ಸಿಂಘು ಗಡಿ ಹತ್ಯೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ
ಸಿಂಘು (ನವದೆಹಲಿ), ಅಕ್ಟೋಬರ್ 15: ಸಿಂಘು ಗಡಿ ಹತ್ಯೆಯನ್ನು ಖಂಡಿಸಿದ ರೈತರು ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ರೈತರ ಪ್ರತಿಭಟನಾ ಸ್ಥಳವಾದ ದೆಹಲಿಯಿಂದ 30 ಕಿಮೀ ದೂರದಲ್ಲಿರುವ ಹರಿಯಾಣದ ಸೋನಿಪತ್ನಲ್ಲಿ ಕೈ ಕತ್ತರಿಸಿದ ವ್ಯಕ್ತಿಯ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಶೀಘ್ರವೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಆರೋಪಿಗಳ ಬಂಧನಕ್ಕೆ ರೈತರ ಪಟ್ಟು: ಸಂಯುಕ್ತ ಕಿಸಾನ್ ಮೋರ್ಚಾ(SKM) ಸಂಘಟನೆ ಈ ಭೀಕರ ಹತ್ಯೆಯನ್ನು ಖಂಡಿಸಿದೆ. ಜೊತೆಗೆ ಲಖ್ಬೀರ್ ಅಥವಾ ನಿಹಾಂಗ್ ಗುಂಪಿಗೆ ಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ. "SKM ಯಾವುದೇ ಧಾರ್ಮಿಕ ಪಠ್ಯ ಅಥವಾ ಚಿಹ್ನೆಯ ಪವಿತ್ರತೆಗೆ ವಿರುದ್ಧವಾಗಿಲ್ಲ. ಆದರೆ, SKM ಯಾರ ಕೈಗೂ ಕಾನೂನನ್ನು ತೆಗೆದುಕೊಳ್ಳುವ ಹಕ್ಕನ್ನು ನೀಡುವುದಿಲ್ಲ. ಕಾನೂನಿನ ಪ್ರಕಾರ ಅಪರಾಧಿಗಳನ್ನು ಶಿಕ್ಷಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ," ಎಂದು ಎಸ್ಕೆಎಂ ಹೇಳಿದೆ. ಮಾತ್ರವಲ್ಲದೇ ಈ ಕೃತ್ಯದ ಕಾರಣೀಕರ್ತರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಹರಿಯಾಣದಲ್ಲಿ ಪ್ರಕರಣ ದಾಖಲು
''ಈಗಾಗಲೇ ಹರಿಯಾಣ ಪೊಲೀಸರು 302/34 ಐಪಿಸಿ (ಭಾರತೀಯ ದಂಡ ಸಂಹಿತೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಜೊತೆಗೆ ವಿಧಿವಿಜ್ಞಾನ ತಂಡವು ಅಪರಾಧದ ಸ್ಥಳವನ್ನು ಪರಿಶೀಲಿಸಿದೆ. ಇತ್ತ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ನಮ್ಮಲ್ಲಿ ಕೆಲವು ಶಂಕಿತ ಹೆಸರುಗಳಿವೆ ಶೀಘ್ರದಲ್ಲೇ ಅವರ ವಿಚಾರಣೆ ನಡೆಯಲಿದೆ,'' ಎಂದು ಹಿರಿಯ ಹರಿಯಾಣ ಪೊಲೀಸ್ ಅಧಿಕಾರಿ ಸಂದೀಪ್ ಖಿರ್ವಾರ್ ಹೇಳಿದ್ದಾರೆ.
ಇಂದು ಬೆಳಗ್ಗೆ ಆಗಿದ್ದೇನು?
ಇಂದು ಬೆಳಂಬೆಳಿಗ್ಗೆ ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನಾ ರೈತರನ್ನು ಬೆಚ್ಚಿ ಬೀಳಿಸಿದೆ. ಜೊತೆಗೆ ಈ ಕೃತ್ಯದ ಹೊಣೆಯನ್ನು ನಿಹಾಂಗ್ ಗುಂಪು ಹೊತ್ತುಕೊಂಡಿದೆ. ಪ್ರತಿಭಟನಾ ನಿರತ ರೈತರ ಸಂಯುಕ್ತ ಕಿಸಾನ್ ಮೋರ್ಚಾ ಶುಕ್ರವಾರ ಸಿಂಘು ಗಡಿಯಲ್ಲಿ ನಡೆದ ಕ್ರೂರ ಹತ್ಯೆಯ ಹೊಣೆಯನ್ನು ನಿಹಾಂಗ್ ಗುಂಪು ಹೊತ್ತುಕೊಂಡಿದೆ ಎಂದು ಹೇಳಿದೆ.
