ಏಕ-ಬಳಕೆ ಪ್ಲಾಸ್ಟಿಕ್ ನಿಷೇಧ, ರೈಲಿನಲ್ಲಿ ನೀರಿನ ಬಾಟಲಿ ಹಿಂದಿರುಗಿಸಿ
ನವದೆಹಲಿ, ಆಗಸ್ಟ್ 21: ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ ಅಕ್ಟೋಬರ್ 2ರಿಂದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಷೇಧ ಹೇರುವಂತೆ ಭಾರತೀಯ ರೈಲ್ವೆಯು ಸೂಚನೆ ನೀಡಿದೆ.
ಹಾಗೆಯೇ ಪ್ರಯಾಣಿಕರ ಬಳಿ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸುವಂತೆಯೂ ತಿಳಿಸಲಾಗಿದೆ.50 ಮೈಕ್ರಾನ್ಗಿಂತ ಕಡಿಮೆ ದಪ್ಪವಿರುವ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗುತ್ತಿದೆ.
ಬೆಂಗಳೂರಲ್ಲಿ ಸೆ.1 ರಿಂದ ಪ್ಲಾಸ್ಟಿಕ್ ನಿಷೇಧ; ಬಳಸಿದರೆ ದಂಡ
ಪ್ಲಾಸ್ಟಿಕ್ ತ್ಯಾಜ್ಯದ ಉತ್ಪಾದನೆ ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಪ್ಲಾಸ್ಟಿಕ್ ಮುಕ್ತ ರೈಲ್ವೆ ಕ್ರಮವನ್ನು ಜಾರಿಗೆ ತರಲು ಸಂಬಂಧ ಪಟ್ಟ ವಿಭಾಗಗಳಿಗೆ ಸಾಕಷ್ಟು ಕಾಲಾವಕಾಶ ನೀಡಲಾಗುವುದು.
ಜೊತೆಗೆ ಪ್ಲಾಸ್ಟಿಕ್ ಬಳಕೆಯನ್ನು ಕಡಿತಗೊಳಿಸಲು ಅಕ್ಟೋಬರ್ 2 ರಂದು ಪ್ರತಿಜ್ಞೆಯನ್ನು ನೀಡಬೇಕೆಂದು ರೈಲ್ವೆ ಸಚಿವಾಲಯ ತನ್ನ ರೈಲ್ವೆ ಘಟಕಗಳಿಗೆ ಸೂಚನೆ ನೀಡಿದೆ. ಇನ್ನು ಪ್ಲಾಸಿಕ್ ನಿಷೇಧದ ಕುರಿತಾಗಿ ರೈಲ್ವೆ ಬಳಕೆದಾರರಲ್ಲಿ ಜಾಗೃತಿ ಮೂಡಿಸಲು ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಗಳನ್ನು ಹಮ್ಮಿಕೊಳ್ಳಲಿದೆ ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ.
ಈಗ ಸುತ್ತೋಲೆ ಮೂಲಕ ಸೂಚನೆಯನ್ನು ಹೊರಡಿಸಿದ್ದು, ಅದನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎನ್ನಲಾಗಿದೆ.ಈ ನಿಯಮದಿಂದಾಗಿ ರೈಲ್ವೆ ಮಾರಾಟಗಾರರು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ಗಳನ್ನು ಸ್ಥಗಿತಗೊಳಿಸಬೇಕು, ಮರು ಬಳಕೆ ಮಾಡಬಹುದಾದ ಚೀಲಗಳನ್ನು ಬಳಸಬೇಕಾಗುತ್ತದೆ.
ಇನ್ನೊಂದೆಡೆಗೆ ಈಗ ಐಆರ್ಸಿಟಿಸಿ ಪ್ಲಾಸ್ಟಿಕ್ ಕುಡಿಯುವ ನೀರಿನ ಬಾಟಲಿಗಳನ್ನು ಹಿಂದಿರುಗಿಸುವ ಮತ್ತು ಪ್ಲಾಸ್ಟಿಕ್ ಬಾಟಲ್ ಪುಡಿಮಾಡುವ ಯಂತ್ರಗಳನ್ನು ತ್ವರಿತವಾಗಿ ಒದಗಿಸುವ ಕ್ರಮಕ್ಕೆ ಮುಂದಾಗಿದೆ.