದು ಬಂದಿದೆ.