ದೆಹಲಿಯ ಸಿಂಘು ಗಡಿಯಲ್ಲಿ ಲಖಬೀರ್ ಸಿಂಗ್ ಎಂಬ 35 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇಂದು ಬೆಳಿಗ್ಗೆ ಅವರ ಕೈ ಕತ್ತರಿಸಿದ ಮೃತದೇಹ ಪ್ರತಿಭಟನಾ ನಿರತ ರೈತರ ಮುಖ್ಯ ವೇದಿಕೆ ಬಳಿ ಬ್ಯಾರಿಕೇಡ್ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹತ್ಯೆಯನ್ನು ನಿಹಾಂಗ್ ಗಳು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆಯಲ್ಲಿ ಹೇಳಿದೆ.
ಲಖಬೀರ್ ಸಿಂಗ್ ಯಾರು?
ಲಖಬೀರ್ ಸಿಂಗ್ ಮೂರು ದಿನಗಳ ಹಿಂದೆ ಸಿಂಘು ಗಡಿಗೆ ಬಂದಿದ್ದರು. ದೆಹಲಿ ಗಡಿಗೆ ಹತ್ತಿರವಿರುವ ಸಿಂಘು ಬಳಿ ನಿಹಾಂಗ್ ಕ್ಯಾಂಪ್ನಲ್ಲಿ ತಂಗಿದ್ದರು. ಲಖಬೀರ್ ಸಿಂಗ್ ಸಿಹಾಂಗ್ ಸಿಖ್ಖರಲ್ಲಿ ಒಬ್ಬರು. ಇವರು ತಮ್ಮ ಬಳಿ ಸರ್ಬಲೋಹ್ ಗ್ರಂಥವನ್ನು ಹೊಂದಿದ್ದರು. ಈ ಗ್ರಂಥವನ್ನು ಅವರು ಅಪವಿತ್ರಗೊಳಿಸಿದ್ದಾರೆಂದು ಆರೋಪಿಸಿ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಇಂದು ಮುಂಜಾನೆ 3 ಗಂಟೆಗೆ ಆತನ ಕೈಯನ್ನು ಕತ್ತರಿಸಿ ಹಲ್ಲೆ ಮಾಡಲಾಗಿದೆ. ಆತನ ಮೇಲೆ ಬರ್ಬರವಾಗಿ ಹಲ್ಲೆ ಮಾಡಲಾಗಿದೆ. ಆತ ಪ್ರಜ್ಞೆ ಕಳೆದುಕೊಂಡಾಗ ಆತನ ದೇಹವನ್ನು ಬ್ಯಾರಿಕೇಡ್ಗೆ ಕಟ್ಟಲಾಗಿದೆ. ಮುಂಜಾನೆ 5 ಗಂಟೆ ಸುಮಾರಿಗೆ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಘಟನೆಯ ಬಗ್ಗೆ ಸ್ಥಳೀಯ ರೈತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಸ್ಥಳದಲ್ಲಿ ಅಧಿಕ ಸಂಖ್ಯೆಯಲ್ಲಿ ಜನ ನೆರೆದಿದ್ದರು. ಘಟನಾ ಸ್ಥಳದಲ್ಲಿ ಪ್ರತಿಭಟನಾನಿರತರು ಜಮಾಯಿಸಿದ್ದರು.
ನಿಹಾಂಗ್ ಗುಂಪು
ನಿಹಾಂಗ್ ಎಂಬುದು ಸಿಖ್ ತೀವ್ರವಾದಿ ಹೋರಾಟಗಾರರ ಗುಂಪು. ನೀಲಿ ನಿಲುವಂಗಿ, ಉಕ್ಕಿನ ಕೋಟ್ ತೊಡುವ ಇವರು ಸದಾ ತಮ್ಮ ಬಳಿ ಕತ್ತಿ ಇಟ್ಟುಕೊಂಡಿರುತ್ತಾರೆ. ಅಲಂಕೃತ ಪೇಟಗಳನ್ನು ಧರಿಸಿರುತ್ತಾರೆ. ನಿಹಾಂಗ್ ಭಾರತದಲ್ಲಿ ಹುಟ್ಟಿಕೊಂಡ ಸಶಸ್ತ್ರ ಸಿಖ್ ಯೋಧರ ಪಡೆ. ಈ ನಿಹಾಂಗ್ಗಳು ಫತೇಹ್ ಸಿಂಗ್, ಗುರು ಹರಗೋಬಿಂದ್ ಆರಂಭಿಸಿದ "ಅಕಾಲಿ" ಯಿಂದ ಹುಟ್ಟಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಸಂಯುಕ್ತ ಕಿಸಾನ್ ಮೋರ್ಚಾ , ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಆಂದೋಲನವನ್ನು ಮುನ್ನಡೆಸುತ್ತಿರುವ 40 ಕ್ಕೂ ಹೆಚ್ಚು ರೈತ ಸಂಘಗಳ ಒಂದು ಸಂಘಟನೆಯಾಗಿದ್ದು ನಿಹಾಂಗ್ಗಳು (ಶಸ್ತ್ರಗಳನ್ನು ಹೊಂದಿರುವ ಸಿಖ್ ಗುಂಪು) 35 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು. ರೈತನರ ಒಂದು ಕೈಯನ್ನು ಮಣಿಕಟ್ಟಿನಿಂದ ಕತ್ತರಿಸಲಾಗಿದೆ.